‘ಲೋ ನವೀನ’ ಸಿನಿಮಾವು ಮಂಡ್ಯ, ಮೈಸೂರು ಭಾಗದ ಹಳ್ಳಿ ಸೊಗಡನ್ನು ಮನರಂಜನಾತ್ಮಕವಾಗಿ ತೆರೆಯ ಮೇಲೆ ತಂದ ಸಿನಿಮಾ ಆಗಿದ್ದು, ಎಲ್ಲ ಕಡೆ ಪ್ರೇಕ್ಷಕರ ಗಮನ ಸೆಳೆದು ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ ಎಂದು ಚಿತ್ರದ ನಾಯಕ ನಟ ನವೀನ್ ಸಜ್ಜು ತಿಳಿಸಿದ್ದಾರೆ.

- ಮಂಡ್ಯ, ಮೈಸೂರು ಗ್ರಾಮೀಣ ಸೊಗಡಿನ, ಕುಟುಂಬ ಸಮೇತ ನೋಡಬಹುದಾದ ಸಿನಿಮಾ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

‘ಲೋ ನವೀನ’ ಸಿನಿಮಾವು ಮಂಡ್ಯ, ಮೈಸೂರು ಭಾಗದ ಹಳ್ಳಿ ಸೊಗಡನ್ನು ಮನರಂಜನಾತ್ಮಕವಾಗಿ ತೆರೆಯ ಮೇಲೆ ತಂದ ಸಿನಿಮಾ ಆಗಿದ್ದು, ಎಲ್ಲ ಕಡೆ ಪ್ರೇಕ್ಷಕರ ಗಮನ ಸೆಳೆದು ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ ಎಂದು ಚಿತ್ರದ ನಾಯಕ ನಟ ನವೀನ್ ಸಜ್ಜು ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಬದುಕಿನ ಕಥೆಯ ನೈಜ ಚಿತ್ರಣ, ಪ್ರೀತಿ, ಸ್ನೇಹ, ಕುಟುಂಬ ಬಾಂಧವ್ಯ, ಗ್ರಾಮೀಣ ಯುವಕ ಜೀವನಶೈಲಿಯನ್ನು ಮನಮುಟ್ಟುವಂತಹ ಕಥೆ ಒಳಗೊಂಡ ‘ಲೋ ನವೀನ’ ಪ್ರೇಕ್ಷಕರ ಮನ ಗೆಲ್ಲುತ್ತಿದೆ ಎಂದರು.

ಧನುರ್ಧಾರಿ ಪವನ್‌ ಚಿತ್ರವನ್ನು ನಿರ್ದೇಶಿಸಿದ್ದು, ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಕೀರ್ತಿ ಸ್ವಾಮಿ, ಬೆನ್ ಚಿಕ್ಕ ಸ್ವಾಮಿ ಹಾಗೂ ಎನ್ಎಸ್‌ ಸ್ಟುಡಿಯೋಸ್‌ ನಿರ್ಮಾಣ ಮಾಡಿರುವ ಚಿತ್ರ ಇದಾಗಿದೆ. ಒಟ್ಟು 8 ಹಾಡುಗಳಿರುವ ‘ಲೋ ನವೀನ’ದಲ್ಲಿ ವರ್ಷ ಗಿರಿಧರ್, ರೇಷ್ಮಾ ಗೌಡ, ಪ್ರಕಾಶ ತುಮ್ಮಿನಾಡು, ಅಪೂರ್ವಶ್ರೀ, ಅಭಿಜಿತ್ ಗೌಡ, ಮಲ್ಲರಾಜು ಮಾರಸಿಂಗನಹಳ್ಳಿ ಸೇರಿದಂತೆ ಹಲವಾರು ಹೊಸ ಕಲಾವಿದರು ಅಭಿನಯಿಸಿದ್ದಾರೆ ಎಂದು ಹೇಳಿದರು.

ಮೇ 15ರಂದು ರಾಜ್ಯಾದ್ಯಂತ ತೆರೆ ಕಂಡ ‘ಲೋ ನವೀನ’ ಮೈಸೂರು, ಮಂಡ್ಯ ಹಾಗೂ ಇತರೆ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾ ಇದಾಗಿದೆ. ನಾಯಕನಾಗಿ ತಾವು ಅಭಿನಯಿಸಿದ ಮೊದಲ ಚಿತ್ರಕ್ಕೆ ಜನರಿಂದ ಉತ್ತಮ ಸ್ಪಂದನೆ, ಪ್ರೋತ್ಸಾಹ ವ್ಯಕ್ತವಾಗುತ್ತಿದೆ. ಇದು ತಮ್ಮಲ್ಲಿ ಮತ್ತಷ್ಟು ಆತ್ಮವಿಶ್ವಾಸ ಮೂಡಿಸಿದೆ ಎಂದು ತಿಳಿಸಿದರು.

​ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಹೊಸ ಅಲೆ ಎಬ್ಬಿಸುತ್ತಿರುವ ಈ ಚಿತ್ರದ ಮೊದಲಾರ್ಧದಲ್ಲಿ ಹಳ್ಳಿ ಸೊಗಡಿನ ಭರಪೂರ ಕಾಮಿಡಿ ಹಾಗೂ ತುಂಟಾಟ ಪ್ರೇಕ್ಷಕರನ್ನು ನಗಿಸಿದರೆ, ದ್ವಿತೀಯಾರ್ಧದಲ್ಲಿ ಕಥೆ ಕೊಂಚ ಗಂಭೀರ ತಿರುವು ಪಡೆದುಕೊಳ್ಳುತ್ತದೆ. ಚಿತ್ರಕ್ಕೆ ತಾವೇ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳು ಚಿತ್ರದ ದೊಡ್ಡ ಫ್ಲಸ್ ಪಾಯಿಂಟ್. ಅದರಲ್ಲೂ ವಿಶೇಷವಾಗಿ ಎಚ್.ಡಿ.ಕೋಟೆ ಗ್ರಾಮೀಣ ಪ್ರತಿಭೆಗಳಾದ ಚಮ್ಮಮ್ಮ ಹಾಗೂ ಲಕ್ಷಮ್ಮ ಹಾಡಿರುವ ಜನಪದ ಶೈಲಿಯ ಕೋಣಾಣೆ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದ್ದು, ಪ್ರೇಕ್ಷಕರ ಮನಗೆದ್ದಿದೆ ಎಂದು ನವೀನ ಸಜ್ಜು ಹೇಳಿದರು.

ದಾವಣಗೆರೆಯ ಗುಡ್ಡಪ್ಪ ಇತರರು ಇದ್ದರು.

- - -

-26ಕೆಡಿವಿಜಿ4: ದಾವಣಗೆರೆಯಲ್ಲಿ ಮಂಗಳವಾರ ‘ಲೋ ನವೀನ’ ಸಿನಿಮಾದ ನಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.