ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಮಲ್ಪೆ ಬಂದರಿನಲ್ಲಿ ಕಾರ್ಮಿಕ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಒಪ್ಪಿಕೊಳ್ಳುವಂತಹದ್ದಲ್ಲ, ಆಕೆ ಮೀನು ಕಳವು ಮಾಡಿದ್ದರೆ ನೇರವಾಗಿ ಹಿಡಿದು ಪೋಲಿಸರಿಗೆ ಕೊಡಬಹುದಿತ್ತು. ಈಗ ಆರೋಪಿಗಳ ಬಂಧನದ ವಿರುದ್ಧ ಪ್ರತಿಭಟನೆ ಮಾಡಿದರೂ ಪ್ರಕರಣ ಹಿಂಪಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಒಮ್ಮೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೆ ಅದು ನ್ಯಾಯಾಲಯದಲ್ಲಿ ತೀರ್ಮಾನ ಆಗಬೇಕು. ಮುಂದಿನ ದಿನಗಳಲ್ಲಿ ಇಂತಹ ಅಮಾನುಷ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದರು.
ಮಲ್ಪೆ ಬಂದರಿನಲ್ಲಿ ಮೀನು ಕಳ್ಳತನದ ಪ್ರಕರಣ ಹೆಚ್ಚು ನಡೆಯುತ್ತಿದೆ ಎಂಬ ಆರೋಪವಿದೆ. ಈ ಬಗ್ಗೆ ಬಂದರು ನಿರ್ವಹಣೆಯಲ್ಲಿ ಸಂಬಂಧಿಸಿದ ಇಲಾಖೆಗಳು ಸಮರ್ಪಕವಾಗಿ ಮಾಡಬೇಕು. ಸಿಸಿ ಕ್ಯಾಮರ ಅಳವಡಿಸಬೇಕು ಎಂದರು.ಶಾಸಕರಿಗೆ ಹನಿಟ್ರಾಪ್?:
ರಾಜ್ಯದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕೆಲವು ನಾಯಕರ ಹನಿಟ್ರ್ಯಾಪ್ ಬಗ್ಗೆ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆಂದು ಸರ್ಕಾರ ಹೇಳಿದ್ದು, ಅಗತ್ಯವಿದ್ದವರಿಗೆ ಭದ್ರತೆ ಕೊಡುವುದಾಗಿಯೂ ಸಿಎಂ ಭರವಸೆ ನೀಡಿದ್ದಾರೆ. ಈ ಬಗ್ಗೆ ವಿಪಕ್ಷಗಳು ಗದ್ದಲ ಮಾಡುವುದಕ್ಕಿಂತ ಯಾರು ಹನಿಟ್ರಾಪ್ ಮಾಡಿದ್ದಾರೆ ಎಂದು ಗೊತ್ತಿದ್ದರೆ ಹೇಳಲಿ ಎಂದವರು ಹೇಳಿದರು.ನನಗೆ ನಮ್ಮ ಶಾಸಕತ್ವದ ಕಾಲ ನೆನಪಾಗುತ್ತದೆ. ಅದೊಂದು ಎಂತಹ ರಾಜಕೀಯ ಕಾಲ ಇತ್ತು, ಈಗ ಆಗಿರುವ ಬದಲಾವಣೆ ನೋಡುವಾಗ ಬೇಸರವಾಗುತ್ತದೆ. ಜನರು ತಮ್ಮ ಪ್ರತಿನಿಧಿಗಳ ಆಯ್ಕೆ ಮಾಡುವಾಗ ಜಾಗೃತೆ ಮಾಡಬೇಕು. ಟ್ರಾಪ್ ಮಾಡಿದವರದ್ದು ತಪ್ಪಾ ? ಟ್ರ್ಯಾಪ್ ಆದವರದ್ದು ತಪ್ಪಾ ? ಜನತೆ ಜಾಗೃತರಾಗಬೇಕು ಎಂದಭಿಪ್ರಾಯಪಟ್ಟರು.
ಶಾಸಕರಿಂದ ದಾಂದಲೆ!:ಸಭೆಯಲ್ಲಿ ಸ್ಪೀಕರ್ ಕೂತಿದ್ದಾಗ ಶಾಸಕರು ವೇದಿಕೆ ಹತ್ತುವುದು ದೊಡ್ಡ ತಪ್ಪು. ಸ್ಪೀಕರ್ ಅವರದ್ದು ಸದನದ ಉನ್ನತ ಸ್ಥಾನ, ಅವರ ಪೀಠಕ್ಕೆ ಹೋಗಬಾರದು. ಸದನದಲ್ಲಿ ಕಾನೂನು ರಕ್ಷಣೆ ಮಾಡದವರು ಹೊರಗೆ ಯಾವ ಕಾನೂನು ರಕ್ಷಣೆ ಮಾಡುತ್ತಾರೆ ? ಬೇರೆಯವರಿಗೆ ಏನು ಕಾನೂನು ರಚಿಸುತ್ತಾರೆ ಎಂಬುದು ಪ್ರಶ್ನೆ, ಆ ಕುರ್ಚಿಗೆ ಒಂದು ಘನತೆ ಇಲ್ಲವೇ ? ಎಂದು ಹೆಗ್ಡೆ ಕಳವಳ ವ್ಯಕ್ತಪಡಿಸಿದರು.
ಶಾಸಕರಿಗೆ ಹೆಗ್ಡೆ ಸಲಹೆ:ಕರಾವಳಿಯಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದಿರುವ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಗ್ಡೆ ಅವರು, ಅನುದಾನಗಳು ಬರುವುದು ಶಾಸಕರಿಗೆ. ಹೀಗಾಗಿ ಅವರು ಅಧಿಕಾರಿಗಳ ಸಭೆ ನಡೆಸಿ ಕೆಲಸ ಮಾಡಿಸಬೇಕು. ನಾನು ಪಕ್ಷೇತರನಾಗಿಯೂ ಕೆಲಸ ಮಾಡಿದ್ದೇನೆ. ಈಗ ಶಾಸಕರಿಗೆ ಕೆಲಸ ಮಾಡಲು ಸಾಧ್ಯ ಆಗದ ಪರಿಸ್ಥಿತಿ ಇಲ್ಲ. ವಿರೋಧ ಪಕ್ಷದವರು ಸರಕಾರವನ್ನು ದೂರುವುದು ಸ್ವಾಭಾವಿಕ. ತಾಲೂಕು ಕಚೇರಿಗಳಲ್ಲಿ ಶಾಸಕರು ಅಧಿಕಾರಿಗಳ ಸಭೆ ಕರೆದರೆ, ಜನರ ಒಂದಷ್ಟು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಸಲಹೆ ನೀಡಿದರು.