ಸಾರಾಂಶ
ಭಾರತೀಯ ಜನತಾ ಪಾರ್ಟಿ 34 ವರ್ಷಗಳಿಂದ ನಾನು ಸಂಘಟನೆ ಮಾಡಿದಂತಹ ಮನೆ. ಹಾಗಾಗಿ ಮತ್ತೆ ನಮ್ಮ ಮನೆಗೆ ವಾಪಸ್ಸಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಭಾರತೀಯ ಜನತಾ ಪಾರ್ಟಿ 34 ವರ್ಷಗಳಿಂದ ನಾನು ಸಂಘಟನೆ ಮಾಡಿದಂತಹ ಮನೆ. ಹಾಗಾಗಿ ಮತ್ತೆ ನಮ್ಮ ಮನೆಗೆ ವಾಪಸ್ಸಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದರು.ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರು. ‘ಸದ್ಯ ನಾನು ನಮ್ಮ ಮನೆಗೆ ವಾಪಸ್ ಬಂದಿದ್ದೇನೆ. ರಾಜ್ಯ ಬಿಜೆಪಿ ಪಕ್ಷದ ಎಲ್ಲ ಪ್ರಮುಖ ನಾಯಕರು ನನ್ನ ಮರು ಸೇರ್ಪಡೆಗೆ ಬಹಳ ಆತ್ಮೀಯತೆ ತೋರಿಸಿದ್ದಾರೆ’ ಎಂದರು.
ಕಳೆದ ಐದಾರು ತಿಂಗಳಿನಿಂದ ಬಿಜೆಪಿ ಪಕ್ಷಕ್ಕೆ ಮರಳುವಂತೆ ಪಕ್ಷದ ಕಾರ್ಯಕರ್ತರು, ಮುಖಂಡರು, ರಾಜ್ಯ ನಾಯಕರು ಹಾಗೂ ರಾಷ್ಟ್ರ ನಾಯಕರ ಒತ್ತಡ ಇತ್ತು. ಕಾರ್ಯಕರ್ತರ ಅಭಿಲಾಷೆ, ಭಾವನೆಗಳಿಗೆ ಸ್ಪಂದಿಸಿ ಮತ್ತೆ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದೇನೆ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರು ನನ್ನನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಸೂಕ್ತ ಸ್ಥಾನಮಾನ ಸಹ ನೀಡಿದ್ದರು. ಕಾಂಗ್ರೆಸ್ ಪಕ್ಷ ಬಿಡಲಿಕ್ಕೆ ಯಾವುದೇ ರೀತಿಯ ಕಾರಣಗಳಿಲ್ಲ. ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಎಂದ ಅವರು, ನಮ್ಮ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ ಮರು ಸೇರ್ಪಡೆಯಾಗಿದ್ದೇನೆ ಎಂದರು.ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿಗಣೇಶ್, ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಸೊಗಡು ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಚಿದಾನಂದ್, ಮಲ್ಲಿಕಾರ್ಜುನಯ್ಯ, ಯಶಸ್ಸು, ಹನುಮಂತರಾಜು, ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.