ಪಾಲಿಟೆಕ್ನಿಕ್ ಕಾಲೇಜಿಗೆ ದಿ.ಎಂ.ಕೆ.ಬೊಮ್ಮೇಗೌಡರ ಹೆಸರು ಇಡಲು ಪ್ರಯತ್ನ: ಸಚಿವ ಚಲುವರಾಯಸ್ವಾಮಿ

| Published : Feb 13 2024, 12:48 AM IST

ಪಾಲಿಟೆಕ್ನಿಕ್ ಕಾಲೇಜಿಗೆ ದಿ.ಎಂ.ಕೆ.ಬೊಮ್ಮೇಗೌಡರ ಹೆಸರು ಇಡಲು ಪ್ರಯತ್ನ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಇದೇ ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಳೆಯ ವಿದ್ಯಾರ್ಥಿ. 1979ರಲ್ಲಿ ನಾನು ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಸೇರಿ ಡಿಪ್ಲೋಮಾ ಶಿಕ್ಷಣ ಪೂರೈಸಿದೆ. ಇಲ್ಲಿ ಕಲಿತ ಶೇ.99 ರಷ್ಟು ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಎಂಜಿನಿಯರ್‌ಗಳಾಗಿ ಸೇವೆ ಸಲ್ಲಿಸಿದ್ದಾರೆ. ನಾನೊಬ್ಬ ಮಾತ್ರ ಕ್ಷೇತ್ರ ಬದಲಿಸಿ ಗುತ್ತಿಗೆದಾರನಾಗಿ ನಂತರ ರಾಜಕಾರಣಿಯಾಗಿದ್ದೇನೆ. ನಾನು ರಾಜ್ಯದ ಸಚಿವನಾಗಿ ಈ ಕಾರ್ಯಕ್ರಮಕ್ಕೆ ಬಂದಿಲ್ಲ. ಕಾಲೇಜಿನ ಹಳೆ ವಿದ್ಯಾರ್ಥಿಯಾಗಿ ಭಾಗವಹಿಸಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ದಿ.ಎಂ.ಕೆ.ಬೊಮ್ಮೇಗೌಡರ ಹೆಸರನ್ನು ಇಡಲು ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದ ಎಂ.ಕೆ.ಬೊಮ್ಮೇಗೌಡರ ವೇದಿಕೆಯಲ್ಲಿ ಹಳೆಯ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಸ್ನೇಹ ಸಮ್ಮಿಲನ, ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಪತ್ನಿ ಧನಲಕ್ಷ್ಮಿ ಜೊತೆ ಸೇರಿ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲೇ ಪ್ರಪ್ರಥಮ ತಾಂತ್ರಿಕ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಪ್ರಾರಂಭವಾಗಲು ಅಂದು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಿ.ಎಂ.ಕೆ.ಬೊಮ್ಮೇಗೌಡರು ಕಾರಣ ಎಂದರು.

ಸ್ನೇಹ ಸಮ್ಮಿಲನದ ಹೆಸರಿನಲ್ಲಿ ಈ ಸಂಸ್ಥೆ ಎಲ್ಲಾ ಹಳೆಯ ವಿದ್ಯಾರ್ಥಿಗಳೂ ಒಗ್ಗೂಡಿ ಕಾಲೇಜಿನ ಅಭಿವೃದ್ಧಿಗೆ ಮುಂದೆ ಬಂದಿರುವುದು ಸ್ವಾಗತಾರ್ಹ. ನಾನು ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿ. 1979ರಲ್ಲಿ ನಾನು ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಸೇರಿ ಡಿಪ್ಲೋಮಾ ಶಿಕ್ಷಣ ಪೂರೈಸಿದೆ ಎಂದರು.

ಇಲ್ಲಿ ಕಲಿತ ಶೇ.99 ರಷ್ಟು ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಎಂಜಿನಿಯರ್‌ಗಳಾಗಿ ಸೇವೆ ಸಲ್ಲಿಸಿದ್ದಾರೆ. ನಾನೊಬ್ಬ ಮಾತ್ರ ಕ್ಷೇತ್ರ ಬದಲಿಸಿ ಗುತ್ತಿಗೆದಾರನಾಗಿ ನಂತರ ರಾಜಕಾರಣಿಯಾಗಿದ್ದೇನೆ. ನಾನು ರಾಜ್ಯದ ಸಚಿವನಾಗಿ ಈ ಕಾರ್ಯಕ್ರಮಕ್ಕೆ ಬಂದಿಲ್ಲ. ಕಾಲೇಜಿನ ಹಳೆ ವಿದ್ಯಾರ್ಥಿಯಾಗಿ ಭಾಗವಹಿಸಿದ್ದೇನೆ ಎಂದರು.

ನನ್ನೆಲ್ಲಾ ಹಳೆಯ ಸ್ನೇಹಿತರನ್ನು ಮತ್ತು ಈ ಸಂಸ್ಥೆಯಲ್ಲಿ ಕಲಿತ ಇತರೆ ಹಿರಿಯ ಹಾಗೂ ಕಿರಿಯ ಮಿತ್ರರನ್ನು ನೋಡಿ ನನಗೆ ಅತೀವ ಸಂತೋಷವಾಗುತ್ತಿದೆ. ನಾನು ಈ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಕೆ.ಆರ್.ಪೇಟೆ ಒಂದು ಪುಟ್ಟಹಳ್ಳಿಯಂತಿತ್ತು. ಸಂಜೆಯಾದರೆ ಸಾಕು ರಸ್ತೆಗಳಲ್ಲಿ ಜನ ಸಂಚಾರ ಇರುತ್ತಿರಲಿಲ್ಲ ಎಂದರು.

