ಸಾರಾಂಶ
ರಾಜು ಗುರುಸ್ವಾಮಿ ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡು ವಾಪಸ್ಸಾದ ಹಿನ್ನೆಲೆ ನಗರದ ಸರ್ಕಾರಿ ಪದವಿ ಕಾಲೇಜು ಹತ್ತಿರದ ಆಂಜನೇಯ ಹಾಗೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಹುರಸಗುಂಡಿಗಿಯ ಭಗವಾನ್ ವೇದವ್ಯಾಸ ಸಂಸ್ಥಾನ ಬ್ರಹ್ಮಶ್ರೀ ಪಿಠಾಧಿಪತಿ ರಾಜು ಗುರುಸ್ವಾಮಿ ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡು ವಾಪಸ್ಸಾದ ಹಿನ್ನೆಲೆ ನಗರದ ಸರ್ಕಾರಿ ಪದವಿ ಕಾಲೇಜು ಹತ್ತಿರದ ಆಂಜನೇಯ ಹಾಗೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು.ಈ ವೇಳೆ ಮಾತನಾಡಿದ ಶ್ರೀಗಳು, ಬಾಲರಾಮ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲೋತ್ಸವ ನೆರವೇರಿರುವ ಸಂದರ್ಭದಲ್ಲಿ ಅದರಲ್ಲಿ ಭಾಗಿಯಾಗಿ ಕಾರ್ಯಕ್ರಮ ಸಂಪನ್ನಗೊಂಡಿರುವುದು ಪುಳಕಿತಗೊಳಿಸಿದೆ. ಅಲ್ಲಿ 24 ಗಂಟೆ ಪ್ರಸಾದ, ಉಪಹಾರ ಸೇರಿ ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿ ನೆರವೇರಿಸಿದ್ದು ಕಂಡು ಸಕಲ ಸಾಧು ಸಂತರಿಗೆ ಸಂತಸ ತಂದಿದೆ ಎಂದು ಹೇಳಿದರು.
ಈ ವೇಳೆ ಕರಸೇವಕರಾಗಿ ಅಯೋಧ್ಯೆಗೆ ತೆರಳಿದ್ದ ಶರಣಪ್ಪ ಹದನೂರು ಸನ್ಮಾನ ಸ್ವೀಕರಿಸಿ ಮಾತನಾಡಿ, ಅಂದು ಮನೆಗೊಂದು ಇಟ್ಟಿಗೆ ಹಾಗೂ ಒಂದು ರುಪಾಯಿ ಸಂಗ್ರಹಿಸಿ ಕಳುಹಿಸಿಕೊಟ್ಟಿದ್ದೇವು. ಇದಕ್ಕೂ ಮುನ್ನ ಕರಸೇವೆ ಮಾಡಿ ಅಲ್ಲಿ ರಾಮ ಜನಿಸಿದ ಸ್ಥಳದಲ್ಲಿ ಮಂದಿರ ಕೆಡವಿ ಕಟ್ಟಲಾಗಿದ್ದ ಗುಮ್ಮಟಗಳನ್ನು ನೆಲಸಮ ಮಾಡುವ ಇಂತಹ ಒಂದು ಧರ್ಮ ಕಾರ್ಯದಲ್ಲಿ ಭಾಗಿಯಾಗಿದ್ದಕ್ಕೆ ಹೆಮ್ಮೆಯಿದೆ ಎಂದರು.ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಸನ್ಮಾನ ನೆರವೇರಿಸಿ ಮಾತನಾಡಿ, ಜಿಲ್ಲೆಯಿಂದ ಸ್ವಾಮೀಜಿಗೆ ಆಹ್ವಾನ ಬಂದಿದ್ದ ಹಿನ್ನೆಲೆ ಅಯೋಧ್ಯೆಗೆ ತೆರಳಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿ ಮರಳಿ ಬಂದ ಅವರಿಂದ ಜಿಲ್ಲೆ ಎಲ್ಲರೂ ತೆರಳಿದಂತೆ ಆಗಿದೆ ಎಂದರು.
ಉದ್ದಿಮೆದಾರ ಹಣಮಂತ ಗುಜರಾತ್, ಗಿರಿನಾಡು ಟ್ಯಾಕ್ಸಿ ಚಾಲಕರ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ, ಶರಣು ನಾಪೇಟ್, ಬನ್ನಯ್ಯ ಸ್ವಾಮಿ, ಗೌರಿಶ ಚಿಕ್ಕಮಠ, ಜಗದೀಶ ಹಿರೇಮಠ, ಶೇಖರ, ಹಣಮಂತ, ನಾಗಪ್ಪ, ನಿಂಗಪ್ಪ, ಅಂಜಿನೇಯ, ರಾಮುಲು, ರಿತೇಶ, ರಫೀಕ್ ಪಟೇಲ್, ಬಾಬುಖಾನ್, ಸಾಬಯ್ಯ ಗುತ್ತೇದಾರ, ಅಂಜನೇಯ ಬೆಳಗೇರಾ, ಮರೆಪ್ಪ ದೊರೆ ಸೇರಿದಂತೆ ಇತರರಿದ್ದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.