ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದಲ್ಲಿ ಮಹಿಳೆಯರು ಸೇರಿದಂತೆ ಹಲವರ ಹತ್ತಾರು ತಂಡಗಳು ವಿಜಿಟಿಂಗ್ ಕಾರ್ಡ್ ಮಾದರಿಯ ಕಾರ್ಡ್ ಒಂದನ್ನು ವಿತರಿಸಿದ್ದು, ಅದರ ಒಂದು ಬದಿಯಲ್ಲಿ ಜೆಡ್ಲ್ಯೂ. ಒಆರ್ಜಿ ಮತ್ತೊಂದೆಡೆ ಕ್ಯೂ ಆರ್ ಕೋಡ್ ಇದ್ದು, ಜನರನ್ನು ಮತಾಂತರಗೊಳಿಸಲು ಯತ್ನಿಸಿದ ಘಟನೆ ನಡೆದಿದೆ.ಇಬ್ಬರು ಮಹಿಳೆಯರು ಪಟ್ಟಣದ ಸುಭಾಷ್ ವೃತ್ತ ಸಮೀಪದ ಕಾಂಪ್ಲೆಕ್ಸ್ನಲ್ಲಿ ಅಂಗಡಿ ಒಂದಕ್ಕೆ ಭೇಟಿ ನೀಡಿ, ಮಾಲೀಕರ ಜತೆ ವ್ಯವಹಾರ ಸಂಬಂಧ ವಿನಯದಿಂದ ಮಾತನಾಡಿ, ಅವರ ಗಮನವನ್ನು ಅವರೆಡೆ ಸೆಳೆದುಕೊಂಡು ೮/೫ ಅಳತೆಯ ಕಾರ್ಡ್ ಒಂದರ ಬದಿಯಲ್ಲಿ ಜೆಡ್ಲ್ಯೂ ಒಆರ್ಜಿ ಮತ್ತೊಂದೆಡೆ ಕ್ಯೂ ಆರ್ ಕೋಡ್ ಇರುವುದನ್ನು ನೀಡಿ, ಕ್ಯೂರ್ ಆರ್ ಕೋಡ್ ಸ್ಕ್ಯಾನ್ ಮಾಡಿ, ಅದರಲ್ಲಿನ ವಿಷಯವನ್ನು ಓದಿದರೆ ನಿರಾಳತೆ ದೊರೆಯುತ್ತದೆ. ಒತ್ತಡ ದೂರವಾಗುತ್ತದೆ, ಅದನ್ನು ಓದಿ ನಮಗೆ ಮನಃಶಾಂತಿ ದೊರೆತಿದೆ ಎಂದಿದ್ದಾರೆ. ಅಂಗಡಿ ಮಾಲೀಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಮತಾಂತರ ಮಾಡಿಸುವ ತಂಡದವರು ಎಂದು ಅರಿತು, ಮಾತಿನ ನಡುವೆ ಮಹಿಳೆಯರ ಫೋಟೋ ತೆಗೆದಾಗ ಮಹಿಳೆಯರು ಪ್ರಶ್ನಿಸಿದ್ದಾರೆ. ಆಂಗಡಿ ಮಾಲೀಕ ಮತಾಂತರ ಮಾಡಿಸಲು ಪಟ್ಟಣದ ಪ್ರಮುಖ ವೃತ್ತಕ್ಕೂ ಬಂದಿದ್ದೀರ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದಾಗ ಮಹಿಳೆಯರು ಓಡಿ ಹೋಗಿದ್ದಾರೆ. ಹುಡುಕಿದರೂ ಮಹಿಳೆಯರು ಸಿಗದೇ ಇದ್ದಾಗ, ಇದರ ಸಂಬಂಧ ದೂರು ನೀಡದೇ ಇದ್ದರೂ ಸಹ ಮಹಿಳೆಯರು ನೀಡಿದ ಕಾರ್ಡ್ ಅಂಗಡಿ ಮಾಲೀಕನ ಬಳಿ ಇದೆ. ಪಟ್ಟಣದ ಸ್ಲಮ್ ಬೋರ್ಡ್, ನರಸಿಂಹನಾಯಕ ನಗರ ಹಾಗೂ ಇತರೆ ಬಡಾವಣೆಯಲ್ಲಿ ಇಂತಹ ಮತಾಂತರರ ವಿನಯದ ಮಾತಿಗೆ ಮರುಳಾಗಿ ಇವರ ವಿಚಾರ ನಂಬಿಸುವ ಸ್ಥಿತಿಯಿಂದಾಗಿ ನೂರಾರು ಕುಟುಂಬಗಳು ಮತಾಂತರಗೊಂಡು, ಪ್ರಾರ್ಥನಾ ಮಂದಿರದ ಹೆಸರಿನಲ್ಲಿ ಐವತ್ತಕ್ಕೂ ಹೆಚ್ಚು ಚರ್ಚ್ಗಳು ಪ್ರಾರಂಭವಾಗಿವೆ.
