ಪೂರ್ವಿಕರ ದೇಶೀಯ ಚಿಕಿತ್ಸೆಯ ಪ್ರತಿರೂಪ ಆಯುರ್ವೇದ: ಡಾ. ಜಿ.ಎಸ್. ಹಿರೇಮಠ

| Published : Oct 26 2025, 02:00 AM IST

ಪೂರ್ವಿಕರ ದೇಶೀಯ ಚಿಕಿತ್ಸೆಯ ಪ್ರತಿರೂಪ ಆಯುರ್ವೇದ: ಡಾ. ಜಿ.ಎಸ್. ಹಿರೇಮಠ
Share this Article
  • FB
  • TW
  • Linkdin
  • Email

ಸಾರಾಂಶ

5 ಸಾವಿರ ವರ್ಷಗಳಿಂದ ಆಯುವೇದ ಚಿಕಿತ್ಸೆ ನಡೆದುಕೊಂಡು ಬಂದಿದೆ. ನಮ್ಮ ಪೂರ್ವಜರು ಬಳಸುವ ದೇಶೀಯ ಚಿಕಿತ್ಸೆಯೇ ಆಯುರ್ವೇದ ಎಂದು ಡಾ. ಜಿ.ಎಸ್. ಹಿರೇಮಠ ಹೇಳಿದರು.

ಗದಗ: ಪೂರ್ವಿಕರ ದೇಶೀಯ ಚಿಕಿತ್ಸೆಯ ಪ್ರತಿರೂಪವೇ ಆಯುರ್ವೇದ ಎಂದು ಡಿ.ಜಿ.ಎಂ. ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾ. ಡಾ. ಜಿ.ಎಸ್. ಹಿರೇಮಠ ಹೇಳಿದರು.

ನಗರದಲ್ಲಿ ನಡೆದ ಪ್ರೋಬಸ್ ಕ್ಲಬ್‌ನ ಮಾಸಿಕ ಸಮಾರಂಭದಲ್ಲಿ ಹಿರಿಯ ನಾಗರಿಕರ ಜೀವನ ಶೈಲಿ ಹಾಗೂ ಆರೋಗ್ಯ ಕುರಿತು ಅವರು ಮಾತನಾಡಿದರು.

5 ಸಾವಿರ ವರ್ಷಗಳಿಂದ ಆಯುವೇದ ಚಿಕಿತ್ಸೆ ನಡೆದುಕೊಂಡು ಬಂದಿದೆ. ನಮ್ಮ ಪೂರ್ವಜರು ಬಳಸುವ ದೇಶೀಯ ಚಿಕಿತ್ಸೆಯೇ ಆಯುರ್ವೇದ. ವೈದ್ಯಕೀಯ ಶಿಕ್ಷಣ ಪಠ್ಯವಾಗಿ ಪ್ರಚಲಿತವಾಯಿತು. ಆದರೆ, ಕಾಲಕ್ರಮೇಣ ಜಾಗತೀಕರಣದ ಪ್ರಭಾವದಿಂದ ಮನುಷ್ಯ ಜೀವನ ಕ್ರಮವೂ ಬದಲಾಗಿ ವಾತ, ಪಿತ್ತ, ಕಫಗಳಲ್ಲಿ ಮಾತ್ರ ರೋಗಗಳನ್ನು ಗುರುತಿಸುವ ಪರಂಪರೆಯ ಪದ್ಧತಿ ಬದಲಾಗಿ ಗೊತ್ತೆ ಇಲ್ಲದ ಬಿ.ಪಿ., ಶುಗರಗಳಂತ ಶಬ್ದಗಳಲ್ಲಿ ಆರೋಗ್ಯ ಹುಡುಕುತ್ತಿದ್ದೇವೆ. ತ್ವರಿತ ಆರೋಗ್ಯಕ್ಕೆ ಮಾಡರ್ನ್ ಚಿಕಿತ್ಸೆಯೇ ಶ್ರೇಷ್ಠ ಎಂಬ ಧಾವಂತದಲ್ಲಿದ್ದೇವೆ ಎಂದು ತಿಳಿಸಿದರು.

ಅಂದಿನ ದಿನಗಳಲ್ಲಿ ಮನೆಯ ಊಟವೇ ಶ್ರೇಷ್ಠವಾಗಿರುವಾಗ ಚಹಾದ ಅಂಗಡಿಗೆ ಹೋಗುವದು ಅಪರಾಧವಾಗಿತ್ತು. ಈಗ ಹೊರಗಡೆ ತಿನ್ನೋದೇ ಜೀವನ ಕ್ರಮವಾಗಿ ಹೊಸ ಹೊಸ ರೋಗಗಳಿಗೆ ಬಲಿಯಾಗುತ್ತಿರುವುದು ದುರಂತವಾಗಿ ಕಾಣುತ್ತಿದೆ.

ಆಹಾರ ಪದಾರ್ಥಗಳು ನಿರ್ಜೀವ. ಸೇವಿಸಿದಾಗ ಸಂಸ್ಕರಣೆಗೊಂಡು ದೇಹಕ್ಕೆ ಜೀವ ಕೊಡುತ್ತವೆ. ಅಂದು ಸಕ್ಕರೆ, ಅಕ್ಕಿ, ಮೈದಾ ಇರಲಿಲ್ಲ. ಬಳಸಿ ಗೊತ್ತಾದ ಮೇಲೆ 5 ವಿಷಗಳು ಎಂದು ಗುರುತಿಸಿದ್ದಾರೆ. ಅಂದು ಬಳಸುತ್ತಿದ್ದ ಜೋಳ, ನವಣೆ, ರಾಗಿಗಳಂತವುಗಳು ಇಂದು ದೈಹಿಕ ಆರೋಗ್ಯಸಿರಿ ಕೊಡುವ ಸಿರಿಧಾನ್ಯಗಳಾಗಿ ಮಾನವರ ಕಣ್ಣು ತೆರೆಸಿರುವುದು ಒಳ್ಳೆಯ ಪ್ರಗತಿ ಎಂದು ಆಯುರ್ವೇದದ ಮಹತ್ವ ಕುರಿತು ಸುಧೀರ್ಘವಾಗಿ ಮಾತನಾಡಿದರು.

ಅಧ್ಯಕ್ಷ ಬಿ.ಎಸ್. ಗೌಡರ ಮಾತನಾಡಿ, ದೀಪಾವಳಿಯ ಈ ಸಂದರ್ಭದಲ್ಲಿ ಪಟಾಕಿಗಳ ಹಾವಳಿಯಿಂದ ಎಷ್ಟೋ ಜನ ಕಣ್ಣು ಕಳೆದುಕೊಂಡಿದ್ದಾರೆ. ಹೊಗೆ ಮತ್ತು ಶಬ್ದ ಮಾಲಿನ್ಯದಿಂದ ಪರಿಸರ ನಾಶಕ್ಕೆ ಕಾರಣವಾಗುತ್ತೇವೆ ಎಂಬ ಅರಿವು ಎಲ್ಲರಲ್ಲಿರಬೇಕು ಎಂದರು.

ಮಂಗಳಾ ಯಾನಮಶೆಟ್ಟಿ ಪ್ರಾರ್ಥಿಸಿದರು. ಎಂ.ಸಿ. ವಗ್ಗಿ ಸ್ವಾಗತಿಸಿದರು. ಎಚ್.ಬಿ. ಯಲಬುರ್ಗಿ ನಿರೂಪಿಸಿದರು. ಬಸವರಾಜ ಗಣಪ್ಪನವರ ವಂದಿಸಿದರು..