ಚಾಮರಾಜನಗರ : ಸಾವಯವ ಕೃಷಿಯತ್ತ ಮುಖಮಾಡಿ : ಕೀಟಶಾಸ್ತ್ರಜ್ಞ ಡಾ.ಶಿವರಾಯ್ ನಾವಿ ಕರೆ

| Published : Sep 07 2024, 01:45 AM IST / Updated: Sep 07 2024, 05:25 AM IST

ಸಾರಾಂಶ

ಚಾಮರಾಜನಗರದಲ್ಲಿ ನಡೆದ ‘ಅರಿಶಿನ ಮತ್ತು ತೆಂಗು ಬೆಳೆ ವಿಚಾರ ಸಂಕೀರಣ’ ಕಾರ್ಯಕ್ರಮದಲ್ಲಿ ಕೀಟಶಾಸ್ತ್ರಜ್ಞ ಡಾ.ಶಿವರಾಯ್ ನಾವಿ ರೈತರಿಗೆ ಸಾವಯವ ಕೃಷಿಯ ಮಹತ್ವವನ್ನು ತಿಳಿಸಿದರು. ಜೈವಿಕ ವಿಧಾನಗಳ ಮೂಲಕ ಬೆಳೆಗಳಲ್ಲಿ ರೋಗ ಮತ್ತು ಕೀಟಗಳನ್ನು ನಿಯಂತ್ರಿಸುವ ಬಗ್ಗೆ ಮಾಹಿತಿ ನೀಡಿದರು.

  ಚಾಮರಾಜನಗರ : ವಾಸ್ತವದಲ್ಲಿ ಸಾವಯವ ಕೃಷಿಗೆ ಹೆಚ್ಚು ಆದ್ಯತೆಯಿದ್ದು, ಎಲ್ಲರೂ ಸಾವಯವದತ್ತ ಗಮನ ಕೊಡಬೇಕೆಂದು ಕೀಟಶಾಸ್ತ್ರಜ್ಞ ಡಾ.ಶಿವರಾಯ್ ನಾವಿ ಹೇಳಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಕೃಷಿ ಮಹಾವಿದ್ಯಾಲಯ ಚಾಮರಾಜನಗರ ಇವರ ವತಿಯಿಂದ ಅಂತಿಮ ವರ್ಷದ ಬಿಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹರವೆ ಹೋಬಳಿ ಬೆಟ್ಟದಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಅರಿಶಿನ ಮತ್ತು ತೆಂಗು ಬೆಳೆ ವಿಚಾರ ಸಂಕೀರಣ’ ಕಾರ್ಯಕ್ರಮದಲ್ಲಿ ಮಾತನಾಡಿ, ' ಗ್ರಾಮದಲ್ಲಿ ಬೆಳೆಯುವ ಅರಿಶಿಣ ಮತ್ತು ತೆಂಗಿನಲ್ಲಿ ಕಂಡುಬರುವ ರೋಗ ಹಾಗೂ ಕೀಟಗಳ ನಿರ್ವಹಣೆಯನ್ನು ಜೈವಿಕವಾಗಿ ಹೇಗೆ ಮಾಡಬಹುದೆಂಬ'' ರೈತರ ಪ್ರಶ್ನೆಯ ಕುರಿತು ಟ್ರೈಕೋಗ್ರಾಮ, ಟ್ರೈಕೋಡರ್ಮ, ಸೂಡೋಮೊನಾಸ್ ನಂತಹ ಜೀವಾಣುಗಳ ಸಹಾಯದಿಂದ ಬೆಳೆಗಳಲ್ಲಿ ರೋಗ ಮತ್ತು ಕೀಟಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

ಕೊಟ್ಟಿಗೆ ಗೊಬ್ಬರದ ತಯಾರಿಕೆ ಮತ್ತು ಬಳಕೆಯ ಬಗ್ಗೆ ವಿವರಿಸಿದರು. ಹೀಗೆ ರೈತರ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ರೈತರಿಗೆ ಹೊಸ ತಾಂತ್ರಿಕತೆಗಳನ್ನು ಉಣಬಡಿಸಿದರು. ವಿಜ್ಞಾನಿಗಳಿಗೆ ಸಾವಯವ ಕುರಿತು ಹಲವಾರು ಪ್ರಶ್ನೆ ಕೇಳುವ ಮೂಲಕ ರೈತರು ಸಾವಯವದಲ್ಲಿ ತಮಗಿರುವ ಆಸಕ್ತಿಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಅರಿಶಿನ ಮತ್ತು ತೆಂಗಿನ ಬೇಸಾಯ ಕ್ರಮಗಳನ್ನು ಆಡಿಯೋ ವಿಡಿಯೋ ದೃಶ್ಯಗಳ ಸಹಾಯದಿಂದ ಗ್ರಾಮಸ್ಥರಿಗೆ ವಿವರಿಸಿದರು. ಅದರಲ್ಲಿ ಬರುವ ರೋಗ ಕೀಟ ಹಾಗೂ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತಿಳಿಸಿದರು.

ಸಹಾಯಕ ಪ್ರಾಧ್ಯಾಪಕ ಡಾ.ಜಿ.ನಾಗೇಶ ಅವರು ಮಣ್ಣಿನ ಪರೀಕ್ಷೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ.ಎಚ್.ಟಿ.ನಾಗರಾಜ್, ಡಾ.ಎ.ಎಸ್.ಕಾಂಬಳೆ, ಡಾ.ರವೀಂದ್ರ, ಡಾ.ಜಿ. ನಾಗೇಶ್, ಶಿವಕುಮಾರ್ ಗ್ರಾಪಂ ಅಧ್ಯಕ್ಷರು, ಸುಭದ್ರಮ್ಮ (ಕಡಪ್ಪ) ಗ್ರಾಪಂ ಸದಸ್ಯರು, ಗೌ.ಮಾದೇವಪ್ಪ ಮತ್ತು ಪುಟ್ಟಪ್ಪ, ಚನ್ನಬಸಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಗ್ರಾಮದ ಎಲ್ಲ ಗಣ್ಯರು, ಗ್ರಾಮಸ್ಥರು ಮತ್ತು ಮಕ್ಕಳು ಉಪಸ್ಥಿತರಿದ್ದರು.