ಸಾರಾಂಶ
ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಇಡಿ ವಾಹನದ ಮೂಲಕ ಚುನಾವಣಾ ಪ್ರಚಾರ ಕೈಗೊಳ್ಳುವ ಆಡಿಯೋ, ವಿಡಿಯೋವನ್ನು ರಾಜ್ಯ ಬಿಜೆಪಿ ಚುನಾವಣಾ ಸಂಚಾಲಕ ವಿ.ಸುನಿಲ್ ಕುಮಾರ್ ಉದ್ಘಾಟಿಸಿದರು.
ಗುರುವಾರ ಬಿಜೆಪಿ ಕಚೇರಿ ಮುಂಭಾಗ ಈ ಪ್ರಚಾರದ ವಾಹನಗಳಿಗೆ ಚಾಲನೆ ನೀಡಲಾಯಿತು. ಕೇಂದ್ರದ ಸಾಧನೆ ಪ್ರಚಾರವನ್ನು ರೀಲ್ಸ್ ಹಾಡಿನ ಮೂಲಕ ಕೈಗೊಳ್ಳಲಾಗುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಎಲ್ಇಡಿ ವಾಹನ ಮೂಲಕ ಪ್ರಚಾರ ಮಾಡಲಾಗುತ್ತದೆ. ಸಾಂಸ್ಕೃತಿಕ ಭಾರತ, ಸುಧಾರಿತ ಭಾರತದ ಪರಿಕಲ್ಪನೆಯಡಿ ಪ್ರಚಾರ ಕೈಗೊಳ್ಳಲಾಗುತ್ತದೆ.
ಮುದ್ರಾ ಯೋಜನೆ ಕುರಿತು ವಿಡಿಯೋ ಹರಿಕಥೆ ಮಾಡಲಾಗಿದೆ. ಅಲ್ಲದೇ, ಕಾಂಗ್ರೆಸ್ ವೈಫಲ್ಯತೆ ಬಗ್ಗೆಯೂ ಪ್ರಚಾರ ಕಾರ್ಯ ನಡೆಸಲಾಗುತ್ತದೆ. ಭಾರತದ ಹೆಮ್ಮೆಯ ಪುತ್ರ ಮೋದಿ.. ಎಂಬ ಹಾಡಿನ ಬಗ್ಗೆಯೂ ಪ್ರಚಾರ ಮಾಡಲಾಗುತ್ತದೆ. ಪ್ರಚಾರ ವಾಹನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುವುದು. 10 ವರ್ಷಗಳ ಸಾಧೆನಗಳ ಕುರಿತು ವಿಡಿಯೋ ತಯಾರಿಸಲಾಗಿದೆ. ಆಡಿಯೋ, ವಿಡಿಯೋ ಮೂಲಕ ಜನರ ಬಳಿ ಬಿಜೆಪಿ ತೆರಳಿ ಮತಯಾಚಿಸಲಿದೆ.