ಮೈಸೂರು, ಕಾರವಾರ, ಮಂಗಳೂರು ಬಂದರು ಅಭಿವೃದ್ಧಿ ಆಗಬೇಕು. ಬೆಳಗಾವಿಯನ್ನು ಉಳಿಸಬೇಕು. ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ಕನ್ನಡಿಗರಿಗೆ ಉದ್ಯೋಗಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಇದುವರೆಗೆ ಪ್ರಾಮಾಣಿಕ ಚಿಂತನೆ ನಡೆದಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ನೆಲದಲ್ಲಿ ಪರಭಾಷಿಕರ ದೌರ್ಜನ್ಯ ಹೆಚ್ಚಾಗಿದೆ. ಪ್ರತಿ ಜಿಲ್ಲೆ, ಜಿಲ್ಲೆಗಳಲ್ಲೂ ಪರಭಾಷಿಕರು, ಬಿಹಾರ, ಉತ್ತರ ಪ್ರದೇಶ, ರಾಜಸ್ತಾನ್, ತಮಿಳುನಾಡು, ಆಂಧ್ರದವರು ಎಲ್ಲೆಡೆ ಸೇರಿದ್ದಾರೆ. ಪರಭಾಷಿಕರಿಂದ ಕನ್ನಡಿಗರ ಮೇಲೆ ಆಗುತ್ತಿರುವ ದಬ್ಬಾಳಿಕೆ ನಿಲ್ಲಬೇಕು. ಹಿಂದಿಯನ್ನು ಬಲವಂತವಾಗಿ ಹೇರುತ್ತಿರುವ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಖಂಡಿಸಿದರು.ಸಮಗ್ರ ಕನ್ನಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಮತ್ತು ಇತರರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಈಡುಗಾಯಿ ಒಡೆದು, ಕಡ್ಲೇಪುರಿ ಹಂಚಿ ವಿಶೇಷವಾಗಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದರು.
ಮೈಸೂರು, ಕಾರವಾರ, ಮಂಗಳೂರು ಬಂದರು ಅಭಿವೃದ್ಧಿ ಆಗಬೇಕು. ಬೆಳಗಾವಿಯನ್ನು ಉಳಿಸಬೇಕು. ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ಕನ್ನಡಿಗರಿಗೆ ಉದ್ಯೋಗಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಇದುವರೆಗೆ ಪ್ರಾಮಾಣಿಕ ಚಿಂತನೆ ನಡೆದಿಲ್ಲ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಯಾಗಬೇಕು. ಕೇರಳದಲ್ಲಿ ಕನ್ನಡಿಗರನ್ನು ಗುಲಾಮರ ರೀತಿ ಕಾಣುತ್ತಿದ್ದಾರೆ. ರಾಜ್ಯದಲ್ಲಿ ಕೇರಳಿಗರಿಗೆ ತೊಂದರೆಯಾದರೆ ಅವರು ಗಂಭೀರವಾಗಿ ಮಾತನಾಡುತ್ತಾರೆ ಇದು ಸರಿಯಲ್ಲ ಎಂದು ದೂರಿದರು.ಮುಂದಿನ ದಿನಗಳಲ್ಲಿ ಮಲಯಾಳಿಗಳಿಂದ ಕನ್ನಡಿಗರ ಮೇಲೆ ದೌರ್ಜನ್ಯವಾದಲ್ಲಿ ಮಲಯಾಳಿಗಳೇ ಕರ್ನಾಟಕ ಬಿಟ್ಟು ತೊಲಗಿ ಎಂಬ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆಗಾಗಿ ಹೋರಾಟ ನಡೆಸಿದ್ದರು. ಆದರೆ, ಅವರೇ ಅಧಿಕಾರಕ್ಕೆ ಬಂದರೂ ಏನೂ ಮಾಡಲಿಲ್ಲ. ತಮಿಳುನಾಡು ಸರ್ಕಾರದೊಂದಿಗೆ ಕೂಡಲೇ ವ್ಯವಹರಿಸಿ ತಕ್ಷಣ ಮೇಕೆದಾಟು ಯೋಜನೆಗೆ ಅನುಮತಿ ಪಡೆಯಬೇಕು ಎಂದು ಒತ್ತಾಯಿಸಿದರು.