ಸರ್ಕಾರದ ಹಠಾತ್‌ ಗೊತ್ತುವಳಿಯಿಂದ ಹೈಡ್ರಾಮಾ ತೆರಿಗೆ ಅನ್ಯಾಯ: ಕೇಂದ್ರ ವಿರುದ್ಧ ಅಸೆಂಬ್ಲಿ ನಿರ್ಣಯ

| Published : Feb 23 2024, 01:46 AM IST

ಸರ್ಕಾರದ ಹಠಾತ್‌ ಗೊತ್ತುವಳಿಯಿಂದ ಹೈಡ್ರಾಮಾ ತೆರಿಗೆ ಅನ್ಯಾಯ: ಕೇಂದ್ರ ವಿರುದ್ಧ ಅಸೆಂಬ್ಲಿ ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಸದಸ್ಯರು ಕೆಂಡವಾಗಿ ಗೊತ್ತುವಳಿ ಪ್ರತಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕಲಾಪಗಳ ಪಟ್ಟಿಯಲ್ಲಿ ಇಲ್ಲದ ವಿಷಯ ಮಂಡಿಸಿದ್ದಕ್ಕೆ ಸಿಟ್ಟು ಹೊರಹಾಕಿ ಬಿಜೆಪಿ ಗದ್ದಲದ ನಡುವೆಯೂ ನಿರ್ಣಯ ಧ್ವನಿಮತದಿಂದ ಅಂಗೀಕಾರ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ, ವಿಧಾನಸಭೆ

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಉಂಟಾಗಿರುವ ಆರ್ಥಿಕ ನಷ್ಟ ಮತ್ತು ಅನ್ಯಾಯವನ್ನು ಖಂಡಿಸಿ ಹಾಗೂ ಈ ರೀತಿಯ ಯಾವುದೇ ಅನ್ಯಾಯ ಮಾಡದಂತೆ ಒತ್ತಾಯಿಸಿ ರಾಜ್ಯ ಸರ್ಕಾರ ಸದನದಲ್ಲಿ ಗುರುವಾರ ಏಕಾಏಕಿ ನಿರ್ಣಯ ಮಂಡಿಸಿ ಅಂಗೀಕಾರ ಪಡೆದಿದೆ,

ಸರ್ಕಾರದ ಈ ನಡೆಯಿಂದ ಆಕ್ರೋಶಗೊಂಡ ಪ್ರತಿಪಕ್ಷ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಕ್ಯಾರೆ ಎನ್ನಲಿಲ್ಲ.

ಗುರುವಾರದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಈ ನಿರ್ಣಯದ ವಿಷಯ ಇರಲಿಲ್ಲ. ಸಂಜೆ ಪೂರಕ ಕಾರ್ಯಕಲಾಪಗಳ ಪಟ್ಟಿಯೊಂದಿಗೆ ಈ ನಿರ್ಣಯ ಮಂಡಿಸಲು ಸ್ಪೀಕರ್‌ ಯು.ಟಿ.ಖಾದರ್‌ ಸರ್ಕಾರಕ್ಕೆ ಅವಕಾಶ ನೀಡಿದರು. ಇದರಿಂದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಈ ಸಂಬಂಧದ ಅಧಿಕೃತ ನಿರ್ಣಯವನ್ನು ಮಂಡಿಸಿದರು.

