ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಕಾಶ್ಮೀರದಲ್ಲಿ ಹಿಂದುಗಳ ಮೇಲೆ ನಡೆದ ಭಯೋತ್ಪಾದಕರ ದಾಳಿ ಬಹಳ ನೋವಿನ ಸಂಗತಿ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆತಂಕವಾದಿಗಳು ಹೇಯ ಹಾಗೂ ಅಮಾನುಷ ಕೃತ್ಯವನ್ನ ಮೆರೆದಿದ್ದಾರೆ. ಇದು ನಿಜವಾಗಲು ಖಂಡನಿಯವಾಗಿರುವಂತಹದ್ದು. ನಾವೆಲ್ಲರು ಇದನ್ನು ಖಂಡಿಸಬೇಕಾಗಿದೆ. ಹಿಂಸೆ ಯಾವುದೇ ಆಗಲಿ, ಯಾರಿಗೆ ಆಗಲಿ ನಮ್ಮ ದೇಶದಲ್ಲಿ ಆಗಬಾರದು. ನಮ್ಮ ದೇಶ ಯಾವತ್ತು ಶಾಂತಿಯನ್ನು, ಸಹೋದರ ಭಾವವನ್ನು, ಪ್ರೀತಿಯನ್ನು ಹಂಚುವಂತಹ ದೇಶ. ಆದರೆ ಕಾಶ್ಮೀರದಲ್ಲಿ ಕಣ್ಣೆದುರಿಗೆ ಕೃತ್ಯವೆಸಗಿದ್ದಾರೆ. ತನ್ನ ಎದುರಿಗೆ ತನ್ನ ಪತಿಯನ್ನು ಕೊಲೆ ಮಾಡುತ್ತಿದ್ದಾರೆ ಅಂದರೆ ಜೀವ ಹೇಗಿರುತ್ತದೆ ಎಂದರು.
ಸರ್ಕಾರ ಕೂಡ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ. ಆತಂಕವಾದ, ಭಯೋತ್ಪಾದನೆ ಹೋಗಲಾಡಿಸಬೇಕು. ಇದಕ್ಕೆ ಜನರ ಸಹಕಾರ ಬೇಕು. ಎಲ್ಲರೂ ಪಕ್ಷಾತೀತವಾಗಿ, ಜಾತ್ಯತೀತವಾಗಿ ಮತ್ತೆ ಭಾಷ್ಯತೀತವಾಗಿ ಭಾರತೀಯತೆಯ ಅಖಂಡತ್ವವನ್ನು ಕಾಪಾಡಿಕೊಳ್ಳಬೇಕು ಎಂದರು.ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಪ್ರತಿಯೊಬ್ಬರಿಗೂ ಬರಬೇಕು. ನಾವೆಲ್ಲರೂ ಭಾರತೀಯರಾಗಿ ನಮ್ಮ ದೇಶವನ್ನ ಗೌರವಿಸಬೇಕು. ನಮ್ಮ ರಾಷ್ಟ್ರ ಗೀತೆಯನ್ನು, ನಮ್ಮ ರಾಷ್ಟ್ರ ಧ್ವಜವನ್ನು ಎತ್ತಿ ಮೆರೆಯಬೇಕು. ಅಖಂಡ ಭಾರತೀಯರು ನಾವೆಲ್ಲರೂ ಎಂಬ ಭಾವನೆ ಬರಬೇಕು. ಇಡೀ ಭಾರತದ 145 ಕೋಟಿ ಜನ ಈ ಕೃತ್ಯವನ್ನು ಖಂಡಿಸುವಂತಹ ಮನೋಭಾವನೆ ಇಟ್ಟುಕೊಳ್ಳಬೇಕು. ಭಯೋತ್ಪಾದಕರ ಕೃತ್ಯ ಹೇಯತನವಾಗಿರುವಂತಹದ್ದು, ಹೇಡಿತನವಾಗಿರುವಂತಹದ್ದು ಎಂದರು.
ನಮ್ಮ ಭಾರತೀಯ ಸೈನಿಕರು ಹಗಲು ರಾತ್ರಿ ಕಾಯುತ್ತಾ ನಮ್ಮ ದೇಶವನ್ನು ಕಾಪಾಡುತ್ತಿದ್ದಾರೆ. ಅವರಲ್ಲೂ ಎಷ್ಟೋ ಜನರ ಹತ್ಯೆ ಆಗುತ್ತಿದೆ. ನೀವೆಲ್ಲ ನೋಡಿರಬಹುದು ಒಂದು ಬಸ್ಸಿನ ಸೈನಿಕರನ್ನು ಕೊಂದು ಬಿಟ್ಟರು. ಅವರ ಜೀವನ ಏನ್ ಆಗಬೇಕು ಎಂದರು. ಕೇಂದ್ರ ಸರ್ಕಾರರ ಇದರ ಬಗ್ಗೆ ಒಂದು ಧೃಡ ನಿರ್ಧಾರ ತೆಗೆದುಕೊಳ್ಳಬೇಕು. ಇಂತಹ ಕೃತ್ಯಗಳು ಆದಾಗ ಬೇಗ ಸ್ಪಂದಿಸಿ. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದರು.