ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಜತೆಗೆ ಯಾವುದೇ ತೆರಿಗೆ ಹೇರದೆ ಸಮತೋಲಿತ ಬಜೆಟ್ ಮಂಡಿಸಿರುವುದು ವಿಶೇಷ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಶನಿವಾರ ಚಿಕ್ಕಮಗಳೂರು ನಗರದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿಗಳ ಜತೆಗೆ ಅಭಿವೃದ್ಧಿಗೂ ರಾಜ್ಯ ಸರ್ಕಾರದಲ್ಲಿ ಹಣ ಇದೆ ಎಂಬುದಕ್ಕೆ ಈ ರಸ್ತೆಯೇ ಸಾಕ್ಷಿಯಾಗಿದೆ ಎಂದರು.
ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ₹10 ಕೋಟಿ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆ ಸಚಿವರು ₹2 ಕೋಟಿ ನೀಡಿದ್ದಾರೆ. ಆ ಪೈಕಿ ₹1.5 ಕೋಟಿ ವೆಚ್ಚದಲ್ಲಿ ದೀಪ ನರ್ಸಿಂಗ್ ಹೋಂ ರಸ್ತೆ, ₹1 ಕೋಟಿ ವೆಚ್ಚದಲ್ಲಿ ಬಸವನಹಳ್ಳಿ ಮುಖ್ಯರಸ್ತೆ ಅಭಿವೃದ್ಧಿಪಡಿಸಿದ್ದೇವೆ ಎಂದರು.ನಗರದಲ್ಲಿ ಅಲ್ಪ ಸಂಖ್ಯಾತರ ಇಲಾಖೆಯಿಂದ ₹5 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದರು.ಜಿಲ್ಲೆಯ ಅಷ್ಟೂ ಬೇಡಿಕೆ ಈಡೇರಿಸದೆ ಇದ್ದರೂ ಕೆಲವು ಬೇಡಿಕೆ ಈಡೇರಿಸಿದ್ದಾರೆ. ರೋಪ್ ವೇ ಮಾಡುವ ಯೋಜನೆ ಮತ್ತು ಚಿಕ್ಕಮಗಳೂರಿಗೆ ಟೆಕ್ಸ್ಟೈಲ್ಸ್ ಪಾರ್ಕಿಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಬೇಲೂರು-ಚಿಕ್ಕಮಗಳೂರು ರೈಲ್ವೇ ಮಾರ್ಗದ ಅಭಿವೃದ್ಧಿ ಯೋಜನೆಗೆ ಶೇ.50 ರಷ್ಟು ಹಣ ಮೀಸಲಿಟ್ಟಿದೆ. ಇಲ್ಲೊಂದು ಮತ್ಸ ದರ್ಶಿನಿ ಸ್ಥಾಪಿಸುವ ಯೋಜನೆ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಇಷ್ಟರ ನಡುವೆಯೂ ಬಜೆಟ್ಚರ್ಚೆಯಲ್ಲಿ ಇನ್ನೊಂದಷ್ಟು ಕಾರ್ಯಕ್ರಮ ನೀಡಲು ಕೇಳಿಕೊಳ್ಳುತ್ತೇನೆ ಎಂದರು.
ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜು ಮಾತನಾಡಿ, ನಗರದಲ್ಲಿ ₹12 ಕೋಟಿ ವೆಚ್ಚದಲ್ಲಿ ಸಂಪೂರ್ಣ ನಗರ ವ್ಯಾಪ್ತಿಯಲ್ಲಿ ರಸ್ತೆಅಭಿವೃದ್ಧಿ ನಡೆಯುತ್ತಿದೆ. ಗುಣಮಟ್ಟದ ಕಾಮಗಾರಿ ಆಗಿದೆಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.ನಗರಸಭೆ ಅಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾ ರವಿನಾಯಕ್, ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರಸಭೆ ಸದಸ್ಯ ವರಸಿದ್ದಿ ವೇಣುಗೋಪಾಲ್ಉಪಸ್ಥಿತರಿದ್ದರು.