ಸಾರಾಂಶ
೯ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ । ಗ್ರಾಮ, ಬುಡಕಟ್ಟು ಮಂದಿಗೆ ಆಯುರ್ವೇದ ಮದ್ದು
ಕನ್ನಡಪ್ರಭ ವಾರ್ತೆ ಚಾಮರಾಜನಗರಆಯುರ್ವೇದ ಪದ್ಧತಿಯು ಅತ್ಯಂತ ಪುರಾತನ ಮತ್ತು ಮಹತ್ವವುಳ್ಳದ್ದಾಗಿದೆ ಎಂದು ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಪೇಟೆ ಪೈಮರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದ ನಾವೀನ್ಯತೆಯೊಂದಿಗೆ ೯ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು,ಆಯುರ್ವೇದ ತನ್ನದೇ ಆದ ಮಹತ್ವವನ್ನು ಹೊಂದಿದೆ. ಈಗಲೂ ಗ್ರಾಮಾಂತರ ಪ್ರದೇಶ ಹಾಗೂ ಬುಡಕಟ್ಟು ಮತ್ತು ಗಿರಿಜನರು ಔಷಧಿ ಗಿಡವನ್ನೇ ಉಪಯೋಗಿಸಿಕೊಂಡು ಗಾಯ ಮತ್ತು ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಆಯುರ್ವೇದ ಮನುಷ್ಯರಿಗಷ್ಟೇ ಅಲ್ಲ, ಸಾಕು ಪ್ರಾಣಿಗಳಿಗೆ ಕಾಯಿಲೆ ಬಂದರೆ ಹೆಚ್ಚು ಗುಣ ಹೊಂದುವುದು ಆಯುರ್ವೇದ ಚಿಕಿತ್ಸೆಯಿಂದಲೇ, ಜಾಂಡೀಸ್ ಸೇರಿದಂತೆ ಜಾನುವಾರಿಗೂ ಸಹ ಆಯುರ್ವೇದದ ಮೂಲಕ ಔಷಧಿ ನೀಡುವ ಮೂಲಕ ಅವುಗಳ ರೋಗಗಳನ್ನು ಗುಣಪಡಿಸಲಾಗುತ್ತಿದೆ ಎಂದು ಹೇಳಿದರು.
ಸೋಲಿಗ ಜನಾಂಗದಲ್ಲಿ ಬೆರಳೆಣಿಕೆ ಮಂದಿಯಷ್ಟೇ ಹೆರಿಗೆಗಾಗಿ ಆಸ್ಪತ್ರೆಗೆ ಬರುತ್ತಾರೆ. ಸಾವಿರಾರು ಹೆರಿಗೆಗಳನ್ನು ಸ್ವಾಭಾವಿಕವಾಗಿಯೇ ಮಾಡಲಾಗುತ್ತದೆ, ಇಂಗ್ಲಿಷ್ ಔಷಧಿಯಿಂದ ತಾತ್ಕಾಲಿಕ ಉಪಶಮನವಾದರೆ ಆಯುರ್ವೇದ ಚಿಕಿತ್ಸೆಯಿಂದ ನಿಧಾನವಾದರೂ ಶಾಶ್ವತವಾಗಿ ಗುಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ಆಧುನಿಕ ವೈದ್ಯ ಪದ್ಧತಿಯಲ್ಲಿ ದೇಶದಲ್ಲಿ ಈಗ ೩೧೬ ಔಷಧಿಗಳನ್ನು ಮಾತ್ರ ಗುರುತಿಸಲಾಗಿದೆ, ಆದರೆ ೭ ಸಾವಿರಕ್ಕು ವಿವಿಧ ಬಗೆಯ ಔಷಧಿಗಳನ್ನು ನಾವು ಉಪಯೋಗಿಸುತ್ತಿದ್ದು, ಇದರಿಂದ ಆನೇಕ ಕಾಯಿಲೆಗಳಿಗೆ ನಾವು ತುತ್ತಾಗುತ್ತಿದ್ದೇವೆ. ನಮ್ಮ ಪೂರ್ವಿಕರು, ಋಷಿ ಮುನಿಗಳು ಕಂಡು ಹಿಡಿದು ಕೊಟ್ಟಿರುವ ಆಯುರ್ವೇದ ಚಿಕಿತ್ಸಾ ಪದ್ಧತಿ ಅತ್ಯಂತ ಆರೋಗ್ಯಕರವಾಗಿದೆ. ಇದನ್ನು ಉಳಿಸಿ ಬೆಳೆಸುವ ಹೊಣೆ ಎಲ್ಲರ ಮೇಲಿದೆ, ನಮ್ಮ ಮನೆಯಲ್ಲೂ ಹಲ್ಲು ನೋವಿಗೆ ಔಷಧಿ ನೀಡಲಾಗುತ್ತಿದ್ದು, ಇದರಿಂದ ಸಾವಿರಾರು ಜನರಿಗೆ ಗುಣವಾಗಿದೆ. ಇದು ನಮ್ಮ ಆಯುರ್ವೇದ ಚಿಕಿತ್ಸೆ ಎಂದರು,
ಆಯುಷ್ ಅಧಿಕಾರಿ ಡಾ. ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯ ಆಯುರ್ವೇದ ಆಸವಪತೆಗಳು ಮತ್ತು ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರು.ಮೈಸೂರಿನ ಆರ್ಯವೇದ ಆಸ್ಪತ್ರೆಯ ವೈದ್ಯರಾದ ಡಾ. ಶೈಲಜಾ ಆರ್ಯವೇದ ಬಗ್ಗೆ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸುರೇಶ್, ಸದಸ್ಯೆ ಕಲಾವತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ (ಮುನ್ನ), ಮುಖಂಡ ಸೈಯದ್ ರಫೀ, ಶಾಲೆಯ ಮುಖ್ಯ ಶಿಕ್ಷಕ ನಾಗೇಂದ್ರ, ಬ್ರೆಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಜ್ವಲ್, ಇತರರು ಇದ್ದರು. ೨೯ಸಿಎಚ್ಎನ್೨
ಚಾಮರಾಜಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಗಣ್ಯರು ಧನ್ವಂತರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.