ಸಾರಾಂಶ
ಕಾವ್ಯ ಎಂದಿಗೂ ಅಳಿಸಬಾರದು ನಗಿಸಬೇಕು. ಎಲ್ಲರನ್ನು ಹೊಂದಾಗಿಸುವ ಗುಣ ಇರಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಸಾಹಿತಿಗಳು ಪರಕಾಯ ಪ್ರವೇಶ ಮಾಡಬೇಕು. ಸಾಹಿತಿಗಳು ಪರಕಾಯ ಪ್ರವೇಶ ಮಾಡಿ ಬರೆದ ಸಾಹಿತ್ಯವು ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ತಿಳಿಸಿದರು.ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಮತ್ತು ಮೈಸೂರು ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬಿ.ಎಂ. ರಜಿನಿ ಅವರ ಭಾವಗಳ ಗುಚ್ಛ ಪುಸ್ತಕವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಕಾವ್ಯ ಎಂದಿಗೂ ಅಳಿಸಬಾರದು ನಗಿಸಬೇಕು. ಎಲ್ಲರನ್ನು ಹೊಂದಾಗಿಸುವ ಗುಣ ಇರಬೇಕು. ಲೇಖಕಿ ರಜಿನಿ ಅವರ ಭಾವನೆಗಳ ಗುಚ್ಛ ಕವನ ಸಂಕಲನವೂ ಈ ಕೆಲಸವನ್ನು ಮಾಡಿದೆ. ಕವಿತೆಗಳು ಸಮೃದ್ಧವಾದ ವೈವಿಧ್ಯ ಇದೆ. ಪ್ರೀತಿ ಮತ್ತು ಕರುಣೆ ಕಟ್ಟುಕೊಡಲಾಗಿದೆ. ಪರಿಪೂರ್ಣತೆ ಅಂಶಗಳು ಇವೆ ಎಂದು ಅವರು ಶ್ಲಾಘಿಸಿದರು.ಮಿತಿ ಮೀರಿದ ಮೊಬೈಲ್ ಬಳಕೆ
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಮಾತನಾಡಿ, ಮೊಬೈಲ್ ಗೀಳಿನಿಂದ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಮಿತಿ ಮೀರಿ ಮೊಬೈಲ್ ಬಳಕೆ ಮಾಡಲಾಗುತ್ತಿದೆ. ಇದರಿಂದ ಮೌಲ್ಯಗಳು ನಶಿಸಿ ಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಎಂಜಿನಿಯರಿಂಗ್ ಪದವೀಧರರಾಗಿರುವ ರಜಿನಿ ಕವನ ಸಂಕಲನ ಬರೆದಿರುವುದು ಪ್ರಶಂಸನಿಯ ಕೆಲಸ. ಹೃದಯಕ್ಕೆ ಹತ್ತಿರವಾಗುವ ಕವನಗಳು ಪುಸ್ತಕದಲ್ಲಿವೆ. ಸೋತವರಿಗೆ ಧೈರ್ಯ ತುಂಬುವ ಕೆಲಸವನ್ನು ಕವನಗಳು ಮಾಡಲಿವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ, ವೈದ್ಯ ವಾರ್ತಾ ಪ್ರಕಾಶನದ ಜೆ.ಪಿ. ಅರಸ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ರತ್ನಾ ಹಾಲಪ್ಪಗೌಡ, ಕೃತಿ ಕರ್ತೃ ಬಿ.ಎಂ. ರಜನಿ, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಡಾ.ಎಂ.ಜಿ.ಆರ್. ಅರಸ್ ಮೊದಲಾದವರು ಇದ್ದರು.