ಕನ್ನಡಪ್ರಭವಾರ್ತೆ ತಿಪಟೂರು
ನಗರದ ಸೀತಾರಾಮಯ್ಯ ಕಲ್ಯಾಣ ಮಂಟಪದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ತಿಪಟೂರು ಶಾಖೆಯ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಸಿ.ಪಿ.ಆರ್ ತರಬೇತಿ ಶಿಬಿರದಲ್ಲಿ ಹೃದಯ ಸಂಬಂಧಿತ ತುರ್ತು ಪರಿಸ್ಥಿತಿಗಳ ಬಗ್ಗೆ ಜನರಿಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶಿಬಿರದಲ್ಲಿ ಸಿದ್ದೇಶ್ವರ ಆಸ್ವತ್ರೆಯ ಹೃದಯ ತಜ್ಞ ಡಾ.ಸಂತೋಷ್ ಹೃದಯಸ್ತಂಭನ ಮತ್ತು ಹೃದಯಘಾತ ನಡುವಿನ ವ್ಯತ್ಯಾಸವನ್ನು ವಿವರಿಸಿ, ಹೃದಯ ಸ್ತಂಭವು ಆಕಸ್ಮಿಕವಾಗಿ ಹೃದಯದ ಸ್ಪಂದನೆ ನಿಂತು ಹೋಗುವ ಅಪಾಯಕಾರಿ ಸ್ಥಿತಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಕ್ಷಣ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಜೀವಾಪಾಯ ಉಂಟಾಗಬಹುದು. ತಕ್ಷಣ ಸಿ.ಪಿ.ಆರ್ ಪ್ರಾರಂಭಿಸುವುದು ಅತ್ಯಗತ್ಯ. ವ್ಯಕ್ತಿಯನ್ನು ನೆಟ್ಟಗೆ ಮಲಗಿಸಿ, ಎದೆ ಮಧ್ಯಭಾಗದಲ್ಲಿ ಎರಡು ಕೈಗಳನ್ನು ಒಂದರ ಮೇಲೆ ಒಂದನ್ನು ಇಟ್ಟು, ಸಮಬಲದಲ್ಲಿ ಒತ್ತುವಿಕೆ ನೀಡಬೇಕು. ೩೦ ಒತ್ತುವಿಕೆಗಳ ನಂತರ ೨ ಬಾರಿ ಉಸಿರಾಟ ನೀಡುವ ವಿಧಾನವನ್ನು ಅನುಸರಿಸಬೇಕು. ಪ್ರಕ್ರಿಯೆಯನ್ನು ವೈದ್ಯಕೀಯ ಸಹಾಯ ಬರುವವರೆಗೆ ಅಥವಾ ವ್ಯಕ್ತಿ ಸ್ಪಂದಿಸುವವರೆಗೆ ನಿರಂತರವಾಗಿ ಮುಂದುವರಿಸುವುದು ಬಹಳ ಮುಖ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿಸಂಸ್ಥೆಯ ಉಪಾಧ್ಯಕ್ಷೆ ಪೂರ್ಣಿಮಾ, ಡಾ.ಪ್ರಶಾಂತ್, ಮಾಜಿ ಕಾರ್ಯದರ್ಶಿ ವಿದ್ಯಾಧರ್, ನಿಜಲಿಂಗಪ್ಪ, ಆರ್ಥಿಕ ಸಮಾಲೋಚಕಿ ರೇಖಾ, ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಎಲ್ಲಾ ಹಿರಿಯ ಸದಸ್ಯರು ಸಾರ್ವಜನಕರು ಭಾಗವಹಿಸಿದ್ದರು.