ಸಾರಾಂಶ
ಆಧುನಿಕ ಶಿಕ್ಷಣದ ನೆಪದಲ್ಲಿ ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳನ್ನು ಹೇಳಿಕೊಡುತ್ತಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಜೆಎಸ್ಎಸ್ ಮಹಾವಿದ್ಯಾಪೀಠವು ಬಾಲಜಗತ್ನಲ್ಲಿ ಆಯೋಜಿಸಿದ್ದ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭವು ಮಂಗಳವಾರ ರಾಜೇಂದ್ರ ಭವನದಲ್ಲಿ ಜರುಗಿತು.ಈ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಬಿಡಿಸಿದ್ದ ಚಿತ್ರಕಲಾ ಪ್ರದರ್ಶನವನ್ನು ಶ್ರೀ ಕಲಾನಿಕೇತನ ದೃಶ್ಯಕಲಾ ಕಾಲೇಜಿನ ಉಪನ್ಯಾಸಕ, ಕಲಾವಿದ ಡಾ. ವಿಠ್ಠಲರೆಡ್ಡಿ ಫ. ಚುಳಕಿ ಉದ್ಘಾಟಿಸಿದರು.ಉತ್ತಮ ಚಿತ್ರಗಳನ್ನು ಬಿಡಿಸಿದ್ದ ವಿವಿಧ ವಯೋಮಾನದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಉಳಿದ ಎಲ್ಲಾ ಮಕ್ಕಳಿಗೂ ಪ್ರಶಂಸನಾ ಪತ್ರ ನೀಡಲಾಯಿತು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮಾತನಾಡಿ, ಆಧುನಿಕ ಶಿಕ್ಷಣದ ನೆಪದಲ್ಲಿ ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳನ್ನು ಹೇಳಿಕೊಡುತ್ತಿಲ್ಲ. ಶಾಲೆಗಳಲ್ಲಿ ಕೂಡ ಇದರ ಬಗ್ಗೆ ಗಮನವಿಲ್ಲ. ಹೀಗಾಗಿ, ವರ್ಷದಲ್ಲಿ ಒಮ್ಮೆಯಾದರೂ ಬೇಸಿಗೆ ಶಿಬಿರದ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುತ್ತಿರುವುದು ಸಂತಸದ ವಿಚಾರ ಎಂದರು. ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ, ಶಿಬಿರದ ಸಂಚಾಲಕ ಎಸ್.ಎಂ. ಜಂಬುಕೇಶ್ವರ್ ಮೊದಲಾದವರು ಇದ್ದರು.