ಕೇಂದ್ರ ಸರ್ಕಾರದಿಂದ ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ-ಮಹೇಶ ಪತ್ತಾರ

| Published : Oct 28 2025, 12:15 AM IST

ಕೇಂದ್ರ ಸರ್ಕಾರದಿಂದ ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ-ಮಹೇಶ ಪತ್ತಾರ
Share this Article
  • FB
  • TW
  • Linkdin
  • Email

ಸಾರಾಂಶ

ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳಿಗೆ ದೇಶವನ್ನು ಲೂಟಿ ಮಾಡಲಿಕ್ಕೆ ಅವಕಾಶ ಕಲ್ಪಿಸಲು ಕಾರ್ಮಿಕರ ಹಕ್ಕುಗಳ ಮೇಲೆ ಕೇಂದ್ರದ ಬಿಜೆಪಿ ಸರ್ಕಾರ ತೀವ್ರ ದಾಳಿ ನಡೆಸುತ್ತಿದೆ. ಈ ದಾಳಿಗಳನ್ನು ಹಿಮ್ಮೆಟ್ಟಿಸಲು ದುಡಿಯುವ ಜನರ ಐಕ್ಯ ಹೋರಾಟ ತೀವ್ರಗೊಳಿಸಲು ಕಾರ್ಮಿಕರು ಸಜ್ಜಾಗಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.