ಇಂದು ಕೆ.ಆರ್.ಪೇಟೆ ಜಿಲ್ಲಾ ಕೇಂದ್ರವಾಗುವ ಹಂತಕ್ಕೆ ಬೆಳೆದು ನಿಂತಿದೆ. ಕಾಲೇಜಿನ ಅಭಿವೃದ್ಧಿಗೆ ಅಗತ್ಯ ಸೌಲಭ್ಯಗಳನ್ನು ಸರ್ಕಾರದಿಂದ ಮಾಡಿಸಿಕೊಡುವ ಜವಾಬ್ದಾರಿ ನನ್ನದು. ಕಾಲೇಜಿನ ಸಮಸ್ಯೆಗಳ ಪಟ್ಟಿ ಮಾಡಿಕೊಟ್ಟರೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಿದರೆ ಅದರ ಯಶಸ್ಸು ಕಲಿತ ಶಾಲೆ ಮತ್ತು ಕಲಿಸಿದ ಗುರುಗಳಿಗೆ ಸಲ್ಲುತ್ತದೆ. 1958ರಲ್ಲಿ ಆರಂಭವಾದ ಇಲ್ಲಿನ ಪಾಲಿಟೆಕ್ನಿಕ್ ಮಂಡ್ಯ ಜಿಲ್ಲೆಯ ಮೊಟ್ಟ ಮೊದಲ ತಾಂತ್ರಿಕ ಶಿಕ್ಷಣ ಸಂಸ್ಥೆ ಒಂದು ಹೈಸ್ಕೂಲ್ ತರುವುದೇ ಕಷ್ಟಕರವಾಗಿದ್ದ ಕಾಲಘಟ್ಟದಲ್ಲಿ ದಿ.ಎಂ.ಕೆ.ಬೊಮ್ಮೇಗೌಡರು ಸರ್ಕಾರಿ ಪಾಲಿಟೆಕ್ನಿಕ್ ಆರಂಭಿಸಿ ಗ್ರಾಮೀಣ ಪ್ರದೇಶದ ಸಾವಿರಾರು ಬಡವರ ಮಕ್ಕಳು ಎಂಜಿನಿಯರ್‌ಗಳಾಗಲು, ಉದ್ಯಮಿಗಳಾಗಿ ರೂಪುಗೊಳ್ಳಲು ಕಾರಣಕರ್ತರಾಗಿದ್ದಾರೆ ಎಂದರು.

ಈ ಕಾಲೇಜಿನ ವಿದ್ಯಾರ್ಥಿ ಎನ್.ಚಲುವರಾಯಸ್ವಾಮಿ ರಾಜ್ಯದ ಪ್ರಭಾವಿ ಸಚಿವರಾಗಿದ್ದಾರೆ. ಈ ಹಿಂದೆ ಪಾಲಿಟೆಕ್ನಿಕ್ ಕಲಿತರೇ ಉದ್ಯೋಗ ಗ್ಯಾರಂಟಿ ಎನ್ನುವ ಕಾಲವಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಪಾಲಿಟೆಕ್ನಿಕ್ ಸಂಸ್ಥೆಗೆ ಪೂರಕವಾಗಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕೂಡ ಇದೇ ಆವರಣದಲ್ಲಿ ನಡೆಯುತ್ತಿದೆ. ಈ ಎರಡೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ನಮ್ಮ ತಾಲೂಕಿಗೆ ಕಿರೀಟ ಪ್ರಾಯವಾಗಿವೆ ಎಂದರು.

ಇದೇ ವೇಳೆ ಸಚಿವ ಎನ್.ಚಲುವರಾಯಸ್ವಾಮಿ ದಂಪತಿ, ಶಾಸಕ ಎಚ್.ಟಿ.ಮಂಜು ಸೇರಿದಂತೆ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಗೌರವಿಸಲಾಯಿತು. ಕಲಾವಿದರಾದ ಕಂಬದ ರಂಗಯ್ಯ, ವ್ಯಾಸರಾಜ್ ಸೋಸಲೆ, ಶಮಿತಾ ಮಲ್ನಾಡ್, ಹರ್ಷ ರಂಜಿನಿ ಮೊದಲಾದವರಿಂದ ಸಂಗೀತ ಸಂಜೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಧನಲಕ್ಷ್ಮಿಚಲುವರಾಯಸ್ವಾಮಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಧ್ಯಕ್ಷ ಎಸ್.ಬಿ.ಸೋಮೇಶ್, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಪಾಲಿಟೆಕ್ನಿಕ್ ಪ್ರಾಂಶುಪಾಲ ಎಚ್.ಎಸ್.ನಾಗರಾಜು, ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್ ಸೇರಿದಂತೆ ಹಲವರು ಇದ್ದರು.