- ಶ್ರೀ ಬಸವಪ್ರಭು ಸ್ವಾಮೀಜಿ ನುಡಿ । ಬಕ್ಕೇಶ್ವರ ದೇವಸ್ಥಾನದಲ್ಲಿ ಪಾದಯಾತ್ರಿಗಳಿಗೆ ಬೀಳ್ಕೊಡುಗೆ ಸಮಾರಂಭ - - -
ಕನ್ನಡಪ್ರಭ ವಾರ್ತೆ ದಾವಣಗೆರೆಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ಪ್ರತಿವರ್ಷ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಮಧುಮೇಹಿಗಳು ಆರೋಗ್ಯದ ದೃಷ್ಟಿಯಿಂದ ಕಾಲಿಗೆ ಚಪ್ಪಲಿ ಧರಿಸಿ ಪಾದಯಾತ್ರೆ ಕೈಗೊಳ್ಳಲಿ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.
ನಗರದ ಚೌಕಿಪೇಟೆಯ ಶ್ರೀ ಬಕ್ಕೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಸೋಮವಾರ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ನಿಂದ ಕೊಟ್ಟೂರು ಪಾದಯಾತ್ರಿಗಳಿಗೆ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಮಾರ್ಗದುದ್ದಕ್ಕೂ ಪಾದಯಾತ್ರಿಗಳಿಗೆ ಶ್ರೀ ಕೊಟ್ಟೂರೇಶ್ವರರ ಭಕ್ತರು ಪ್ರಸಾದ, ಹಣ್ಣು, ಔಷಧಿ, ಮುಲಾಮು, ನೋವು ನಿವಾರಕ ಸ್ಪ್ರೇಗಳನ್ನು ನೀಡುತ್ತಾರೆ. ಅಗತ್ಯವಿದ್ದರೆ ಮಾತ್ರ ಅವುಗಳನ್ನು ಸ್ವೀಕರಿಸಿ. ಯಾವುದೇ ಕಾರಣಕ್ಕೂ ಸೇವಾ ಮನೋಭಾವ, ಶ್ರೀ ಕೊಟ್ಟೂರೇಶ್ವರ ಮೇಲಿನ ಭಕ್ತಿಯಿಂದ ಭಕ್ತರು ನೀಡುವ ಯಾವುದೇ ವಸ್ತು, ಆಹಾರ, ಪಾನೀಯಗಳು ವ್ಯರ್ಥ ಆಗದಂತೆ ಜಾಗ್ರತೆ ವಹಿಸಬೇಕು. ವಿಶೇಷವಾಗಿ ಸಾಗುವ ಮಾರ್ಗದುದ್ದಕ್ಕೂ ಸ್ವಚ್ಛತೆ ಕಾಪಾಡಲು ಸಲಹೆ ನೀಡಿದರು.
ದಾವಣಗೆರೆಯಲ್ಲಿ 4 ದಶಕಗಳ ಹಿಂದೆ ಕೆಲವೇ ಭಕ್ತರಿಂದ ಆರಂಭವಾದ ಪಾದಯಾತ್ರೆ ಪರಂಪರೆ ಇಂದು ಲಕ್ಷಾಂತರ ಪಾದಯಾತ್ರಿಗಳು ಕೊಟ್ಟೂರಿಗೆ ಸಾಗುವಷ್ಟು ವಿಸ್ತಾರವಾಗಿದೆ. ಇದು ಪ್ರದರ್ಶನ, ತೋರಿಕೆಗಷ್ಟೇ ಆಗದೇ, ಅರಿವಿನ ಯಾತ್ರೆ, ಜಾತ್ರೆಯಾಗಲಿ. 16-17ನೇ ಶತಮಾನದಲ್ಲಿದ್ದ ಕೊಟ್ಟೂರು ಬಸವೇಶ್ವರ ಅವರು ಬಸವತತ್ವ ನಿಷ್ಟರಾಗಿದ್ದರು. ಕೊಟ್ಟೂರು ಬಸವೇಶ್ವರ ಜಾತ್ರೆಗೆ ಹಿಂದುಳಿದ ವರ್ಗದ ಮನೆಯಿಂದ ಗಿಣ್ಣ ಬರುವ ಪದ್ಧತಿ ಇದೆ. ಸಮಾಜದ ಮೌಢ್ಯ, ಜಾತೀಯತೆ ಹೊಡೆದೋಡಿಸಿದ ಕೊಟ್ಟೂರು ಬಸವೇಶ್ವರ ಅವರು ಸಮಾಜಯೋಗಿ, ಮಹಿಮಾಪುರುಷ ಎಂದು ಸ್ಮರಿಸಿದರು.
