ಸಾರಾಂಶ
ಈ ಹರಾಜು ಪ್ರಕ್ರಿಯೆಯನ್ನು ತಡೆಯಲು ಕೆಲವು ಕಾಣದ ಕೈಗಳು ನಿರಂತರ ಪ್ರಯತ್ನ ನಡೆಸುತ್ತಿವೆ. ಆದರೆ ಈ ಕಾಣದ ಕೈಗಳ ಆಟ ನಡೆಯುವುದಿಲ್ಲ. ಶತಾಯ ಗತಾಯ ಹರಾಜು ಪ್ರಕ್ರಿಯೆ ಏಪ್ರಿಲ್ ಐದರಂದು ನಡದೇ ನಡೆಯುತ್ತದೆ. ಜಿಲ್ಲಾಧಿಕಾರಿಗಳು ನೀಡಿರುವ ನಿರ್ದೇಶನದಂತೆ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ನಿಯಮ ಪಾಲಿಸಲಾಗುವುದು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರಸಭೆ ಒಡೆತನಕ್ಕೆ ಸಂಬಂಧಿಸಿದ ನಗರದ ವಿವಿಧ ಭಾಗಗಳಲ್ಲಿ ಇರುವ ಒಟ್ಟು 96 ಅಂಗಡಿ ಮಳಿಗೆಗಳನ್ನು ಏಪ್ರಿಲ್ ಐದರಂದು ಬೆಳಗ್ಗೆ 11 ಗಂಟೆಗೆ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ನಿರಂತರವಾಗಿ ಬಾಡಿಗೆ ನಿಗದಿಪಡಿಸುವ ಸಲುವಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತರನ್ನು ಆಹ್ವಾನಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಎ.ಗಜೇಂದ್ರ ತಿಳಿಸಿದರು.ನಗರಸಭೆಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಈ ಹರಾಜು ಪ್ರಕ್ರಿಯೆಯನ್ನು ತಡೆಯಲು ಕೆಲವು ಕಾಣದ ಕೈಗಳು ನಿರಂತರ ಪ್ರಯತ್ನ ನಡೆಸುತ್ತಿವೆ. ಆದರೆ ಈ ಕಾಣದ ಕೈಗಳ ಆಟ ನಡೆಯುವುದಿಲ್ಲ. ಶತಾಯ ಗತಾಯ ಹರಾಜು ಪ್ರಕ್ರಿಯೆ ಏಪ್ರಿಲ್ ಐದರಂದು ನಡದೇ ನಡೆಯುತ್ತದೆ ಎಂದರು.
32 ವರ್ಷಗಳ ಬಳಿಕ ಹರಾಜುಕಳೆದ 32 ವರ್ಷಗಳಿಂದಲೂ ವಿವಿಧ ಕಾರಣಗಳಿಂದಾಗಿ ನಗರಸಭೆಯ ಅಂಗಡಿ ಮುಂಗಟ್ಟುಗಳ ಹರಾಜು ಪ್ರಕ್ರಿಯೆ ನಡೆದೇ ಇಲ್ಲ. ಇದರಿಂದ ನಗರಸಭೆಗೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ. ಈಗ ನಗರಸಭೆಯ ಎಲ್ಲಾ 31 ಮಂದಿ ಸದಸ್ಯರು ನಮ್ಮ ನಿರ್ದೇಶಿತ ಸದಸ್ಯರುಗಳು ನಗರಸಭೆಯ ಆದಾಯವನ್ನು ಹೆಚ್ಚಿಸುವ ಸಲುವಾಗಿ ಹಾಗೂ ನಗರದ ಜನತೆಗೆ ಉತ್ತಮ ಮೂಲ ಭೂತ ಸೌಕರ್ಯ ಒದಗಿಸುವ ಸಲುವಾಗಿ ತನ್ನ ಒಡೆತನದಲ್ಲಿರುವ 96 ಅಂಗಡಿಗಳನ್ನು ಹರಾಜು ಮಾಡಲಾಗುವುದು ಎಂದು ವಿವರಿಸಿದರು.
ಜಿಲ್ಲಾಧಿಕಾರಿಗಳು ನೀಡಿರುವ ನಿರ್ದೇಶನದಂತೆ ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ನಿಯಮಗಳನ್ನು ಹಾಗೂ ಅಂಗವಿಕಲರಿಗೆ ಮೀಸಲು ಮುಂತಾದ ಕಾನೂನು ಬದ್ಧ ಕ್ರಮಗಳೊಂದಿಗೆ ಹರಾಜು ನಡೆಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಜೆ.ನಾಗರಾಜ್, ನಗರಸಭೆ ಸದಸ್ಯ ಯತೀಶ್ ಇದ್ದರು.