ಸಮಾಜದ ಸಶಕ್ತೀಕರಣಕ್ಕಾಗಿ ಸರ್ಕಾರ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅವುಗಳಲ್ಲಿ ಪಿಎಂ ಉಶಾ ಯೋಜನೆ ಪ್ರಮುಖ ಸ್ಥಾನ ಹೊಂದಿದೆ ಎಂದು ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಾಜದ ಸಶಕ್ತೀಕರಣಕ್ಕಾಗಿ ಸರ್ಕಾರ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅವುಗಳಲ್ಲಿ ಪಿಎಂ ಉಶಾ ಯೋಜನೆ ಪ್ರಮುಖ ಸ್ಥಾನ ಹೊಂದಿದೆ ಎಂದು ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಐಕ್ಯೂಎಸಿ ಹಾಗೂ ಪರೀಕ್ಷಾ ವಿಭಾಗದ ಸಹಯೋಗದೊಂದಿಗೆ ಬಿಎಲ್‌ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಮಹಿಳಾ ಮಹಾವಿದ್ಯಾಲಯದಲ್ಲಿ ಪಿಎಂ ಉಷಾ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ, ರಾಜ್ಯ ಸರ್ಕಾರದಡಿ ಬುಧವಾರ ನಡೆದ ಎಬಿಸಿ-ಅಕಾಡೆಮಿಕ್ ಬ್ಯಾಂಕ್ ಆಪ್ ಕ್ರೇಡಿಟ್ಸ್ ಅರಿವು ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಯೋಜನೆಗಳ ಪ್ರಯೋಜನಗಳನ್ನು ತಲುಪಬೇಕಾದ ವರ್ಗಗಳಿಗೆ, ಪರಿಣಾಮಕಾರಿಯಾಗಿ ತಲುಪಲು ಇಂತಹ ಜಾಗೃತಿ ಮತ್ತು ಕೌಶಲ್ಯವರ್ಧಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವುದು ಅವಶ್ಯವಾಗಿದೆ. ಮಹಿಳಾ ಸಬಲೀಕರಣವೇ ರಾಷ್ಟ್ರದ ಸಬಲೀಕರಣಕ್ಕೆ ಆಧಾರ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಬಹುಶಿಸ್ತಿನ ವಿಧಾನಗಳ ಮೂಲಕ ಎನ್ಇಪಿ ಅಡಿಯಲ್ಲಿ ವಿದ್ಯಾರ್ಥಿನಿಯರು ಜ್ಞಾನ ವೃದ್ಧಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಮನಃಸ್ಥಿತಿಯೇ ವಿದ್ಯಾರ್ಥಿನಿಯರ ಭವಿಷ್ಯ ಉಜ್ವಲಗೊಳಿಸುತ್ತದೆ ಎಂದು ಹೇಳಿದರು.

ಮಹಿಳಾ ವಿವಿಯ ಐಕ್ಯೂಎಸಿ ನಿರ್ದೇಶಕ ಪ್ರೊ.ಪಿ.ಜಿ.ತಡಸದ ಮಾತನಾಡಿ, ಉನ್ನತ ಶಿಕ್ಷಣವು ಅನೇಕ ಅವಕಾಶಗಳನ್ನು ತೆರೆದಿದ್ದು ಅದರ ಲಾಭಗಳನ್ನು ಪಡೆದುಕೊಳ್ಳಬೇಕಾದರೆ ಡಿಜಿಲಾಕರ್ ಹಾಗೂ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್‌ ಸದುಪಯೋಗ ಪಡೆದುಕೊಳ್ಳಬೇಕು. ಎನ್‌ಇಪಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಬೇಕಾದರೆ ಎಬಿಸಿ ಹಾಗೂ ಡಿಜಿಲಾಕರ್ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಅವಶ್ಯಕ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮಹಿಳಾ ವಿವಿಯ ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಜಿ.ರಜಪೂತ ಹಾಗೂ ತುಮಕೂರು ವಿವಿ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಡಾ.ರೂಪೇಶ್ ಕುಮಾರ್ ಕೆ. ಉಪನ್ಯಾಸ ನೀಡಿದರು. ಪ್ರಾಚಾರ್ಯ ವೈ. ತಮ್ಮಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ನಿರ್ದೇಶಕಿ ಡಾ.ಭಕ್ತಿ. ಮಹೀಂದ್ರಕರ್, ಬಿ.ಕಾಂ ವಿಭಾಗದ ಮುಖ್ಯಸ್ಥೆ ಡಾ.ಜಯಶ್ರೀ ಕೊಟ್ನಾಳ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಇದ್ದರು. ಪ್ರೊ.ಬೋರಮ್ಮ ದೇಸಾಯಿ ಸ್ವಾಗತಿಸಿ ಪರಿಚಯಿಸಿದರು. ಪ್ರೊ.ಮಂಜುನಾಥ ಮ್ಯಾಗೇಡಿ ನಿರೂಪಿಸಿ, ಲಕ್ಷ್ಮೀ ಪ್ರಾರ್ಥಿಸಿ, ಉಪನಿರ್ದೇಶಕಿ ಪ್ರೊ.ಶ್ವೇತಾ ವಂದಿಸಿದರು.