ಔಷಧಿ ವ್ಯಾಪಾರಿಗಳ ಸಂಘದ ಬಿ.ಓ.ಮಲ್ಲಿಕಾರ್ಜುನ ಮಾತನಾಡಿ, ಪಾದಯಾತ್ರಿಗಳಿಗೆ ಔಷಧೋಪಚಾರ, ಚಿಕಿತ್ಸೆ ನೀಡಲು ವೈದ್ಯರು, ಆರೋಗ್ಯ ಸಿಬ್ಬಂದಿ ಇರುತ್ತಾರೆ. ಗ್ಲುಕೋಸ್ ಡಬ್ಬಿ, ನೀರಿನ ಬಾಟಲುಗಳನ್ನು ಸಹ ಎಲ್ಲೆಂದರಲ್ಲಿ ಬಿಸಾಡಬೇಡಿ. ಪಾದಯಾತ್ರಿಗಳಿಗೆ ಔಷಧೋಪಚಾರ ಸೇವೆ ನೀಡಲು ಬಹಳಷ್ಟು ವರ್ತಕರು, ವ್ಯಾಪಾರಸ್ಥರು, ಔಷಧಿ ವ್ಯಾಪಾರಸ್ಥರು, ಔಷಧಿ ಅಂಗಡಿಯವರು ಮುಂದಾಗಿದ್ದಾರೆ. ಸೇವೆ ಸದ್ಬಳಕೆ ಆಗುವಂತೆ ಪಾದಯಾತ್ರಿಗಳೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಅಯ್ಯನಹಳ್ಳಿಯ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರಿನ ಶ್ರೀ ಶಿವಪ್ರಕಾಶ ಸ್ವಾಮೀಜಿ, ಕೋಣಂದೂರಿನ ಶ್ರೀ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಉದ್ಯಮಿ ಡಾ. ಅಥಣಿ ಎಸ್.ವೀರಣ್ಣ, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಉಪಾಧ್ಯಕ್ಷ ಆರ್.ಜಿ ದತ್ತರಾಜ್, ಟಿ.ಜೆ. ಬಕ್ಕೇಶಪ್ಪ, ಬಿ.ಚಿದಾನಂದ, ಖಜಾಂಚಿ ಮಲ್ಲಾಬಾದಿ ಗುರುಬಸವರಾಜ, ವಿನುತಾ ರವಿ, ಗಾಯಕ ಸಿ.ಅಜಯನಾರಾಯಣ ವಚನ ಸಂಗೀತ ನಡೆಸಿಕೊಟ್ಟರು.
ಅನಂತರ ಲಕ್ಷಾಂತರ ಭಕ್ತರು ಕೊಟ್ಟೂರು ಬಸವೇಶ್ವರರ ಜಾತ್ರೋತ್ಸವಕ್ಕೆ ದಾವಣಗೆರೆಯಿಂದ ಬರಿಗಾಲಲ್ಲಿ ಪಾದಯಾತ್ರೆ ಕೈಗೊಂಡರು.- - -
(ಕೋಟ್ಸ್)ಎರಡೂ ಪಾದಗಳು ಜ್ಞಾನ-ಕ್ರಿಯೆಯ ಸಂಕೇತವಾಗಿವೆ. ಎರಡನ್ನೂ ಅಳವಡಿಸಿ ನಡೆಯುವವರೇ ನಿಜವಾದ ಪಾದಯಾತ್ರಿಗಳು. ಅಂತಹವರಿಗೆ ಸನ್ಮಾರ್ಗದಲ್ಲಿ ನಡೆಯುವ, ತಪ್ಪು ತಿದ್ದಿಕೊಳ್ಳುವಂಥ ಜ್ಞಾನೋದಯವಾಗಲಿ. ಇಂದಿನ ಯುವಜನಾಂಗ ಮೋಜು ತ್ಯಜಿಸಿ ಭಕ್ತಿಮಾರ್ಗದ ಕಡೆಗೆ ಬಂದಿರುವುದು ಕೊಟ್ಟೂರೇಶ್ವರ ಮಹಿಮೆಯೇ ಸರಿ.
- ಶ್ರೀ ಬಸವಪ್ರಭು ಸ್ವಾಮೀಜಿ, ವಿರಕ್ತ ಮಠ.- - -
ಸುಡು ಬಿಸಿಲಿನಲ್ಲೂ ಕೊಟ್ಟೂರಿಗೆ ಬರಿಗಾಲಲ್ಲಿ ಹೆಜ್ಜೆ ಹಾಕುವ ಭಕ್ತರ ಶ್ರದ್ಧಾಭಕ್ತಿಯು ದೊಡ್ಡದು. ನಮ್ಮದು ಭಕ್ತಿಪ್ರಧಾನ ದೇಶ. ಭಕ್ತಿ ಇಲ್ಲದಲೇ ಮುಕ್ತಿ ಕಾಣಲಾಗದು. ಚಿಕ್ಕಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೆ ಕೊಟ್ಟೂರೇಶ್ವರನ ಮೇಲಿನ ಭಕ್ತಿಯಿಂದ ನೋವನ್ನುಂಡು, ಗುರುವಿನ ದರ್ಶನಕ್ಕೆ, ಗುರುವಿನ ಜಾತ್ರೆಗೆ ಸಾಗುವ ಭಕ್ತರ ಭಕ್ತಿಗೆ ಸದಾ ಗುರುವಿನ ಕರುಣೆ ಸಿಗಲಿ. ಭಕ್ತರ ಹರಕೆ, ಬಯಕೆಗಳನ್ನು ಶ್ರೀ ಗುರು ಕೊಟ್ಟೂರೇಶ್ವರರು ಈಡೇರಿಸಲಿ.- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ.
- - --9ಕೆಡಿವಿಜಿ21, 22.ಜೆಪಿಜಿ: ದಾವಣಗೆರೆ ಚೌಕಿಪೇಟೆ ಶ್ರೀ ಬಕ್ಕೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಕೊಟ್ಟೂರು ಶ್ರೀ ಗುರು ಬಸವೇಶ್ವರ ಪಾದಯಾತ್ರಿಗಳಿಗೆ ಬೀಳ್ಕೊಡುಗೆ ನೀಡಲಾಯಿತು.
-9ಕೆಡಿವಿಜಿ23, 24: ಪಾದಯಾತ್ರೆಯಲ್ಲಿ ದಾವಣಗೆರೆ ನಗರ, ಜಿಲ್ಲೆಯ ವಿವಿಧ ತಾಲೂಕು, ಗ್ರಾಮೀಣ ಪ್ರದೇಶದಿಂದ ಬಂದ ಭಕ್ತರು ಪಾಲ್ಗೊಂಡರು.