ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪರಿಹಾರ ಹಾಗೂ ನಿವೇಶನ ಹಂಚಿಕೆ ವಿಳಂಬಕ್ಕೆ ಸಂಬಂಧಿಸಿದಂತೆ ರೈತನೋರ್ವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಗೆ ಚಪ್ಪಲಿ ಏಟು ನೀಡಿದ ಘಟನೆ ಶನಿವಾರ ನಡೆದಿದೆ.ಬಿಟಿಡಿಎ ಬೆರಳಚ್ಚುಗಾರ ನೀಲಕಂಠ ಅಂಕದ ಅವರ ಮೇಲೆ ರೈತ ಬಸಪ್ಪ ದೊಡ್ಡಮನಿ ಹಲ್ಲೆ ನಡೆಸಿದ್ದು, ನೀಲಕಂಠ ಅಂಕದ ಅವರು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶನಿವಾರ ಬಿಟಿಡಿಯಲ್ಲಿ ಹಕ್ಕುಪತ್ರ ಹಾಗೂ ಇ-ಖಾತಾ ವಿತರಿಸಲಾಗುತ್ತಿದ್ದ ವೇಳೆ ಬಿಟಿಡಿಎಗೆ ಆಗಮಿಸಿದ ರೈತ ಬಸಪ್ಪ ದೊಡ್ಡಮನಿ ಏಕಾಏಕಿ ನೀಲಕಂಠ ಅಂಕದ ಮೇಲೆ ದಾಳಿ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿದ್ದಾರೆ.
ನಡೆದಿದ್ದೇನು?:ಎರಡನೇ ಶನಿವಾರ ಆಗಿರುವುದರಿಂದ ಸರ್ಕಾರಿ ಕಚೇರಿಗಳಿಗೆ ರಜೆಯಿತ್ತು. ಆದರೆ, ಸಂತ್ರಸ್ತರಿಗೆ ಹಕ್ಕುಪತ್ರ ಹಾಗೂ ಇ-ಖಾತಾ ಉತಾರ ವಿತರಣೆ ಕಾರ್ಯಕ್ರ ಹಮ್ಮಿಕೊಂಡಿದ್ದರಿಂದ ಬಿಟಿಡಿಎ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದರು. ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಕಾರ್ಯಕ್ರಮ ಆರಂಭಗೊಂಡಿರಲಿಲ್ಲ. ನೀಲಕಂಠ ಅಂಕದ ತಮ್ಮ ಸ್ಥಾನದಲ್ಲಿ ಕೆಲಸಕ್ಕೆ ಕುಳಿತಿದ್ದರು. ಈ ವೇಳೆ ಬಸಪ್ಪ ದೊಡ್ಡಮನಿ ಸ್ಥಳಕ್ಕೆ ಆಗಮಿಸಿದ್ದು, ಏಕಾಏಕಿ ಅಂಕದ ಅವರ ಕಾಲರ್ ಹಿಡಿದು ಎಳೆದಾಡಿದ್ದಲ್ಲದೇ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪರಿಹಾರ ವಿತರಣೆ ವಿಳಂಬಕ್ಕೆ ಆಕ್ರೋಶ:
ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಸಪ್ಪ ದೊಡ್ಡಮನಿ ಅವರ ಜಮೀನು ಸ್ವಾಧೀನಗೊಂಡಿದೆ. ಅದಕ್ಕೆ ಸಂಬಂಧಿಸಿದಂತೆ ಬಿಟಿಡಿಎದಿಂದ ಪರಿಹಾರ ವಿತರಣೆ ಆಗಬೇಕಿದೆ. ಆದರೆ, ಅವರ ಜಮೀನಿಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದ್ದು, ಪರಿಹಾರದ ಚೆಕ್ನ್ನು ಬಿಟಿಡಿಎ ನ್ಯಾಯಾಲಯಕ್ಕೆ ನೀಡಿದೆ. ಹೀಗಾಗಿ ಪರಿಹಾರ ವಿತರಣೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ. ಬಸಪ್ಪ ಅವರ ಜಮೀನಿನ ವಿಚಾರ ನೋಡಿಕೊಳ್ಳುವ ಕೇಸ್ ವರ್ಕರ್ ಬೇರೆಯಿದ್ದು, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಹಿಂದೆ ಎಂಜನಿಯರ್ ಗಳು ಕೆಲಸಕ್ಕೆ ತೆರಳಿದಾಗಲೂ ಬಸಪ್ಪ ಇಂತದೇ ವರ್ತನೆ ತೋರಿದ್ದು, ಇಂದು ಏಕಾಏಕಿ ಬಂದು ಚಪ್ಪಲಿಯಿಂದ ಹಲ್ಲೆ ಮಾಡಿದ್ದಾನೆ. ನಾವು ನೌಕರರು, ದುಡಿಯಲು ಬಂದಿರುತ್ತೇವೆ. ನಮ್ಮ ಜೀವಕ್ಕೆ ರಕ್ಷಣೆ ಇಲ್ಲದಂತೆ ಆಗಿದೆ ಎಂದು ಮಾಧ್ಯಮಗಳ ಎದುರು ನೀಲಕಂಠ ಅಂಕದ ಹೇಳಿದ್ದಾರೆ.