ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಶಿಕ್ಷಣ ಇಲಾಖೆ ಅಧಿಕಾರಿಗಳ ಕಿರುಕುಳದಿಂದ ಖಾಸಗಿ ಶಾಲೆಗಳನ್ನು ರಕ್ಷಿಸುವಂತೆ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಆರೋಪಿಸಿದರು.ಖಾಸಗಿ ಶಾಲೆಗಳ ನಿಯಮ ಪಾಲನೆ ವಿಚಾರದಲ್ಲಿ ತಮಗಿಷ್ಟ ಬಂದಂತೆ ನಿಯಮ ರೂಪಿಸುತ್ತಿರುವ ಶಿಕ್ಷಣ ಇಲಾಖೆ ಉಪನಿರ್ದೇಶಕರು ನಿಯಮ ಪಾಲನೆ ನೆಪದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಇಲ್ಲದ ಮಕ್ಕಳ ರಕ್ಷಣೆ ವಿಚಾರ ಖಾಸಗಿ ಶಾಲೆಗಳು ಅಳವಡಿಸಿ ಎಂದು ನಿಯಮ ಜಾರಿಗೊಳಿಸುತ್ತಿದ್ದಾರೆ. ೨೦೧೮ರ ನಂತರದ ಶಾಲೆಗಳಿಗೆ ಅಳವಡಿಸಿರುವ ನಿಯಮಗಳನ್ನು ಹಳೇ ಖಾಸಗಿ ಶಾಲೆಗಳು ಆಳವಡಿಸಿಕೊಳ್ಳಿ ಎಂಬ ನಿಯಮ ಖಾಸಗಿ ಶಾಲೆಗಳಿಗೆ ಮಾರಕವಾಗಿದ್ದು ಶಾಲೆಗಳನ್ನು ಮುಚ್ಚುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಧಿಕಾರಿಗಳ ಕಿರುಕುಳದ ಬಗ್ಗೆ ಸರ್ಕಾರದ ಗಮನಕ್ಕೆ ತಂದ ನಂತರ ಉಪನಿರ್ದೇಶಕ ಕೆಲಸಗಳನ್ನು ಗಮನಿಸಲು ಸರ್ಕಾರ ಜಂಟಿ ನಿರ್ದೇಶಕರನ್ನು ನೇಮಿಸಿದೆ ಇದರಿಂದ ಉಗ್ರರಾಗಿರುವ ಉಪನಿರ್ದೇಶಕರುಗಳು ನಿಯಮ ಪಾಲನೆ ನೆಪವಾಗಿಟ್ಟುಕೊಂಡು ಶಾಲೆಗಳ ಪರವನಾಗಿಯನ್ನು ನವೀಕರಿಸುತ್ತಿಲ್ಲ ಎಂದರು.
ಸರ್ಕಾರ ಪ್ರತಿ ವಿದ್ಯಾರ್ಥಿಯ ಶಿಕ್ಷಣಕ್ಕಾಗಿ ಪ್ರತಿ ವರ್ಷ ೧ರಿಂದ ೧.೫ ಲಕ್ಷದವರೆಗೂ ಖರ್ಚು ಮಾಡುತ್ತಿದೆ. ಆದರೆ, ಬಹುತೇಕ ಖಾಸಗಿ ಶಾಲೆಗಳು ೨೦-೪೦ ಸಾವಿರ ಹಣ ಪಡೆದು ಒಂದು ವರ್ಷದ ಶಿಕ್ಷಣ ನೀಡುವ ಮೂಲಕ ಸರ್ಕಾರಕ್ಕೆ ಸಹಾಯಕವಾಗಿ ಕೆಲಸ ಮಾಡುತ್ತಿದೆ. ಆದರೂ ಅಧಿಕಾರಿಗಳ ಕಿರುಕುಳ ತಪ್ಪದಾಗಿದೆ. ಅಧಿಕಾರಿಗಳ ವರ್ತನೆ ಹೀಗೆ ಮುಂದುವರಿದರೆ ಹಿಂದೆ ನಡೆಸಿದ ಪ್ರತಿಭಟನೆಗಿಂತ ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಹಾಸನ ಜಿಲ್ಲಾಧ್ಯಕ್ಷ ಶಿವರಾಮೇಗೌಡ, ಉಪಾಧ್ಯಕ್ಷ ತಾರಸ್ವಾಮಿ, ಕಾರ್ಯದರ್ಶಿ ಗಂಗಾಧರ, ತಾಲೂಕು ಅಧ್ಯಕ್ಷ ಮಲ್ನಾಡ್ ಜಾಕೀರ್, ಕಾರ್ಯದರ್ಶಿ ವೈ.ಎಸ್. ಗಿರೀಶ್ ಮುಂತಾದವರಿದ್ದರು.