ಕುಷ್ಠರೋಗ ನಿರ್ಮೂಲನೆಗೆ ಜಿಲ್ಲೆಯಾದ್ಯಂತ ‘ಸ್ಪರ್ಶ್’ ಜಾಗೃತಿ

| Published : Jan 31 2024, 02:22 AM IST

ಕುಷ್ಠರೋಗ ನಿರ್ಮೂಲನೆಗೆ ಜಿಲ್ಲೆಯಾದ್ಯಂತ ‘ಸ್ಪರ್ಶ್’ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾದ್ಯಂತ ಜ.30 ರಿಂದ ಫೆ.13 ರವರೆಗೆ 15 ದಿನಗಳ ಕಾಲ ನಡೆಯುವ ಕುಷ್ಠರೋಗ ಜಾಗೃತಿ ಆಂದೋಲನಕ್ಕೆ ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ಜಿ.ಓ ನಾಗರಾಜ್ ಚಾಲನೆ ನೀಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಕಳಂಕ ಕೊನೆಗೊಳಿಸಿ, ಘನತೆಯನ್ನು ಎತ್ತಿ ಹಿಡಿಯಿರಿ ಎಂಬ ಘೋಷಣೆಯೊಂದಿಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಜಾಥಾ ಕಾರ್ಯಕ್ರಮಕ್ಕೆ ಮಂಗಳವಾರ ಚಿತ್ರದುರ್ಗದಲ್ಲಿ ಚಾಲನೆ ನೀಡಲಾಯಿತು.

ಜಾಥಾಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಜಿ.ಓ.ನಾಗರಾಜ್, ಜ.30 ರಿಂದ ಫೆ.13 ರವರೆಗೆ 15 ದಿನಗಳ ಕಾಲ ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ ನಡೆಯಲಿದೆ. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಾದ್ಯಂತ ಕುಷ್ಠರೋಗ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ 58 ಕುಷ್ಠರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ 10 ಸಾವಿರ ಜನಸಂಖ್ಯೆ 1 ಪ್ರಕರಣಕ್ಕಿಂತ ಕಡಿಮೆ ಪ್ರಕರಣ ಕಂಡು ಬಂದರೆ ಕುಷ್ಠ ರೋಗ ನಿರ್ಮೂಲನೆ ಆಗಿದೆ ಎಂದು ಭಾವಿಸಲಾಗುತ್ತದೆ. ಕುಷ್ಠ ರೋಗದಿಂದ ಆಗುವ ಅಂಗವಿಲಕತೆ ಕಡಿಮೆ ಮಾಡುವುದು, ಇದಕ್ಕೆ ತುತ್ತಾದ ಜನರಿಗೆ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವುದು ಸಹ ಮುಖ್ಯವಾಗಿದೆ ಎಂದು ತಿಳಿಸಿದರು. ಆಂದೋಲನದ ಅಂಗವಾಗಿ ಗ್ರಾಮಗಳಲ್ಲಿ ಜನರಿಗೆ ಮಾಹಿತಿ ಶಿಕ್ಷಣ ಸಮೂಹ ಚಟುವಟಿಕೆ, ಗ್ರಾಮ ಸಭೆ, ಶಾಲಾ, ಕಾಲೇಜುಗಳಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಜಾಗೃತಿಯನ್ನು ಮೂಡಿಸುವುದು ಇದರ ಉದ್ದೇಶವಾಗಿದೆ. ಆಂದೋಲನದ ಯಶಸ್ವಿಗೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯಿತಿಗಳು, ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ ವಿವಿಧ ಇಲಾಖೆಗಳ ಸಮನ್ವಯ ಸಾಧಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ಜಾಗೃತಿ ಜಾಥಾವು ನಗರದ ಜಿಲ್ಲಾ ಆಸ್ಪತ್ರೆ ಅವರಣದಿಂದ ಪ್ರವಾಸಿ ಮಂದಿರ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಒನಕೆ ಓಬವ್ವ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಲಾಯಿತು. ಜಾಥಾ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಜಿಎನ್‍ಎಂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು. ಜಿಲ್ಲಾ ಕ್ಷಯ ರೋಗ ನಿಯಂತಣಾಧಿಕಾರಿ ಡಾ.ಸಿ.ಓ ಸುಧಾ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯ್ಕ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ಬಿ ಹನುಮಂತಪ್ಪ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ, ಡಿಎನ್ ಟಿ ತಂಡದ ಮೇಲ್ವಿಚಾರಕರಾದ ಎಂ. ಚಂದ್ರಪ್ಪ, ವೈ.ತಿಪ್ಪೇಶ್, ಕೆ.ರಾಜೇಂದ್ರ ಪ್ರಸಾದ್, ಯು.ಕಿರಣ್, ಟಿ,ಮಂಜುನಾಥ್ ಇದ್ದರು.