ಸಾರಾಂಶ
ಧಾರವಾಡ: ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಿಂದ ಹೊಸ ನಿಯಮ ರೂಪಿಸಿಕೊಂಡಿದೆ. ಅಂತೆಯೇ, ಅಭಿವೃದ್ಧಿ ವಿಷಯವಾಗಿ ಮಾಡುವ ಕೆಲಸವನ್ನು ಹೇಳುವುದು ಮತ್ತು ಹೇಳಿದ್ದನ್ನೇ ಮಾಡಿ ತೋರಿಸುವ ಬದ್ಧತೆ ಹೊಂದಿದೆ, ಕೆಲಸ ಮಾಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿಯ ಧಾರವಾಡ ಜರ್ನಲಿಸ್ಟ್ ಗಿಲ್ಡ್ ಕಚೇರಿ ನವೀಕರಣ ಕಾಮಗಾರಿಗೆ ಸೋಮವಾರ ಪೂಜೆ ನೆರವೇರಿಸಿದ ಅವರು, ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವ ಮುಂಚೆಯೇ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಮೊದಲೇ ಆಯಾ ಕೆಲಸಗಳಿಗೆ ದಿನಾಂಕ ನಿಗದಿ ಮಾಡುತ್ತಾರೆ. ಯಾವ ದಿನದಂದು ಕಾಮಗಾರಿ ಆರಂಭಗೊಳ್ಳಬೇಕು ಮತ್ತು ಅದು ಮುಗಿದು ಲೋಕಾರ್ಪಣೆಗೊಳ್ಳಬೇಕು ಎನ್ನುವುದನ್ನು ನಿಶ್ಚಯಿಸಿರುತ್ತಾರೆ. ಹಾಗೆಯೇ, ಕಾರ್ಯ ಮಾಡುತ್ತಾರೆ ಎಂದರು.ಇದರ ಭಾಗವಾಗಿಯೇ ಇಂದು ದೇಶದಲ್ಲಿ ಭವ್ಯ ರಾಮ ಮಂದಿರ ತಲೆ ಎತ್ತಿತ್ತು. ರಾಮ ಮಂದಿರಕ್ಕೆ ಶಿಲಾನ್ಯಾಸವನ್ನು ನಾವೇ ಹಾಕಿದ್ದೇವು.ಅದರ ಉದ್ಘಾಟನೆಯನ್ನು ಕೂಡ ಇತ್ತೀಚೆಗೆ ನಾವೇ ಮಾಡಿದೇವು. ಸರ್ಕಾರಿ ಅಧಿಕಾರಿಗಳು ಮಾಡುವ ಕೆಲಸ ತಕ್ಕಮಟ್ಟಿಗೆ ಇರುತ್ತದೆ. ಅಗತ್ಯಕ್ಕೆ ತಕ್ಕಂತೆ ಅಧಿಕಾರಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಿದ ಯೋಜನೆ ಅನುಷ್ಠಾನಗೊಳಿಸಬೇಕು ಎಂದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ಕಟ್ಟಡ ನವೀಕರಣಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದೇವು. ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುದಾನ ನೀಡಿದೆ.ಇನ್ನುಳಿದ ಎರಡನೇ ಹಂತದ ಕಾಮಗಾರಿಗೂ ಅಗತ್ಯ ಅನುದಾನ ಲಭಿಸಬೇಕಿದೆ. ಈ ನಿಟ್ಟಿನಲ್ಲಿಯೂ ಪ್ರಯತ್ನ ಮಾಡುತ್ತೇನೆ. ಗಿಲ್ಡ್ನಲ್ಲಿ ಪತ್ರಕರ್ತರು ಉತ್ತಮ ಚಟುವಟಿಕೆಗಳಿಗೆ ಮಾತ್ರ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಡಾ. ಬಸವರಾಜ್ ಹೊಂಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಧಾರವಾಡ ಪತ್ರಕರ್ತರಿಗೆ ಉತ್ತಮ ಪತ್ರಿಕಾ ಭವನ ಇರಲಿಲ್ಲ. ಕಳೆದ ಒಂದು ವರ್ಷದಲ್ಲಿ ಪತ್ರಿಕಾ ಭವನ ಸಾಕಷ್ಟು ಚಟುವಟಿಕೆ ಮಾಡುತ್ತಿದೆ. 4ನೇ ಅಂಗವಾಗಿರುವ ಪತ್ರಿಕಾರಂಗಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಸರ್ಕಾರಗಳು ಒದಗಿಸಬೇಕು ಎಂದರು.
ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಇದ್ದರು. ಗಿಲ್ಡ್ ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪ ನಿರೂಪಿಸಿದರು. ಹಿರಿಯ ಪತ್ರಕರ್ತ ಸುಧಿಂದ್ರ ಪ್ರಸಾದ ಕ್ರೀಡಾ ಬಹುಮಾನ ನಡೆಸಿಕೊಟ್ಟರು. ಮಹಾಂತೇಶ ಕಣವಿ ವಂದಿಸಿದರು.