ಒಳಮೀಸಲಾತಿಗಾಗಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ

| Published : Aug 02 2025, 12:00 AM IST

ಸಾರಾಂಶ

ಒಳಮೀಸಲಾತಿ ಕೊಡುವುದು ಭೀಕ್ಷೆಯಲ್ಲ, ಅದು ನಮ್ಮ ಹಕ್ಕಾಗಿದೆ. ಸುಪ್ರೀಂ ಕೋರ್ಟ್‌ ಒಳಮೀಸಲಾತಿ ಜಾರಿಗ ನಿರ್ದೇಶನ ನೀಡಿದ್ದು ಕೆಲ ರಾಜ್ಯಗಳು ಜಾರಿಗೊಳಿಸಿವೆ. ಆದರೆ, ರಾಜ್ಯದಲ್ಲಿ ಜಾರಿಗೊಳಿಸಲು ಸರ್ಕಾರ ಮುಂದಾಗಿಲ್ಲ. ಇಲ್ಲದ ಸಬೂಬು ಹೇಳಿಕೊಂಡು ಮುಂದೂಡುತ್ತಿದೆ.

ಕೊಪ್ಪಳ:

ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಮಾದಿಗ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಮಾದಿಗ ಮಹಾಸಭಾ ಜಂಟಿಯಾಗಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿತು. ಈ ವೇಳೆ ಪೊಲೀಸರು ಹಾಗೂ ಹೋರಾಟಗಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹೋರಾಟಗಾರರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.

ಒಳಮೀಸಲಾತಿ ಕೊಡುವುದು ಭೀಕ್ಷೆಯಲ್ಲ, ಅದು ನಮ್ಮ ಹಕ್ಕಾಗಿದೆ. ಸುಪ್ರೀಂ ಕೋರ್ಟ್‌ ಒಳಮೀಸಲಾತಿ ಜಾರಿಗ ನಿರ್ದೇಶನ ನೀಡಿದ್ದು ಕೆಲ ರಾಜ್ಯಗಳು ಜಾರಿಗೊಳಿಸಿವೆ. ಆದರೆ, ರಾಜ್ಯದಲ್ಲಿ ಜಾರಿಗೊಳಿಸಲು ಸರ್ಕಾರ ಮುಂದಾಗಿಲ್ಲ. ಇಲ್ಲದ ಸಬೂಬು ಹೇಳಿಕೊಂಡು ಮುಂದೂಡುತ್ತಿದೆ ಎಂದು ಹೋರಾಟಗಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನುಗ್ಗಲು ಯತ್ನ:

ಧರಣಿ ಪೂರ್ಣಗೊಳಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದ ಒಳಗೆ ನುಗ್ಗಲು ಯತ್ನಿಸಿದರು. ಮೊದಲೇ ಬ್ಯಾರಿಕೇಡ್ ಅಳವಡಿಸಿಕೊಂಡಿದ್ದ ಪೊಲೀಸರು ಹೋರಾಟಗಾರರನ್ನು ಒಳಗೆ ನುಗ್ಗಲು ಅವಕಾಶ ನೀಡದೆ ಇರುವುದರಿಂದ ಹೈಡ್ರಾಮಾ ನಡೆಯಿತು. ಪರಸ್ಪರ ತಳ್ಳಾಟ, ನೂಕಾಟ ನಡೆದಿದ್ದರಿಂದ ಜಿಲ್ಲಾಡಳಿತ ಭವನದ ಎದುರು ಗೊಂದಲದ ವಾತಾವರಣ ನಿರ್ಮಾಣವಾಗಿದ್ದರಿಂದ ಮತ್ತಷ್ಟು ಭದ್ರತಾ ಪಡೆ ಕರೆಯಿಸಿ ಬಂದೋಬಸ್ತ್ ಒದಗಿಸಲಾಗಿದೆ. ಹೀಗಾಗಿ ಪ್ರತಿಭಟನಾಕಾರರು ಜಿಲ್ಲಾಡಳಿತದ ಒಳನುಗ್ಗಲು ಅವಕಾಶ ನೀಡಲೇ ಇಲ್ಲ. ಆಗ ವಾಗ್ವಾದ ನಡೆದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪರಿಸ್ಥಿತಿ ಕೈಮೀರುವ ಸಾಧ್ಯತೆ ಅರಿತ ಪೊಲೀಸರು ನುಗ್ಗಲು ಯತ್ನಿಸಿದ ಕೆಲವರನ್ನು ಬಂಧಿಸಿ ಬಸ್‌ಗೆ ಹತ್ತಿಸಿದರು.