ಕರ್ನಾಟಕ ರಾಜ್ಯ ಸರ್ಕಾರವೂ ಹಿಂದೂ ಜಾತಿಗಳ ನಡುವೆ ಕ್ರೈಸ್ತರನ್ನು ಸೇರಿಸುವ ಸಲುವಾಗಿ ೩೩೧ ಹೊಸ ಜಾತಿ ಸೇರಿಸುವ ಜತೆಗೆ ಬಹು ಸಂಖ್ಯಾತ ಜನಾಂಗಗಳಾದ ಒಕ್ಕಲಿಗ ನಂತರ ಒಕ್ಕಲಿಗ ಕ್ರಿಶ್ಚಿಯನ್, ಕುರುಬ ನಂತರ ಕುರುಬ ಕ್ರಿಶ್ಚಿಯನ್, ಲಿಂಗಾಯತ ನಂತರ ಲಿಂಗಾಯತ ಕ್ರಿಶ್ಚಿಯನ್, ವೀರಶೈವ ನಂತರ ವೀರಶೈವ ಕ್ರಿಶ್ಚಿಯನ್ ಹಾಗೂ ಇತರೆ ೪೬ ಜನಾಂಗಗಳ ಮೂಲ ಹೆಸರಿನ ಜತೆಗೆ ಕ್ರಿಶ್ಚಿಯನ್ ಸೇರ್ಪಡೆ ಮಾಡಿ ಜಾತಿ ಸಮೀಕ್ಷೆ ಮಾಡ ಹೊರಟಿರುವುದು ಹಲವು ಪ್ರಶ್ನೆಗಳಿಗೆ ನಾಂದಿ ಹಾಡಿದೆ.ಕಾಂಗ್ರೆಸ್ ಪಕ್ಷದ ನಾಯಕಿಯ ಮೂಲ ಸ್ಥಳ ಇಟಲಿ ಹಾಗೂ ಕ್ರಿಶ್ಚಿಯನ್, ಆದ್ದರಿಂದ ಕಾಂಗ್ರೆಸ್ ಆಡಳಿತದಲ್ಲಿ ಮತಾಂತರ ಯಾವುದೇ ಭಯಭೀತಿ ಇಲ್ಲದೇ ಸಾಂಗವಾಗಿ ನಡೆಯುತ್ತಿದೆ ಎಂಬ ಪ್ರಜ್ಞಾವಂತರ ಮಾತಿಗೆ ಪುಷ್ಠಿ ನೀಡುವಂತೆ ಜಾತಿ ಗಣತಿಯಲ್ಲೂ ಕ್ರಿಶ್ಚಿಯನ್ ಸೇರಿಸಿರುವುದು ಕೈಗನ್ನಡಿಯಂತಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಪದವಿ ರಕ್ಷಣೆಗಾಗಿ ಉಪಮುಖ್ಯಮಂತ್ರಿ ಅವರನ್ನು ಕಟ್ಟಿಹಾಕುವ ಸಲುವಾಗಿ ೪೬ ಜನಾಂಗಗಳ ಮೂಲ ಹೆಸರಿನ ಜತೆಗೆ ಕ್ರಿಶ್ಚಿಯನ್ ಸೇರ್ಪಡೆ ಮಾಡಿ, ಕಾಂಗ್ರೆಸ್ ಪಕ್ಷದ ನಾಯಕಿಯನ್ನು ಓಲೈಸುವ ಜತೆಗೆ ಜಾತಿಗಳ ಒಳಗೆ ಒಡೆದು ಆಳುವ ನೀತಿ ಮತ್ತು ಸಮಸ್ಯೆಯನ್ನು ಜೀವಂತವಾಗಿರುವ ತಂತ್ರಗಾರಿಕೆಯಿಂದ ಯಶಸ್ಸು ಸಿಗಲ್ಲ, ಅವರಿಗೆ ಕೆಡಕು ಉಂಟಾಗುತ್ತೆ ಎಂದು ಹಿರಿಯ ರಾಜಕಾರಣಿ ಒಬ್ಬರ ಮಾತು ಆಡಳಿತ ಪಕ್ಷದಲ್ಲಿನ ಆಂತರಿಕ ವಿಚಾರವನ್ನು ಬಿಂಬಿಸುತ್ತದೆ.