ಸೋಮವಾರಪೇಟೆ: ಬಿಜೆಪಿ ಹಿರಿಯರ ವೇದಿಕೆಯ ನೇತೃತ್ವದಲ್ಲಿ ಇಲ್ಲಿನ ಅಟಲ್ಜೀ ಕನ್ನಡ ಭವನದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸೋಮವಾರಪೇಟೆ: ಬಿಜೆಪಿ ಹಿರಿಯರ ವೇದಿಕೆಯ ನೇತೃತ್ವದಲ್ಲಿ ಇಲ್ಲಿನ ಅಟಲ್ಜೀ ಕನ್ನಡ ಭವನದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ದೇಶದ ರಾಜಕೀಯ ರಂಗದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಕೀಯದಿಂದ ಆಚೆಗೂ ಸಹ ಅಪ್ಪಟ ರಾಷ್ಟ್ರ ಪ್ರೇಮಿಯಾಗಿ, ದೇಶದ ಭವಿಷ್ಯ, ಭದ್ರತೆ, ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ತಮ್ಮ ಇಡೀ ಜೀವಮಾನವನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟವರು ಎಂದು ಸ್ಮರಿಸಿದರು.
ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟ ನಿಷ್ಕಳಂಕ ರಾಜಕಾರಣಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ನದಿಗಳ ಜೋಡಣೆ, ಕೃಷಿ, ತಂತ್ರಜ್ಞಾನ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಬಲವರ್ಧನೆಗೆ ಹೆಚ್ಚು ತೊಡಗಿಸಿಕೊಂಡವರು. ಜನಸಂಘದ ನಂತರ ಭಾರತೀಯ ಜನತಾ ಪಾರ್ಟಿಯನ್ನು ರಾಷ್ಟ್ರಾದ್ಯಾಂತ ಸಂಘಟಿಸುವಲ್ಲಿ ತೊಡಗಿಸಿಕೊಂಡಿದ್ದರ ಫಲವಾಗಿ ಇಂದು ಪಕ್ಷವು ದೇಶದ ಬಹುತೇಕ ರಾಜ್ಯಗಳಲ್ಲಿ ಸೇರಿದಂತೆ ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ ಎಂದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ರಾಜಕೀಯ ರಂಗದಲ್ಲಿ ಆಜಾತಶ್ರುವಾಗಿ ಜೀವನ ನಡೆಸಿದ ಅಟಲ್ಜೀ ಅವರ ಸಾಮಾಜಿಕ ಜೀವನ ಎಲ್ಲರಿಗೂ ಪ್ರೇರಣೆ ಹಾಗೂ ಮಾರ್ಗದರ್ಶನ ಆಗಬೇಕು. ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.ಬಿಜೆಪಿ ಹಿರಿಯರ ವೇದಿಕೆ ಸಂಚಾಲಕ ಬಿ.ಟಿ. ತಿಮ್ಮಶೆಟ್ಟಿ ಮಾತನಾಡಿ, ವಾಜಪೇಯಿ ಅವರ ಉದಾತ್ತ ಚಿಂತನೆಯ ಸ್ಮರಣೆಯನ್ನು ಮಾಡುವ ಉದ್ದೇಶದಿಂದ ಹಿರಿಯರ ವೇದಿಕೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದ ಎಂದರು.
ಪಕ್ಷದ ಹಿರಿಯ ಕಾರ್ಯಕರ್ತ ಪ್ರೇಮ್ನಾಥ್ ಕಾರ್ಯಕ್ರಮ ನಿರ್ವಹಿಸಿದರು. ಬಿಜೆಪಿ ಹಿರಿಯರ ವೇದಿಕೆ ಪದಾಧಿಕಾರಿಗಳಾದ ಬಿ.ಆರ್. ಮೃತ್ಯುಂಜಯ, ಬಿ.ಪಿ. ಶಿವಕುಮಾರ್, ದಯಾನಂದ್, ಹಾಲೇರಿ ದಿನೇಶ್, ಕೆ.ಎನ್. ಶಿವಕುಮಾರ್ ಕಾರ್ಯಕ್ರಮ ಆಯೋಜಿಸಿದ್ದರು. ಬಿಜೆಪಿ ಪ್ರಮುಖರಾದ ಬಿ.ಬಿ. ಭಾರತೀಶ್, ಗೌತಮ್ ಗೌಡ, ಮಹೇಶ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಬಿ.ಡಿ. ಮಂಜುನಾಥ್, ಎಸ್.ಪಿ. ಪೊನ್ನಪ್ಪ, ಎಂ.ಬಿ. ಅಭಿಮನ್ಯುಕುಮಾರ್, ಸುಮಾ ಸುದೀಪ್, ಮಂಜುಳಾ ಸುಬ್ರಮಣಿ, ಶರತ್ಚಂದ್ರ, ಶ್ರೀನಿಧಿ ಲಿಂಗಪ್ಪ, ಗೋವಿಂದ ಸೇರಿದಂತೆ ವಾಜಪೇಯಿ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಶ್ರೀ ವಿದ್ಯಾ ಗಣಪತಿ ದೇವಾಲಯದಲ್ಲಿ ದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಜಿ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ಹಂಪಲು, ಬಿಸ್ಕತ್ಗಳನ್ನು ವಿತರಿಸಲಾಯಿತು.