ಸರ್ಕಾರದ ಈ ನಿಲುವಿಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿದಂತೆ ಬಿಜೆಪಿಯ ಎಲ್ಲ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವಿರೋಧದ ನಡುವೆಯೇ ಸಚಿವರು ನಿರ್ಣಯವನ್ನು ಓದಲಾರಂಭಿಸಿದರು. ಇದರಿಂದ ಕೆರಳಿ ಕೆಂಡವಾದ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ನಿರ್ಣಯದ ಪ್ರತಿಗಳನ್ನು ಹರಿದು ಹಾಕಿ ತಮ್ಮ ಸಿಟ್ಟು ಹೊರಹಾಕಿದರು. ಅಲ್ಲದೆ, ಕಾರ್ಯಕಲಾಪಗಳ ಪಟ್ಟಿಯಲ್ಲಿ ಇಲ್ಲದ ವಿಷಯವನ್ನು ಯಾವುದೇ ಮಾಹಿತಿ ನೀಡದೆ ತರಲು ಹೇಗೆ ಅವಕಾಶ ನೀಡಿದಿರಿ ಎಂದು ಸಭಾಧ್ಯಕ್ಷರ ಪೀಠದ ಮುಂದೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಇದು ಕದ್ದು ಮುಚ್ಚಿ ನಿರ್ಣಯ ತಂದ ಹೇಡಿ ಸರ್ಕಾರ, ದೇಶದ್ರೋಹಿ ಕಾಂಗ್ರೆಸ್‌, ಆಡಳಿತ ನಡೆಸಲು ಯೋಗ್ಯತೆ ಇಲ್ಲದಿದ್ದರೆ ಬಿಟ್ಟು ಹೋಗಿ ಎಂದು ಕಿಡಿ ಕಾರಿದರು.ಈ ಪ್ರತಿಭಟನೆ, ಗದ್ದಲ, ಕೋಲಾಹಲದ ನಡುವೆಯೇ ಸಚಿವ ಎಚ್‌.ಕೆ.ಪಾಟೀಲ್‌ ಪೂರ್ಣ ನಿರ್ಣಯವನ್ನು ಓದಿ, ಸರ್ವಾನುಮತದಿಂದ ಇದನ್ನು ಅಂಗೀಕರಿಸುವಂತೆ ಪ್ರಸ್ತಾವನೆ ಮಂಡಿಸಿದರು. ಬಳಿಕ ಸ್ಪೀಕರ್‌ ಯು.ಟಿ.ಖಾದರ್‌ ನಿರ್ಣಯವನ್ನು ಸದನದ ಮತಕ್ಕೆ ಹಾಕಿದಾಗ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.ಇದರ ಬೆನ್ನಲ್ಲೇ ರೈತರ ಎಲ್ಲಾ ಬೆಳಗೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಶಾಸಕ ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಮತ್ತೊಂದು ನಿರ್ಣಯವನ್ನೂ ಮಂಡಿಸಿ ಅನುಮೋದನೆ ಪಡೆಯಲಾಯಿತು. ಬಳಿಕ ಸ್ಪೀಕರ್‌ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.ಸದನ ಮುಂದೂಡಿದ ಬಳಿಕ ಸ್ಪೀಕರ್‌ ಯು.ಟಿ.ಖಾದರ್‌ ತಮ್ಮ ಕಚೇರಿಯಲ್ಲಿ ಆಡಳಿತದ ಕೆಲ ಸಚಿವರು ಮತ್ತು ಪ್ರತಿಪಕ್ಷ ನಾಯಕರು ಹಾಗೂ ಕೆಲ ಪ್ರಮುಖ ಸದಸ್ಯರೊಂದಿಗೆ ಸಂಧಾನಕ್ಕೆ ಪ್ರಯತ್ನ ನಡೆಸಿದರೂ ಫಲ ನೀಡಲಿಲ್ಲ.----

-ಬಾಕ್ಸ್‌-ನಿರ್ಣಯದಲ್ಲಿರುವ ಪ್ರಮುಖಾಂಶಗಳೇನು?ಕಳೆದ ಒಂದು ದಶಕದಿಂದ ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಹಣಕಾಸು ಆಯೋಗಗಳು ಶಿಫಾರಸ್ಸು ಮಾಡಿದ ಅನುದಾನ ಒದಗಿಸುವಲ್ಲಿ, ಬರ ಪರಿಹಾರಕ್ಕೆ ಮಾನದಂಡಗಳ ಪ್ರಕಾರ ಕೇಂದ್ರದ ಪಾಲನ್ನು ನೀಡುವಲ್ಲಿ, ಅಭಿವೃದ್ಧಿ ಯೋಜನೆಗಳನ್ನು ಯಾವುದೇ ತಾರತಮ್ಯವಿಲ್ಲದೇ ಹಂಚಿಕೆ ಮಾಡುವಲ್ಲಿ ಹಣಕಾಸು ಹಂಚಿಕೆಯ ಪ್ರತಿಯೊಂದು ಆಯಾಮದಲ್ಲೂ ಪಕ್ಷಪಾತ ಮಾಡುತ್ತಿರುವ ಅನೇಕ ನಿದರ್ಶನಗಳು ಕರ್ನಾಟಕ ಜನತೆಯ ಗಮನಕ್ಕೆ ಬಂದಿದೆ. ಅಭಿವೃದ್ಧಿ ವಂಚಿತ ರಾಜ್ಯಗಳಿಗೆ ಹೆಚ್ಚಿನ ಅನುದಾನ ದೊರಕಬೇಕೆಂಬ ಕಲ್ಪನೆಯ ಜೊತೆಗೆ ಅತ್ಯುತ್ತಮ ಪ್ರಗತಿ ಸಾಧಿಸಿರುವ ರಾಜ್ಯಗಳಿಗೆ ಅನ್ಯಾಯವನ್ನು ಮಾಡಬಾರದು ಎಂಬ ಕನಿಷ್ಠ ನೈಸರ್ಗಿಕ ನ್ಯಾಯದ ತತ್ವಗಳನ್ನು ಕೂಡ ಕೇಂದ್ರ ಸರ್ಕಾರ ಪಾಲಿಸುತ್ತಿಲ್ಲವೆಂಬುದು ಕರ್ನಾಟಕದಂತಹ ಪ್ರಗತಿಪರ ರಾಜ್ಯಗಳಿಗೆ ಕೊಡಲಿ ಪೆಟ್ಟು ಹಾಕಿದಂತಾಗುತ್ತಿದೆ. ಕರ್ನಾಟಕದಂತಹ ರಾಜ್ಯಕ್ಕೆ ಈ ಮೊದಲು ಶೇ. 4.713 ರಷ್ಟು 14ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ತೆರಿಗೆ ಹಂಚಿಕೆಯಾಗಿದ್ದರೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಡಿ ಶೇ.3.647 ರಷ್ಟು ತೆರಿಗೆ ಹಂಚಿಕೆಯಾಗಿದೆ. ಇದರಿಂದ ಕರ್ನಾಟಕಕ್ಕೆ ಬರಬೇಕಾದ ನ್ಯಾಯಯುತ ಶೇ.1.066 ರಷ್ಟು ಅಂದರೆ ರೂ.62,098 ಕೋಟಿ ರು. ತೆರಿಗೆ ಪಾಲಿನಿಂದ ವಂಚಿತವಾಗಿದೆ.