ಡಿಸಿ ಬರಲಿ:

ಜಿಲ್ಲಾಧಿಕಾರಿ ಪರವಾಗಿ ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಆಗಮಿಸಿದಾಗ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳೇ ಬರಬೇಕೆಂದು ಪಟ್ಟು ಹಿಡಿದರು. ಈ ವೇಳೆ ಗದ್ದಲ ಉಂಟಾಗಿದ್ದರಿಂದ ಎಡಿಸಿ ಮರಳಿ ಹೋದರು. ಆದರೆ, ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅನ್ಯಕಾರ್ಯ ನಿಮಿತ್ತ ಬೇರೆಡೆ ಹೋಗಿರುವ ಕುರಿತು ಹೋರಾಟಗಾರರಿಗೆ ಮನವರಿಕೆ ಮಾಡಲಾಯಿತು. ಬಳಿಕ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಯಾವುದೇ ಕಾರಣ ನೀಡದೆ ಒಳಮೀಸಲಾತಿ ಜಾರಿಗೊಳಿಸಲೇಬೇಕು. ಈಗಾಗಲೇ ಸರ್ಕಾರ ಕೊಟ್ಟ ಗಡುವು ಮುಗಿದಿದ್ದು ಯಾವುದೇ ಕಾರಣ ಹೇಳದೆ ತಕ್ಷಣ ಜಾರಿಗೊಳಿಸಬೇಕೆಂದು ಮನವಿಯಲ್ಲಿ ಜಾರಿ ಮಾಡಲೇಬೇಕು. ಇಲ್ಲದ ಕಾರಣ ನೀಡುವಂತೆಯೇ ಇಲ್ಲ. ಒಳಮೀಸಲಾತಿ ಜಾರಿಗೊಳಿಸುವ ಕುರಿತು ಸರ್ಕಾರವೇ ಸಮಯ ನಿಗದಿ ಮಾಡಿತ್ತು. ಇದೀಗ ಇನ್ನಿಲ್ಲದ ಕಾರಣ ಹೇಳಿ ಮುಂದೂಡಲಾಗುತ್ತಿದೆ. ಇದರಲ್ಲಿ ಷಡ್ಯಂತ್ರ ಅಡಗಿದ್ದು ತಡಮಾಡದೆ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಹಲಗೆ ಬಾರಿಸಿದ ಶ್ರೀಗಳು:

ಹೋರಾಟದ ನೇತೃತ್ವ ವಹಿಸಿದ್ದ ವಿವಿಧ ಶ್ರೀಗಳು ಹಲಗೆ ಬಾರಿಸಿ ತಕ್ಷಣ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಮರುಳುಸಿದ್ಧೇಶ್ವರ ಸ್ವಾಮೀಜಿ, ಆನಂದ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಗವಿಸಿದ್ದಪ್ಪ ಕಂದಾರಿ, ಪರುಶರಾಮ ಆನೆಗೊಂದಿ, ಈರಪ್ಪ ಕುಡುಗುಂಟಿ, ಮಲ್ಲಿಕಾರ್ಜುನ ಪೂಜಾರ, ಹನುಮೇಶ ಕಡೆಮನಿ, ನಿಂಗಪ್ಪ ಮೈನಳ್ಳಿ, ಗಣೇಶ ಹೊರತಟ್ನಾಳ, ರಮೇಶ ಚೌಡಕಿ, ಸುಭಾಸ ಕನಕಗಿರಿ, ದುರಗಪ್ಪ ನಡುಲಮನಿ, ಮಹಾಲಕ್ಷ್ಮಿ ಕಂದಾರಿ, ಸಿದ್ದು ಮಣ್ಣಿನವರ, ನಾಗರಾಜ ಮೇಲಿನಮನಿ, ನಾಗರಾಜ ಕಂದಾರಿ, ಮಾರುತೆಪ್ಪ ಗೌವರಾಳ, ಮಾರೇಶ ಮುಸ್ಟೂರು, ಮಹಾಂತೇಶ ವಕೀಲರು, ಮಾರುತಪ್ಪ ಬೀಕನಳ್ಳಿ, ಪರುಶರಾಮ ಕೆರೆಹಳ್ಳಿ, ಮಂಜುನಾಥ ಮುಸ್ಲಾಪುರ ಇದ್ದರು.