ಕನ್ನಡ ಸಾಹಿತ್ಯ, ವಚನಗಳು ಜನರ ಜ್ಞಾನ ಬೆಳಸುತ್ತಿವೆ

| Published : Mar 10 2025, 01:30 AM IST

ಸಾರಾಂಶ

ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ವಿವಿಧ ಕ್ಷೇತ್ರ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಸಾಹಿತ್ಯ ಮತ್ತು ವಚನಗಳು ಎಂದಿಗೂ ಜನರ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಜ್ಞಾನವನ್ನು ಬೆಳಸುತ್ತಿವೆ ಎಂದು ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ತಿಳಿಸಿದರು.

ನಗರದ ಜೆಎಲ್‌ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಬಿ. ಸಂತೋಷ್ ಅವರ ವಚನ ವೈವಿಧ್ಯ ಎಂಬ 6ನೇ ಆಧುನಿಕ ವಚನಗಳ ಸಂಕಲನ ಹಾಗೂ ಬಿ. ಶೋಭಾ ಅವರ ಮನದ ಹಾಯ್ಕುಗಳು ಎಂಬ ಸಂಕಲನವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಕವಿ ಪಂಪನಿಂದ ಆರಂಭವಾದ ಕಾವ್ಯದ ಪರಂಪರೆ ಇಂದಿಗೂ ಪ್ರಸ್ತುತವಾಗಿದೆ. ಆದರೆ, ಅದಕ್ಕೆ ಕಾಲ ಕಾಲಕ್ಕೆ ತಕ್ಕಂತೆ ವಿವಿಧ ಆಯಾಮಗಳಾಗಿ ಗುರುತಿಸಿಕೊಡಿದ್ದಾರೆ. ಯಾವುದೇ ಶ್ರೇಷ್ಠ ಕವಿಯಾದರೂ ಕಾವ್ಯ ಅವರಿಗೆ ಪ್ರಾಥಮಿಕವಾಗಿದೆ ಎಂದು ಅವರು ಹೇಳಿದರು.

ಬಸವಣ್ಣ ಹಾಗೂ ವಚನಕಾರರು 12ನೇ ಶತಮಾನದಲ್ಲಿಯೇ ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವಂತಹ ವಚನಗಳನ್ನು ನೀಡಿದ್ದಾರೆ. ವಚನಗಳಿಂದ ಸಮಾಜದ ಮಹತ್ವವನ್ನು ತಿಳಿದುಕೊಂಡು ಬರುತ್ತಿದ್ದೇವೆ. ವಚನಗಳು ವೈವಿಧ್ಯಮಯದಿಂದ ಕೂಡಿದೆ ಎಂದರು.

ಪ್ರಶಸ್ತಿ ಪ್ರದಾನ

ಇದೇ ವೇಳೆ ಮಹಿಪಾಲರೆಡ್ಡಿ ಮನ್ನೂರ್‌ ಅವರಿಗೆ ಕರುನಾಡ ಸಾಧನಾ ರತ್ನ, ಡಾ. ಮಲ್ಲಿನಾಥ ಎಸ್. ತಳವಾರ ಅವರಿಗೆ ಕರುನಾಡ ಸಾಹಿತ್ಯ ರತ್ನ, ಡಾ. ಸೋಮಶೇಖರ್‌ ಅವರಿಗೆ ವಿದ್ಯಾವಾರಿಧಿ ಪ್ರಶಸ್ತಿ, ಉಳುವಂಗಡ ಕಾವೇರಿ ಉದಯ ಅವರಿಗೆ ಬಹುಭಾಷಾ ಸಾಹಿತ್ಯ ಚೇತನ ಪ್ರಶಸ್ತಿ, ಕೆ.ಎನ್. ಹಿತೈಶ್ ಭೂಷಣ್ ಮತು ರೋನಿತ್ ಟಿ. ಗಿರೀಶ್‌ ಅವರಿಗೆ ಬಾಲಶ್ರೀ, ಎಚ್.ಎನ್. ನಾಗಸಿರಿ ಮತ್ತು ವಿ. ಭುವಂತ್‌ ಅವರಿಗೆ ಯುವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಚನ ವೈವಿಧ್ಯ ಕುರಿತು ಬಿ. ಶೋಭಾ ಹಾಗೂ ಮನದ ಹಾಯ್ಕುಗಳು ಕುರಿತು ಡಾ. ಮಲ್ಲಿನಾಥ ಎಸ್. ತಳವಾರ ಮಾತನಾಡಿದರು. ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂತೋಷ್, ಪದಾಧಿಕಾರಿಗಳಾದ ಸಿ. ವಾಣಿ ರಾಘವೇಂದ್ರ, ಎ. ಹೇಮಗಂಗಾ, ಸೌಗಂಧಿಕಾ ವಿ. ಜೋಯಿಸ್, ಕವಯತ್ರಿ ಎನ್.ಆರ್. ರೂಪಶ್ರೀ, ವಿದುಷಿ ಎಸ್.ವಿ. ಪನ್ನಗ, ಪರಮೇಶ ಕೆ. ಉತ್ತನಹಳ್ಳಿ ಮೊದಲಾದವರು ಇದ್ದರು.