14 ಮತ್ತು 15ನೇ ಹಣಕಾಸು ಆಯೋಗಗಳ ಪರಸ್ಪರ ವಿರೋಧಾಭಾಸದ ತೀರ್ಮಾನಗಳಿಂದಾಗಿ ಕಳೆದ 3 ವರ್ಷಗಳಿಂದ ಕರ್ನಾಟಕಕ್ಕೆ ವಾರ್ಷಿಕ 26,140 ಕೋಟಿ ರು.ಗಳ ನಷ್ಟ ಉಂಟಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ದೊರಕಬೇಕಾದ ಅನುದಾನ ಕೂಡ ಗಣನೀಯವಾಗಿ ಕಡಿತಗೊಂಡಿದೆ. 2018-19ಕ್ಕೆ ಹೊಲಿಸಿದರೆ 2023-24ರಲ್ಲಿ ಬಜೆಟ್ ಗಾತ್ರ ದುಪ್ಪಟ್ಟಾಗಿದೆ. ಈ ಲೆಕ್ಕದಲ್ಲಿ ನೋಡಿದರೂ ಕನಿಷ್ಠ ಒಂದು ಲಕ್ಷ ಕೋಟಿ ರು.ಗಳಷ್ಟು ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಮೂಲಕ ರಾಜ್ಯಕ್ಕೆ ಅನುದಾನ ದೊರಕಬೇಕಾಗಿತ್ತು. ಆದರೆ ಕರ್ನಾಟಕಕ್ಕೆ 50,000 ಕೋಟಿ ರು. ಸಹ ದೊರಕುತ್ತಿಲ್ಲ. ಅವೈಜ್ಞಾನಿಕ ಜಿಎಸ್ಟಿ ವ್ಯವಸ್ಥೆ, ಸೆಸ್ ಮತ್ತು ಸರ್ಚಾರ್ಜ್‌ಗಳ ಹೇರಿಕೆ, ತೆರಿಗೆ ಪಾಲಿನಲ್ಲಿ ವಂಚನೆ, 15 ಹಣಕಾಸು ಆಯೋಗದ ಶಿಫಾರಸಿನಂತೆ ವಿಶೇಷ ಅನುದಾನ ಕೊಡದೆ 2017-18 ರಿಂದ ನಮಗೆ 1,87,867 ಕೋಟಿ ರು. ನಷ್ಟವಾಗಿದೆ. ಬರ ಮತ್ತು ನೆರೆ ಪರಿಹಾರಕ್ಕೆ ಒಂದು ನಯಾ ಪೈಸೆ ನೀಡಿಲ್ಲ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಈ ಸದನ ಒಕ್ಕೊರಲಿನಿಂದ ಖಂಡಿಸುತ್ತದೆ. ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ, ನಾಗರಿಕರ ಹಿತರಕ್ಷಣೆಯಲ್ಲಿ ಸಮಾನ ಹಂಚಿಕೆಯ ಮತ್ತು ತಾರತಮ್ಯ ರಹಿತ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯ ನಿಲುವುಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕೆಂದು ಮತ್ತು ಕರ್ನಾಟಕ ಜನತೆಯ ಹಿತರಕ್ಷಣೆಯ ವಿಷಯದಲ್ಲಿ ಯಾವುದೇ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಈ ಸದನ ಒಕ್ಕೊರಲಿನಿಂದ ಒತ್ತಾಯಿಸುತ್ತದೆ.