ಕನ್ನಡಪ್ರಭ ವಾರ್ತೆ ಬೆಳಗಾವಿ

ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರ ಜಮೀನು ಕಬಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಮಕನಮರಡಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೇರಿದೆ.

ನೀಲಕಂಠ ಮುದುಪಾಕಿ, ವಿಜಯ ಶಿವಶಂಕರ ಮಠದ ಹಾಗೂ ಅಶೋಕ ರತ್ನಪ್ಪ ಸೂರ್ಯವಂಶಿ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣದಲ್ಲಿ ಪರಾರಿಯಾಗಿದ್ದ ಉಪ ನೋಂದಣಾಧಿಕಾರಿ ಮಡಿವಾಳಯ್ಯ ಬಸವರಾಜ ಬಾನಿಮಠ ಹಾಗೂ ಆನಂದ ಮಹಾದೇವ ದಡ್ಡಿಮನಿ ನಿರೀಕ್ಷಣಾ ಜಾಮೀನು ಪಡೆದು ಫೆ.8ರಂದು ಯಮಕನಮರಡಿ ಠಾಣೆಗೆ ಹಾಜರಾಗಿದ್ದಾರೆ.

ಕುರಣಿ ಗ್ರಾಮದ ಶಿವಾನಂದ ಮಾರುತಿ ಕುದ್ದೂರಿ ಎಂಬುವರು ಜ.22 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ತಮ್ಮ ಹಾಗೂ ತಮ್ಮ ಬಂಧುಗಳ ಜಮೀನಿಗೆ ಯಾವುದೇ ಸಂಬಂಧವಿಲ್ಲದ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಯನ್ನು ಕಬಳಿಸಲು ಯತ್ನಿಸಿದ್ದಾರೆ ಎಂದು ಶಿವಾನಂದ ಕುದ್ದೂರಿ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿತರಾದ ರೇಣುಕಾ ಶಂಕರ ಮಾಳಿ, ಶಿವರುದ್ರ ಪ್ರಧಾನಿ ಕುದ್ದೂರಿ, ಕಾಶವ್ವ ಶಿವರುದ್ರ ಕುದ್ದೂರಿ, ನೀಲಕಂಠ ಶೆಟ್ಟೆಪ್ಪ ಮುದುಪಾಕಿ, ದಿ.ಅಡಿವೆಪ್ಪ ಮುದುಪಾಕಿ, ಸಿದ್ದಯ್ಯ ಹಿರೇಮಠ, ಆನಂದ ಮಹಾದೇವ ದಡ್ಡಿಮನಿ ಹಾಗೂ ಹುಕ್ಕೇರಿ ಉಪ ನೋಂದಣಾಧಿಕಾರಿ ಸೇರಿ ಸಂಚು ರೂಪಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕುರಣಿ ಗ್ರಾಮದ ಸ.ನಂ.189/4 (21-05-2025) ಹಾಗೂ ಸ.ನಂ.183/30ಬಿ, 183/13ಅ (12-06-2025) ಜಮೀನುಗಳಿಗೆ ಸಂಬಂಧಿಸಿದಂತೆ ಹುಕ್ಕೇರಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಫಿರ್ಯಾದಿದಾರರ ಹೆಸರಿನಲ್ಲಿ ನಕಲಿ ಫೋಟೋ ಹಾಗೂ ಸಹಿಗಳನ್ನು ಬಳಸಿ ಬಿನ್ ಕಬ್ಬಾ ನೋಂದಣಿ ಕರಾರಪತ್ರಗಳನ್ನು ಸಿದ್ಧಪಡಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ತನಿಖೆ ವೇಳೆ ಆರೋಪಿ ನೀಲಕಂಠ ಮುದುಪಾಕಿ ಮನೆಯ ಮೇಲೆ ದಾಳಿ ನಡೆಸಿ 9 ನಕಲಿ ಆಧಾರ್ ಕಾರ್ಡ್, 3 ನಕಲಿ ಪಾನ್ ಕಾರ್ಡ್ ಹಾಗೂ 1 ನಕಲಿ ಮತದಾರರ ಗುರುತಿನ ಚೀಟಿ ಸೇರಿ ಒಟ್ಟು 22 ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಶೋಕ ರತ್ನಪ್ಪ ಸೂರ್ಯವಂಶಿಗೆ ಸೇರಿದ ಫೋಟೋ ಸ್ಟುಡಿಯೋ ಮೇಲೆ ದಾಳಿ ನಡೆಸಿ ನಕಲಿ ದಾಖಲೆ ತಯಾರಿಸಲು ಬಳಸಿದ ಕಂಪ್ಯೂಟರ್, ಲ್ಯಾಪ್‌ಟಾಪ್, ಕ್ಯಾಮೆರಾ, ಎರಡು ಪ್ರಿಂಟರ್ ಹಾಗೂ ಲ್ಯಾಮಿನೇಷನ್ ಯಂತ್ರವನ್ನು ಜಪ್ತಿ ಮಾಡಿದ್ದಾರೆ.