ಕಾರಿಗೆ ಬೈಕ್‌ ತಾಗಿದ್ದಕ್ಕೆ 1ಕಿ.ಮೀ. ದೂರ ಖಾಸಗಿ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಬೆನ್ನಟ್ಟಿ ಹೋಗಿ ಬೈಕ್ ಸವಾರನ ಹತ್ಯೆ

| Published : Aug 23 2024, 01:03 AM IST / Updated: Aug 23 2024, 07:52 AM IST

Crime Scene
ಕಾರಿಗೆ ಬೈಕ್‌ ತಾಗಿದ್ದಕ್ಕೆ 1ಕಿ.ಮೀ. ದೂರ ಖಾಸಗಿ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಬೆನ್ನಟ್ಟಿ ಹೋಗಿ ಬೈಕ್ ಸವಾರನ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ಕಾರಿಗೆ ಬೈಕ್ ತಾಗಿತು ಎಂಬ ಕಾರಣಕ್ಕೆ 1ಕಿ.ಮೀ. ದೂರ ಬೈಕ್ ಸವಾರನೊಬ್ಬನನ್ನು ಬೆನ್ನಟ್ಟಿ ಹೋಗಿ ಕಾರು ಗುದ್ದಿಸಿ ಖಾಸಗಿ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಹತ್ಯೆಗೈದಿರುವ ಘಟನೆ ವಿದ್ಯಾರಣ್ಯಪುರ ಬಳಿ ನಡೆದಿದೆ.

 ಬೆಂಗಳೂರು :  ತನ್ನ ಕಾರಿಗೆ ಬೈಕ್ ತಾಗಿತು ಎಂಬ ಕಾರಣಕ್ಕೆ 1ಕಿ.ಮೀ. ದೂರ ಬೈಕ್ ಸವಾರನೊಬ್ಬನನ್ನು ಬೆನ್ನಟ್ಟಿ ಹೋಗಿ ಕಾರು ಗುದ್ದಿಸಿ ಖಾಸಗಿ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಹತ್ಯೆಗೈದಿರುವ ಘಟನೆ ವಿದ್ಯಾರಣ್ಯಪುರ ಬಳಿ ನಡೆದಿದೆ. ಚಾಮುಂಡಿ ಲೇಔಟ್‌ ನಿವಾಸಿ ಮಹೇಶ್ (21) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಖಾಸಗಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಅರವಿಂದ್ ಹಾಗೂ ಆತನ ಸ್ನೇಹಿತ ಚೆನ್ನಕೇಶವನನ್ನುವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಕೆಲಸ ಮುಗಿಸಿ ಬೆಳ್ಳಂದೂರಿನಿಂದ ಮನೆಗೆ ಗೆಳೆಯನ ಜತೆ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಅರವಿಂದ್ ತೆರಳುವಾಗ ಮಾರ್ಗ ಮಧ್ಯೆ ಈ ಕೃತ್ಯ ಎಸಗಿದ್ದಾನೆ.

ಬೇಡವೆಂದರು ಬಿಡದೆ ಕಾರು ಹತ್ತಿಸಿದ:

ಮೊದಲು ಡೆಲವರಿ ಬಾಯ್ ಆಗಿದ್ದ ಬಿಕಾಂ ಪದವೀಧರ ಮಹೇಶ್‌, ಇತ್ತೀಚಿಗೆ ಆ ಕೆಲಸ ತೊರೆದು ಬೇರೆಡೆ ಉದ್ಯೋಗಕ್ಕೆ ಹುಡುಕಾಡುತ್ತಿದ್ದ. ವಿದ್ಯಾರಣ್ಯಪುರ ಸಮೀಪ ಚಾಮುಂಡಿ ಲೇಔಟ್‌ನಲ್ಲಿ ತನ್ನ ಕುಟುಂಬದ ಜತೆ ವಾಸವಾಗಿದ್ದ ಆತ, ಮನೆ ಸಮೀಪ ಗೆಳೆಯರಾದ ನಿಖಿಲ್ ಹಾಗೂ ಬಾಲಾಜಿ ಜತೆ ಚಹಾ ಕುಡಿಯಲು ಬುಧವಾರ ರಾತ್ರಿ ತೆರಳಿದ್ದ. ಕೆಲ ಹೊತ್ತು ಹರಟೆ ಹೊಡೆದು ಗೆಳೆಯರ ಜತೆ ಜಿಕೆವಿಕೆ ಡಬಲ್ ರೋಡ್‌ನಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಮಹೇಶ್ ತ್ರಿಬಲ್‌ ರೈಡಿಂಗ್‌ ಹೋಗುತ್ತಿದ್ದ.

