ದೇವರ ಹೆಸರನ್ನು ಬಳಸಿಕೊಂಡು, ರಾಮ ಮಂದಿರದ ಹಣ ಲೂಟಿ ಮಾಡಿ ಭಕ್ತರಿಗೆ ಅವಮಾನ ಆಗುವ ರೀತಿಯಲ್ಲಿ ಬಿಜೆಪಿ ನಡೆದುಕೊಂಡಿದೆ. ಆದ್ದರಿಂದ ಅಲ್ಲಿನ ಟ್ರಸ್ಟ್‌ನ್ನು ಆದಷ್ಟು ಶೀಘ್ರ ವಜಾ ಮಾಡಿ, ಪುನರಪಿ ಹೊಸ ಟ್ರಸ್ಟ್‌ ನಿರ್ಮಾಣ ಮಾಡಬೇಕು ಸುಪ್ರೀಂ ಕೋರ್ಟ್‌ ಜಡ್ಜ್‌ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಿ ಆದಷ್ಟು ಶೀಘ್ರ ಸತ್ಯಾಂಶ ಹೊರಗೆ ಬರಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್‌ ಸೊರಕೆ ಆಗ್ರಹಿಸಿದರು.

ಮಂಗಳೂರು: ದೇವರ ಹೆಸರನ್ನು ಬಳಸಿಕೊಂಡು, ರಾಮ ಮಂದಿರದ ಹಣ ಲೂಟಿ ಮಾಡಿ ಭಕ್ತರಿಗೆ ಅವಮಾನ ಆಗುವ ರೀತಿಯಲ್ಲಿ ಬಿಜೆಪಿ ನಡೆದುಕೊಂಡಿದೆ. ಆದ್ದರಿಂದ ಅಲ್ಲಿನ ಟ್ರಸ್ಟ್‌ನ್ನು ಆದಷ್ಟು ಶೀಘ್ರ ವಜಾ ಮಾಡಿ, ಪುನರಪಿ ಹೊಸ ಟ್ರಸ್ಟ್‌ ನಿರ್ಮಾಣ ಮಾಡಬೇಕು ಸುಪ್ರೀಂ ಕೋರ್ಟ್‌ ಜಡ್ಜ್‌ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಿ ಆದಷ್ಟು ಶೀಘ್ರ ಸತ್ಯಾಂಶ ಹೊರಗೆ ಬರಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್‌ ಸೊರಕೆ ಆಗ್ರಹಿಸಿದರು.

ಅವರು ಬುಧವಾರ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಮ ಮಂದಿರದಲ್ಲಿ ನಡೆದಿರುವ ಕೋಟ್ಯಂತರ ಹಣ ಲೂಟಿ ಘಟನೆ ಭಕ್ತಿಗೆ ಮಾಡಿದ ಅವಮಾನ. ಪ್ರಕರಣ ತನಿಖೆಗೆ ಉ.ಪ್ರ. ಸಿಎಂ ಅವರಿಂದ ರಚಿಸಲಾದ ಎಸ್‌ಐಟಿ ಮುಖ್ಯಸ್ಥರ ಮೇಲೆ 420 ಕೇಸ್‌ ಇದೆ. ಅವರು ನೀಡಿದ ವರದಿಯಲ್ಲಿ ಕೇವಲ ಅಮಾಯಕರ ಹೆಸರು ಸೇರಿಸಲಾಗಿದೆ. ಟ್ರಸ್ಟ್‌ನ್ನು ಶೀಘ್ರ ವಜಾ ಮಾಡಬೇಕು. ಶಂಕರಾಚಾರ್ಯ ಮಹಾಸ್ವಾಮೀಜಿಗಳನ್ನು ಒಳಗೊಂಡು, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರ ಒಳಪಡಿಸಿ, ದೇವಸ್ಥಾನದ ಭಕ್ತರ ಸೇರಿಸಿಕೊಂಡು ಪುನರಪಿ ಆ ಟ್ರಸ್ಟ್‌ ನಿರ್ಮಾಣ ಮಾಡಬೇಕು. ಸುಪ್ರೀಂ ಕೋರ್ಟ್‌ ಜಡ್ಜ್‌ ಮುಖಾಂತರ ಸಿಬಿಐ ತನಿಖೆ ನಡೆಸಿ ಆದಷ್ಟು ಬೇಗ ಸತ್ಯಾಂಶ ಹೊರ ಬರಬೇಕು ಎಂಬುದು ನಮ್ಮ ಬೇಡಿಕೆ ಎಂದರು.