ಹಾವೇರಿ: ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳಿಗೆ ದೇಶವನ್ನು ಲೂಟಿ ಮಾಡಲಿಕ್ಕೆ ಅವಕಾಶ ಕಲ್ಪಿಸಲು ಕಾರ್ಮಿಕರ ಹಕ್ಕುಗಳ ಮೇಲೆ ಕೇಂದ್ರದ ಬಿಜೆಪಿ ಸರ್ಕಾರ ತೀವ್ರ ದಾಳಿ ನಡೆಸುತ್ತಿದೆ. ಈ ದಾಳಿಗಳನ್ನು ಹಿಮ್ಮೆಟ್ಟಿಸಲು ದುಡಿಯುವ ಜನರ ಐಕ್ಯ ಹೋರಾಟ ತೀವ್ರಗೊಳಿಸಲು ಕಾರ್ಮಿಕರು ಸಜ್ಜಾಗಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಿಐಟಿಯು ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಪೋರೇಟ್ ಕೋಮುವಾದದ ಅನೈತಿಕ ಸಂಬಂಧದ ಕೇಂದ್ರ ಸರ್ಕಾರ ತನ್ನ ಜನವಿರೋಧಿ ನೀತಿಗಳನ್ನು ಜಾರಿಮಾಡಲು ಜನರ ದಿಕ್ಕು ತಪ್ಪಿಸಲು ಕೋಮುವಾದಿ ಹಾಗೂ ಭಾವನಾತ್ಮಕ ವಿಷಯಗಳನ್ನು ಜನರ ಮಧ್ಯ ನಿರಂತರ ಹರಿಬಿಡುತ್ತಿದೆ. ಈ ದ್ವಿಭಜಕ ನೀತಿಗಳನ್ನು ಕಾರ್ಮಿಕರು ಎಚ್ಚರಿಕೆಯಿಂದ ಹಿಮ್ಮೆಟ್ಟಿಸಿ ಒಗ್ಗಟ್ಟು ಸಾಧಿಸಬೇಕು ಎಂದು ಕರೆ ನೀಡಿದರು.ರಾಜ್ಯದ ಕಾಂಗ್ರೆಸ್ ಸರ್ಕಾರ ಪರ್ಯಾಯ ನೀತಿಗಳನ್ನು ರೂಪಿಸಿಕೊಳ್ಳದೇ ಅದೇ ಕೇಂದ್ರದ ನೀತಿಗಳಿಗೆ ಜೊತು ಬಿದ್ದಿರುವುದು ವಿಷಾದನೀಯ. ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ, ಕೆಲಸ ಅವಧಿ ಸೇರಿದಂತೆ ಬಹುಮುಖ್ಯ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವುದನ್ನು ವಿರೋಧಿಸಿ ಮುಂದೆ ತೀವ್ರ ಹೋರಾಟವನ್ನು ಸಿಐಟಿಯು ನಡೆಸಲಿದೆ ಎಂದರು.ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ವಕೀಲರ ಸಂಘದ ಕಾರ್ಯದರ್ಶಿ ನಾರಾಯಣ ಕಾಳೆ ಮಾತನಾಡಿ, ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ, ಕಾರ್ಮಿಕ ಕಾನೂನು ಹಾಗೂ ಸಾಮಾಜಿಕ ಭದ್ರತೆಯಿಂದ ವಂಚಿತರಾದ ಕಾರ್ಮಿಕರನ್ನು ಸಿಐಟಿಯು ಅಡಿ ಸಂಘಟಿಸುವ ಅವರಿಗೆ ನ್ಯಾಯ ಕೊಡಿಸುವ ಗಂಭೀರ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಮುಖಂಡ ಅಂದಾನೆಪ್ಪ ಹೆಬಸೂರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ನೌಕರರ ಸಂಘಟನೆ ಮುಖಂಡ ಸುಭಾಸ್ ಸೊಟ್ಟಪ್ಪನವರ, ಅಂಗನವಾಡಿ ನೌಕರರ ಸಂಘಟನೆಯ ರಾಜೇಶ್ವರಿ ಹಿರೇಮಠ, ಕಟ್ಟಡ ನಿರ್ಮಾಣ ಕಾರ್ಮಿಕ ಸಂಘಟನೆಯ ಚನವೀರಯ್ಯ ಹಿರೇಮಠ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘಟನೆಯ ಶಾಂತಾ ಗಡ್ಡಿಯವರ, ಹಮಾಲಿ ಕಾರ್ಮಿಕ ಸಂಘಟನೆ ಮುಖಂಡ ಹುಸೇನಸಾಬ್ ಏರಿಮನಿ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಖಾಯಮೇತರರ ನೌಕರರ ಸಂಘಟನೆಯ ಚೈತ್ರಾ ಎಸ್.ಕೆ., ಬೀಡಿ ಕಾರ್ಮಿಕ ಸಂಘಟನೆಯ ರುಬಿಯಾಬಾನು ಅತ್ತಾರ, ವಿದ್ಯುತ್ ಹೊರಗುತ್ತಿಗೆ ನೌಕರ ಮುಖಂಡ ಚಂದ್ರು ಬೆನಕನಹಳ್ಳಿ ಇದ್ದರು. ಸಮ್ಮೇಳನದಲ್ಲಿ ಸಿಐಟಿಯು ಸಂಯೋಜಿತ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.ಕಾರ್ಯಕ್ರಮವನ್ನು ಬಸವರಾಜ ಬಾರ್ಕಿ ನಿರ್ವಹಿಸಿದರು. ಸಿದ್ದಮ್ಮ ಚೌಟಿ ವಂದಿಸಿದರು. ಸಮ್ಮೇಳನದ ನಿರ್ಣಯಗಳು: ಕೇಂದ್ರ ಸರ್ಕಾರ ಜಾರಿ ಮಾಡಲಿರುವ ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳಲಿರುವ ಕಾರ್ಮಿಕ ಸಂಹಿತೆಗಳು ರದ್ದಾಗಬೇಕು. ಅಸಂಘಟಿತ ಕಾರ್ಮಿಕರಿಗೆ ವಸತಿ ಸೇರಿದಂತೆ ಸಮಗ್ರ ಸಾಮಾಜಿಕ ಭದ್ರತೆ ಒದಗಿಸಬೇಕು. ಖಾಯಮ್ಮೇತರ ನೌಕರರ ಕಾಯಮಾತಿಗಾಗಿ ರಾಜ್ಯ ಸರ್ಕಾರ ಶಾಸನ ರೂಪಿಸಬೇಕು. ಪರಿಷ್ಕೃತ ಕನಿಷ್ಠ ವೇತನ ಕರಡು ಅಧಿಸೂಚನೆಯನ್ನು ಯಾವುದೇ ಒತ್ತಡಕ್ಕೆ ಮಣಿಯದೇ ವಿಳಂಬ ಮಾಡದೇ ಅಂತಿಮ ಅಧಿಸೂಚನೆ ಹೊರಡಿಸಬೇಕು. ಯೋಜನಾ ನೌಕರರನ್ನು ಕನಿಷ್ಠ ವೇತನ ಕಾಯ್ದೆಯಡಿ ತರಬೇಕು.