ಬಿಜೆಪಿಯವರು ಮುಸ್ಲಿಮರನ್ನು ವಿರೋಧಿಸುತ್ತಾರೆ. ಇದು ಸರಿಯಲ್ಲ. ಬಿಜೆಪಿಯವರಿಗೆ ಮುಸಲ್ಮಾನರ ಬಗ್ಗೆ ಕೋಪ ಇದೆ. ಹಿಂದಿಯವರು ಇಲ್ಲೇ ಕುಳಿತಿದ್ದಾರೆ. ಅದರ ಬಗ್ಗೆ ನಿಮ್ಮ ಮಾತಿಲ್ಲ. ಮಹದಾಯಿ, ಕಳಸಾ ಬಂಡೂರಿ ಆಗಲೇಬೇಕು. ಇದಕ್ಕಾಗಿ ಜ. ೧೮ರಂದು ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಹೊಸ ವರ್ಷದಲ್ಲಿ ಕನ್ನಡ ನಾಡಿಗಾಗಿ, ನಾಡಿನ ಅಭ್ಯುದಯಕ್ಕಾಗಿ, ಕರ್ನಾಟದ ಸಮಗ್ರ ಅಭಿವೃದ್ಧಿ, ಬೆಳಗಾವಿ, ಕಲ್ಯಾಣ ಕರ್ನಾಟಕದ ಪ್ರಗತಿಗಾಗಿ, ಕನ್ನಡಿಗರ ಉದ್ಯೋಗಕ್ಕಾಗಿ ಬಾರೀ ಹೋರಾಟ ಮಾಡಲು ನಿರ್ದಾರ ಮಾಡಿದ್ದೇವೆ. ಇದಕ್ಕಾಗಿ ನಾವು ಬಂಧನಕ್ಕೊಳಗಾಗಿ ಜೈಲಿಗೆ ಹೋಗಲೂ ಸಿದ್ಧರಿದ್ದೇವೆಂದು ಹೇಳಿದರು.ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಸಮಯದಲ್ಲಿ ಒಂಟೆಗಳ ಮೆರವಣಿಗೆ ಮಾಡಲು ಮುಂದಾಗಿದೆ. ನಾವು ೬೦ ವರ್ಷಗಳ ಹಿಂದೆಯೇ ಎಮ್ಮೆಗಳ ಮೆರವಣಿಗೆ ಮಾಡಿದ್ದೇವೆ. ಈಗ ಅವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗ್ರೇಟರ್ ಬೆಂಗಳೂರು ಬೇಡ, ಗಡಿನಾಡುಗಳ ಬೆಳವಣಿಗೆ ಆಗಬೇಕು. ಮೆಟ್ರೋ ದರ ಕಡಿಮೆ ಮಾಡಬೇಕು. ಆಲಮಟ್ಟಿ ಜಲಾಶಯ ಎತ್ತರ ಮಾಡಬೇಕು. ಕನ್ನಡದಲ್ಲೇ ನಾಫಲಕಗಳನ್ನು ಅಳವಡಿಸಬೇಕು. ಪುರುಷರಿಗೂ ಉಚಿತ ಬಸ್ ಪಾಸ್, ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಬೇಕು. ಪುರುಷರನ್ನು ಕಡೆಗಾಣಿಸ,ಬಾರದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ವರ್ಷ ಪೂರ್ತಾ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಸಿದರು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಮುಖಂಡರಾದ ಮಹಂತಪ್ಪ, ಬೆಟ್ಟಹಳ್ಳಿ ಮಂಜುನಾಥ್, ಕರವೇ ಎಚ್.ಡಿ. ಜಯರಾಂ, ನಾರಾಯಣ, ಪಾರ್ಥಸಾರಥಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.