ಕನ್ನಡಪ್ರಭ ವಾರ್ತೆ ಬೇಲೂರು

ಕಾಡಾನೆ ಮಾನವ ಸಂಘರ್ಷ ನಿಯಂತ್ರಿಸಲು ಅರಣ್ಯ ಇಲಾಖೆ ಎಲ್ಲಾ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಕಾಫಿ ತೋಟದ ಮಾಲೀಕರು, ಕಾರ್ಮಿಕರು ನಮ್ಮೊಂದಿಗೆ ಸಹಕರಿಸಿ ಎಂದು ಡಿಎಫ್‌ಓ ಸೌರಭ್ ಕುಮಾರ್‌ ತಿಳಿಸಿದರು.ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಉತ್ತೊಳಲು ಎಸ್ಟೇಟಿನ ಆವರಣದಲ್ಲಿ ನೇಚರ್‌ ಕನ್ಸರ್ವೇಷನ್ ಫೌಂಡೇಶನ್ ಮೈಸೂರು ಹಾಗೂ ಅರಣ್ಯ ಇಲಾಖೆಯ ಸಂಯುಕಾಶ್ರಯದಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುವ ಆನೆ ಮತ್ತು ಜನರ ಹೊಂದಾಣಿಕೆ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ನಿಮ್ಮೆಲ್ಲರ ಪ್ರಾಣಕ್ಕೆ ಬೆಲೆ ಕಟ್ಟಲಾಗದು. ಕಳೆದುಕೊಂಡ ಪ್ರಾಣ ಮತ್ತೆಂದೂ ಸಿಗದು ಹಾಗಾಗಿ ನಮ್ಮ ಜೀವ ಕಾಪಾಡಿಕೊಳ್ಳಲು ನಾವು ಜಾಗೃತಿ ಹೊಂದುವುದು ಅವಶ್ಯಕ. ಒಂದಿಷ್ಟು ಹಣ ಸಂಪಾದಿಸಲು ಊರು ಬಿಟ್ಟು ಇಲ್ಲಿಗೆ ವಲಸೆ ಬಂದಿದ್ದೀರಾ, ನಿಮ್ಮ ಪ್ರಾಣ ನಮಗೂ ಮುಖ್ಯ, ಹಾಗಾಗಿ ತೋಟ, ಗದ್ದೆಗಳಲ್ಲಿ ಕೆಲಸಕ್ಕೆ ತೆರಳುವ ಮೊದಲು ಕಾಡಾನೆಗಳ ಚಲನ ವಲನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು, ನಿಮ್ಮ ಬಳಿ ಇ.ಟಿ.ಎಫ್ ತುರ್ತು ಸಹಾಯವಾಣಿ ಸಂಖ್ಯೆಯನ್ನು ಇಟ್ಟುಕೊಳ್ಳಬೇಕು, ಒಂದು ವೇಳೆ ನಿಮ್ಮ ಪರಿಸರದಲ್ಲಿ ಕಾಡು ಪ್ರಾಣಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಸಿಬ್ಬಂದಿಗಳಿಗೆ ತಿಳಿಸಬೇಕು ಎಂದು ನೆರೆದಿದ್ದ ಕಾರ್ಮಿಕರಿಗೆ ಸಲಹೆ ನೀಡಿದರು.ನಂತರ ಕಾಡುಪ್ರಾಣಿಗಳು ಕಾಡನ್ನು ತೊರೆದು ಊರಿಗೆ ಬರಲು ಕಾರಣಗಳೇನು? ಕಾಡು ಪ್ರಾಣಿಗಳಿಂದ ಹೇಗೆ ರಕ್ಷಿಸಿಕೊಳ್ಳುವುದು? ಕಾಡಾನೆಗಳನ್ನು ಕಂಡೊಡನೆ ಹೇಗೆ ಎಚ್ಚರವಹಿಸಬೇಕು ಮತ್ತು ಕಾಡಾನೆ ಮಾನವ ಸಂಘರ್ಷ ನಿಯಂತ್ರಿಸಲು ಅರಣ್ಯ ಇಲಾಖೆ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುತ್ತಿವೆ ಎಂಬುವುದರ ಬಗ್ಗೆ ಎ.ಐ ಆಧಾರಿತ ವಿಡಿಯೋ ಪ್ರದರ್ಶನ ಹಾಗೂ ಬೀದಿ ನಾಟಕದ ಮೂಲಕ ನೆರೆದಿದ್ದವರಿಗೆ ಜಾಗೃತಿ ಮೂಡಿಸಲಾಯಿತು.ಈ ವೇಳೆ ಎನ್.ಸಿ.ಎಫ್ ನ ಹಿರಿಯ ವಿಜ್ಞಾನಿ ಆನಂದ್ ಕುಮಾರ್, ಕ್ಷೇತ್ರ ಸಂಯೋಜಕ ದೀಪಕ್ ಭಟ್, ಯೋಜನಾ ಸಂಯೋಜಕ ನಿಸಾರ್‌ ಅಹಮದ್, ಎ.ಸಿ.ಎಫ್ ಮೋಹನ್ ಹಾಗೂ ಮಧುಸೂದನ್, ಆರ್‌ಎಫ್‌ಒ ಯತೀಶ್, ಪೃಥ್ವಿ ಟ್ರಸ್ಟಿನ ಯೋಗನಂದ, ಮಾದೇಸ್ವಾಮಿ, ಜಾಗೃತಿ ಕುಮಾರ್, ಸ್ವಪ್ನ, ಸಿಂಚನ, ಅನುಶ್ರೀ ಇನ್ನಿತರರು ಇದ್ದರು.