ಪ್ರಧಾನಿ ಮೌನ ಯಾಕೆ:

ಪ್ರಧಾನಿ ನರೇಂದ್ರ ಮೋದಿ ಅವರು ಸಣ್ಣ ಪುಟ್ಟ ವಿಚಾರಕ್ಕೂ ಮಾತನಾಡುವ, ಮನ್‌ಕೀ ಬಾತ್‌ನಲ್ಲಿ ಪ್ರಸ್ತಾಪ ಮಾಡುವ ಅವರು ಇಷ್ಟು ದೊಡ್ಡ ಹಗರಣ ಆದರೂ ಮೌನವಾಗಿದ್ದಾರೆ. ಐಟಿ, ಇಡಿ, ಸಿಬಿಐ ಏನು ಮಾಡುತ್ತಿದೆ. ಎಲ್ಲವೂ ನಿಷ್ಕ್ರೀಯವಾದಂತಿದೆ ಎಂದು ವಿನಯಕುಮಾರ್‌ ಸೊರಕೆ ಆರೋಪಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿಯ ಸುಧೀರ್‌ ಕುಮಾರ್‌ ಮರೋಳಿ ಮಾತನಾಡಿ, ರಾಮ ಮಂದಿರದ ಹಣವನ್ನು ಒಳಗಿನವರೇ ಲೂಟಿ ಮಾಡಿದ್ದಾರೆ. ಪ್ರಧಾನ ಮಂತ್ರಿ, ಉ.ಪ್ರ. ಮುಖ್ಯಮಂತ್ರಿ, ಕೇಂದ್ರದ ಗೃಹ ಸಚಿವರು, ಆರ್‌ಎಸ್‌ಎಸ್‌ ಅವರ ಸೂಚನೆಯಂತೆ ಟ್ರಸ್ಟಿಗಳನ್ನು ನೇಮಿಸಲಾಗಿತ್ತು. ಆದ್ದರಿಂದ ಬಿಜೆಪಿ, ಆರ್‌ಎಸ್‌ಎಸ್‌ ಬೆಂಬಲಿಗರಿಂದ ಈ ಲೂಟಿ ಆಗಿದೆ. ಉತ್ತರ ಪ್ರದೇಶದಲ್ಲಿ ತಪ್ಪು ಮಾಡಿದವರ ಮನೆಗೆ ಬುಲ್ಡೋಜರ್‌ ನುಗ್ಗುತ್ತಿದ್ದ ಘಟನೆ ಆಗುತ್ತಿತ್ತು, ಆದರೆ ಈಗ ಯಾಕೆ ಬುಲ್ಡೋಜರ್‌ ಸದ್ದು ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರಮುಖರಾದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌, ಮಹಮ್ಮದಾಲಿ, ಸದಾಶಿವ ಉಳ್ಳಾಲ, ಕೆ.ಪಿ.ಜಾನಿ, ಸುಭಾಶ್ಚಂದ್ರ ಶೆಟ್ಟಿ, ಸುಭೋದಯ ಆಳ್ವ, ಅಬ್ದುಲ್‌ ಆಲಿ, ಚೇತನ್‌ ಬೆಂಗ್ರೆ ಮತ್ತಿತರರು ಇದ್ದರು.

-----