ಮಡಿಕೇರಿಯಲ್ಲಿ ಬಾಲಗೋಕುಲ ವಸಂತ ಶಿಬಿರ

| Published : Apr 09 2024, 12:48 AM IST

ಸಾರಾಂಶ

ಮಕ್ಕಳಿಗಾಗಿ ವಸಂತ ಶಿಬಿರ ಹೆಸರಿನಲ್ಲಿ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಸಮೀಪವಿರುವ ಮಧುಕೃಪದ ಆವರಣದಲ್ಲಿ ‘ಬಾಲಗೋಕುಲ’ ಮಡಿಕೇರಿ ವತಿಯಿಂದ ಇತ್ತೀಚೆಗೆ ಮಕ್ಕಳಿಗಾಗಿ ‘ವಸಂತ ಶಿಬಿರ’ ಹೆಸರಿನಲ್ಲಿ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಕ್ಷೇತ್ರಗಳ ಹಲವಾರು ನುರಿತ ವ್ಯಕ್ತಿಗಳು ಮಕ್ಕಳಿಗೆ ಅಮೃತ ವಚನ, ಶ್ಲೋಕಗಳು, ಕಬೀರನ ದೋಹಗಳು, ಗಾದೆಗಳು, ಒಗಟುಗಳು, ಮಂಕುತಿಮ್ಮನ ಕಗ್ಗ, ದೇಶಭಕ್ತಿ ಗೀತೆಗಳು, ಅಭಿನಯ ಗೀತೆಗಳು, ಮಹಾಪುರುಷರ ಕಥೆಗಳು, ದೇಶಿಯ ಆಟಗಳು, ಯೋಗಾಸನ, ಸಂಗೀತ, ಕ್ರಾಫ್ಟ್ ಮುಂತಾದವುಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಅದರೊಂದಿಗೆ ಮರೆಯಾಗುತ್ತಿರುವ ದೇಶಿಯ ಆಟಗಳನ್ನು ಮಕ್ಕಳು ಆಟವಾಡಿ ಸಂಭ್ರಮಿಸಿದರು. ಶಿಬಿರದಲ್ಲಿ ಐದರಿಂದ ಹದಿನೈದನೇಯ ವಯಸ್ಸಿನ ಐವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಶಾರೀರಿಕ ಪ್ರಮುಖ್‌ ಡಾಲಿ ‘ಇಂದಿನ ಸಮಾಜದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯ ಕೊರತೆ ಬಹಳಷ್ಟು ಇದೆ. ಇದನ್ನು ಹೋಗಲಾಡಿಸಲು ಇಂದಿನ ಮಕ್ಕಳು ಮುಂದಿನ ಸಮಾಜಕ್ಕೆ ಸತ್ಕಾರ್ಯಕ್ಕಾಗಿ ಸಿಗಬೇಕಾದರೆ ಬಾಲಗೋಕುಲ ಶಿಕ್ಷಣ ಅನಿವಾರ್ಯವಾಗಿದೆ. ನಮ್ಮ ಮಕ್ಕಳನ್ನು ವಿಶ್ವದ ಶ್ರೇಷ್ಠ ಕೊಡುಗೆಯಾಗಿ ರೂಪಿಸಲು ಬಾಲಗೋಕುಲದ ಶಿಕ್ಷಣದಿಂದ ಪ್ರೇರಣೆ ಲಭಿಸಲಿ’ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಡಾ. ರೇಣುಶ್ರೀ ಮಾತನಾಡಿ ‘ನೈತಿಕ ವೌಲ್ಯ ಕುಸಿಯುತ್ತಿರುವ ವರ್ತಮಾನ ಕಾಲದಲ್ಲಿ ಸಾಮಾಜಿಕ ಅಧ:ಪತನ ಉಂಟಾಗುತ್ತಿದೆ. ಇದನ್ನು ತಡೆಯಲು ಮಾನವೀಯ ವೌಲ್ಯ ಬೆಳೆಸುವ ಸಾಂಸ್ಕೃತಿಕ ಶಿಕ್ಷಣವನ್ನು ಬೋಧಿಸುವ ವ್ಯವಸ್ಥೆಯ ಬಾಲಗೋಕುಲದಂತಹ ಸಂಸ್ಕಾರವನ್ನು ನೀಡುವ ಸಂಸ್ಥೆಗಳು, ಬಾಲ್ಯದಲ್ಲೇ ಮಕ್ಕಳಿಗೆ ಉತ್ತಮವಾದ ಜೀವನ ಮೌಲ್ಯಗಳನ್ನು ಕಲಿಸುವುದರಿಂದ ಮಕ್ಕಳು ಸತ್ಪಪ್ರಜೆಗಳಾಗಿ ರೂಪುಗೊಂಡು ನಮ್ಮ ರಾಷ್ಟ್ರದ ಉನ್ನತ್ತಿಗೆ ಜೊತೆಯಾಗುತ್ತಾರೆ ಎಂದರು.

ನಂತರ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಪೋಷಕರು ತಮ್ಮ ತಮ್ಮ ಮನೆಯಲ್ಲಿ ಭೋಜನ ಆಹಾರವನ್ನು ಸಿದ್ಧಪಡಿಸಿಕೊಂಡು ಬಂದು ಎಲ್ಲರೂ ಒಟ್ಟಾಗಿ ಮಾತೃಭೋಜನ ಸೇವಿಸುವುದರೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.