ಆ ವೇಳೆ ಬೆಳ್ಳಂದೂರು ಕಡೆಯಿಂದ ಕೊಡಿಗೇಹಳ್ಳಿಯ ವಿರೂಪಾಕ್ಷಿಪುರಕ್ಕೆ ಕಾರಿನಲ್ಲಿ ಖಾಸಗಿ ಬ್ಯಾಂಕ್‌ ಸಹಾಯಕ ವ್ಯವಸ್ಥಾಪಕ ಅರವಿಂದ್ ತೆರಳುತ್ತಿದ್ದ. ಆಗ ಮಾರ್ಗ ಮಧ್ಯೆ ದಾರಿ ಬಿಡುವಂತೆ ಅರವಿಂದ್ ಹಾರ್ನ್‌ ಮಾಡಿದರು ಕೇಳದೆ ಬೈಕ್‌ನಲ್ಲಿ ಮಹೇಶ್ ಗೆಳೆಯರು ಹೋಗುತ್ತಿದ್ದರು. ಈ ವೇಲೆ ಬೈಕ್ ಹಿಂದಿಕ್ಕುವ ಭರದಲ್ಲಿ ಕಾರಿಗೆ ಬೈಕ್ ತಾಕಿದೆ. ತಕ್ಷಣವೇ ಬೈಕ್ ನಿಲ್ಲಿಸುವಂತೆ ಅರವಿಂದ್ ಹೇಳಿದ್ದಾನೆ. ಈ ಮಾತಿಗೆ ಸ್ಪಂದಿಸದೆ ಮಹೇಶ್ ತರಾತುರಿಯಲ್ಲಿ ಸಾಗಿದ್ದಾನೆ. ಇದರಿಂದ ಕೆರಳಿದ ಅರವಿಂದ್‌ ತಕ್ಷಣವೇ ಬೈಕ್‌ ಸವಾರನನ್ನು ಬೆನ್ನತ್ತಿದ್ದಾನೆ.

ಡಬಲ್‌ ರೋಡ್‌ನಿಂದ ಸಪ್ತಗಿರಿ ಲೇಔಟ್‌ನೊಳಗೆ ಬೈಕ್‌ ನುಗ್ಗಿದೆ. ಆಗಲೂ ಬಿಡದೆ ಕಾರಿನಲ್ಲಿ ಅರವಿಂದ್ ಹಿಂಬಾಲಿಸಿದ್ದಾನೆ. ಇದರಿಂದ ಭೀತಿಗೊಂಡ ಮಹೇಶ್ ಗೆಳೆಯರಾದ ಬಾಲಾಜಿ ಹಾಗೂ ನಿಖಿಲ್‌, ಮಾರ್ಗ ಮಧ್ಯೆ ಬೈಕ್‌ನಿಂದ ಒಬ್ಬೊಬ್ಬರಾಗಿಯೇ ಜಿಗಿದು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಕೊನೆಗೆ ಸಪ್ತಗಿರಿ ಲೇಔಟ್‌ನ ಓಣಿ ರಸ್ತೆಯ ಕೊನೆ ಅಂಚಿಗೆ ಬೈಕ್ ಓಡಿಸಿದ ಮಹೇಶ್‌, ಅಲ್ಲಿ ಮುಂದೆ ಹೋಗಲಾಗದೆ ಸಿಲುಕಿದ್ದಾನೆ. ಆಗ ಆತನ ಬೈಕ್‌ಗೆ ಅರವಿಂದ ಕಾರಿನಿಂದ ಗುದ್ದಿಸಿದ್ದಾನೆ. ಇದರಿಂದ ಬೈಕ್‌ ಸಮೇತ ಮಹೇಶ ಮನೆ ಗೋಡೆಗೆ ಅಪ್ಪಳಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾನೆ. ಮನೆ ಗೋಡೆಗೆ ಅಪ್ಪಳಿಸಿ ಕೆಳಗೆ ಬಿದ್ದ ಮಹೇಶ್‌ಗೆ ಮತ್ತೊಮ್ಮೆ ಅರವಿಂದ್‌ ಕಾರ್‌ನಿಂದ ಗುದ್ದಿಸಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡ ಆತನನ್ನು ತಾನೇ ಸ್ಥಳೀಯರ ಸಹಕಾರದಲ್ಲಿ ಸಮೀಪದ ಆಸ್ಪತ್ರೆಗೆ ದಾಖಲಿಸಿ ಗೆಳೆಯನ ಜತೆ ಆರೋಪಿ ಪರಾರಿಯಾಗಿದ್ದ. ಈ ಘಟನೆ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಇನ್ಸ್‌ಪೆಕ್ಟರ್ ಸಿ.ಬಿ.ಶಿವಸ್ವಾಮಿ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಕೆಲವೇ ತಾಸುಗಳಲ್ಲಿ ಬಂಧಿಸಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾನು ತಪ್ಪು ಮಾಡಿಲ್ಲ: ಕಾರು ಚಾಲಕ

ತಾನು ಯಾವುದೇ ತಪ್ಪು ಮಾಡಿಲ್ಲ. ಮನೆ ಕಾಂಪೌಂಡ್‌ಗೆ ಮಹೇಶ್‌ ಬೈಕ್ ಗುದ್ದಿಸಿಕೊಂಡು ಗಾಯಗೊಂಡಿದ್ದ. ನಾನು ಆತನ ಬೈಕ್‌ಗೆ ಕಾರು ಡಿಕ್ಕಿ ಮಾಡಿಲ್ಲ ಎಂದು ವಿಚಾರಣೆ ವೇಳೆ ಆರೋಪಿ ಅರವಿಂದ್ ಅಲವ್ತತುಕೊಂಡಿದ್ದಾನೆ ಎನ್ನಲಾಗಿದೆ.