ಆ.20ಕ್ಕೆ ಅರಸು, ನಾರಾಯಣ ಗುರು ಜನ್ಮದಿನ

| Published : Aug 09 2024, 12:33 AM IST

ಸಾರಾಂಶ

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಡಿ.ದೇವರಾಜ ಅರುಸುರವರ ಜನ್ಮ ದಿನಾಚರಣೆ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಆ.20ರಂದು ಡಿ.ದೇವರಾಜ ಅರಸುರವರ 109 ನೇ ಜನ್ಮ ದಿನಾಚರಣೆ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಡಿ.ದೇವರಾಜ ಅರುಸುರವರ ಜನ್ಮ ದಿನಾಚರಣೆ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಸಮಾರಂಭಕ್ಕೆ ಆಹ್ವಾನಿಸುವ ಗಣ್ಯರನ್ನು ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಆಹ್ವಾನಿಸಬೇಕು. ಡಿ.ದೇವರಾಜ ಅರಸು ಮತ್ತು ಶ್ರೀ ನಾರಾಯಣ ಗುರುರವರ ಜಯಂತಿಗಳು ಒಂದೇ ದಿನ ಇರುವ ಕಾರಣ ವಿವಿಧ ಸಂಘಟನೆಗಳು ಎಲ್ಲಿ ಮತ್ತು ಯಾವ ಸಮಯದಲ್ಲಿ ಜಯಂತಿಗಳನ್ನು ಆಚರಿಸಬೇಕು ಹಾಗೂ ಮುಖಂಡರು ಉಲ್ಲೇಖಿಸಿದ ಉಪನ್ಯಾಸಕರಿಂದ ಅರಸುವರವ ಕುರಿತು ಉಪನ್ಯಾಸ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಹಿಂದುಳಿದ ವರ್ಗಗಳಿಗಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಲಾಗುವುದು. ಒಂದೇ ವೇದಿಕೆಯನ್ನು ಅರಸು ಮತ್ತು ನಾರಾಯಣ ಗುರು ಜಯಂತಿ ಆಚರಣೆ ಮಾಡಿದರೆ ಸೂಕ್ತ. ಮಳೆ ಬೀಳುತ್ತಿರುವುದರಿಂದ ಮೆರವಣಿಗೆ ಕುರಿತು ನಂತರ ನಿರ್ಧಾರ ಮಾಡೋಣ. ಎಲ್ಲರೂ ಸೇರಿ ಜಯಂತಿಯನ್ನು ಯಶಸ್ವಿಯಾಗಿಸೋಣ. ಅದಕ್ಕೆ ಅಗತ್ಯವಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಎಲ್ಲ ಇಲಾಖೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳ ಸಹಯೋಗ ಮತ್ತು ಸಮನ್ವಯತೆಯಿಂದ ಅರಸುರವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಡಿ.ದೇವರಾಜ ಅರಸುರವರು ಮತ್ತು ಶ್ರೀ ನಾರಾಯಣ ಗುರುರವರ ಜಯಂತಿಗಳು ಒಂದೇ ದಿನ ಇರುವ ಕಾರಣ ಒಂದೇ ವೇದಿಕೆಯಲ್ಲಿ ಎರಡು ಜಯಂತಿಗಳನ್ನು ಆಚರಿಸಬಹುದು ಎಂದು ದಲಿತ ಸಂಘಟನೆ ಮತ್ತು ವಿವಿಧ ಸಂಘಟನೆಗಳ ಮುಖಂಡರು ಸಲಹೆ ನೀಡಿದರು.

2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಸ್ನಾತಕೋತ್ತರ ಪದವಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ನಿಯಲಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವಂತೆ ಹಾಗೂ ಹಿಂದುಳಿದ ವರ್ಗಗಳ ಏಳ್ಗೆಗಾಗಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವಂತೆ ಮನವಿ ಮಾಡಿದರು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶೋಭಾ ಮಾತನಾಡಿ, ವಿದ್ಯಾರ್ಥಿನಿಲಯಗಳ ನಿಲಯಾರ್ಥಿಗಳಿಗೆ ಪ್ರಬಂಧ, ಭಾಷಣ, ರಸಪ್ರಶ್ನೆ, ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ, ಜಯಂತಿಯಂದು ಬಹುಮಾನ ನೀಡಲಾಗುವುದು ಎಂದರು.

ಸಭೆಯಲ್ಲಿ ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ತೀ.ನಾ.ಶ್ರೀನಿವಾಸ್‌, ಬಿ.ರಾಜು, ಶ್ರೀಧರ್ ಹುಲ್ತಿಕೊಪ್ಪ, ಎಸ್.ಪಿ. ಶೇಷಾದ್ರಿ, ರಾಜ್‌ಕುಮಾರ್, ವೆಂಕಟೇಶ್, ಎಂ.ಏಳುಕೋಟಿ, ಮೂರ್ತಿ, ಷಣ್ಮುಗಂ, ರವಿಕುಮಾರ್, ವಿಜಯಕುಮಾರ್, ಮಹಾಲಿಂಗಪ್ಪ, ಲೋಕೇಶ್, ಹನುಮಂತಪ್ಪ, ಚನ್ನವೀರಪ್ಪ, ಪ್ರಕಾಶ್ ಇತರರು ಹಾಜರಿದ್ದರು.

ಅರಸು ಭವನ ಕಾಮಗಾರಿ ಪೂರ್ಣಗೊಳಿಸಿ :

ಅರ್ಧಕ್ಕೆ ನಿಂತಿರುವ ಡಿ.ದೇವರಾಜ ಅರಸು ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ತರಿಸಿಕೊಂಡು ಕಾಮಗಾರಿ ಪೂರ್ಣಗೊಳಿಸು ವಂತೆ ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅರಸುರವರ ಕುರಿತಾದ ಕಿರು ಪುಸ್ತಕಗಳನ್ನು ವಿತರಿಸುವಂತೆ ದಲಿತ ಸಂಘಟನೆ ಮತ್ತು ವಿವಿಧ ಸಂಘಟನೆಗಳ ಮುಖಂಡರು ಪೂರ್ವಭಾವಿ ಸಭೆಯಲ್ಲಿ ಮನವಿ ಮಾಡಿದರು.