ಪ್ರಮುಖ ಜವಾಬ್ದಾರಿ ನೂತನ ಅಧ್ಯಕ್ಷರ ಹೆಗಲ ಮೇಲಿದೆ. ಅಡಕೆ ವ್ಯವಹಾರ ಜೊತೆ ಪಕ್ಷ ಸಂಘಟನೆ ನಡೆಸಿ ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಬರುವ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕು ಬಿಜೆಪಿಯ ನೂತನ ಅಧ್ಯಕ್ಷರಾಗಿ ಬಲರಾಮಣ್ಣ ಗುರುವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಪಂಚಾಕ್ಷರಿ ಅವರ ಮೂಲಕ ಪಕ್ಷದ ಭಾವುಟ ಪಡೆದು ಅಧಿಕಾರ ವಹಿಸಿಕೊಂಡರು.

ಪಟ್ಟಣದ ಎವಿಕೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯ ಮತ್ತು ಜಿಲ್ಲಾ ಮುಖಂಡರು ಹಾಗೂ ತಾಲೂಕಿನ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅಧಿಕಾರ ವಹಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಮಾತನಾಡಿ, ಪಕ್ಷದಲ್ಲಿ ಬಲಿಷ್ಠ ಮುಖಂಡರ ಸಂಖ್ಯೆ ಹೆಚ್ಚಾಗಿದ್ದು, ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ, ಗುಂಪುಗಾರಿಕೆಗೆ ಅವಕಾಶ ಕೊಡದೆ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ. ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬ ವಿಚಾರ ಕ್ಷೇತ್ರದಲ್ಲಿ ಕಂಡಿದೆ. ಶಾಸಕರ ಆಯ್ಕೆ ನಮ್ಮಲ್ಲಿ ಸುಲಭ ಮಾಡಿಕೊಳ್ಳಲು ಮೊದಲು ಸ್ಥಳೀಯ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಅಧ್ಯಕ್ಷರು ಹಾಗೂ ಮುಖಂಡರ ಮೇಲಿದೆ. ಪಕ್ಷ ಗೆಲ್ಲಿಸುವ ಕಾರ್ಯಕರ್ತರು ಯಾವುದೇ ಗೊಂದಲಕ್ಕೀಡಾಗದೆ 2028ಕ್ಕೆ ಶಾಪ ವಿಮೋಚನೆ ಮಾಡೋಣ ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಮಾತನಾಡಿ, ಪ್ರಮುಖ ಜವಾಬ್ದಾರಿ ನೂತನ ಅಧ್ಯಕ್ಷರ ಹೆಗಲ ಮೇಲಿದೆ. ಅಡಕೆ ವ್ಯವಹಾರ ಜೊತೆ ಪಕ್ಷ ಸಂಘಟನೆ ನಡೆಸಿ ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಬರುವ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಈ ಡಿಸೆಂಬರ್ ಮಾಹೆಯಲ್ಲಿ ವಿವಿಧ ಮೋರ್ಚಾಗಳಿಗೆ ಕೆಲಸ ಮಾಡುವ ಕಾರ್ಯಕರ್ತರನ್ನು ನೇಮಿಸಲು ಸನ್ನದ್ಧರಾಗುವಂತೆ ಸೂಚಿಸಿದರು.

ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಮಾತನಾಡಿ, ರಾಜ್ಯದೆಲ್ಲೆಡೆ ತಾಲೂಕು ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ. ಕ್ಷೇತ್ರದ 5 ಹೋಬಳಿಗಳಲ್ಲಿ ಬೂತ್ ಮಟ್ಟದ ಸಮಿತಿ ರಚಿಸಿ ಪಾರದರ್ಶಕವಾಗಿ ಘಟಕಗಳು ಕೆಲಸ ಮಾಡಿದರೆ ಚುನಾವಣಾ ಫಲಿತಾಂಶ ತಾನಾಗಿಯೇ ಫಲಪ್ರದ ಆಗಲಿದೆ. ಪುರಾಣ ಕಥೆಯಲ್ಲಿ ಶಕ್ತಿಶಾಲಿ ಬಲರಾಮರಂತೆ ನೂತನ ಅಧ್ಯಕ್ಷರು ಪಕ್ಷ ಸಂಘಟನೆ ಮಾಡಲಿ ಎಂದು ಶುಭ ಹಾರೈಸಿದರು.

ನೂತನ ಅಧ್ಯಕ್ಷ ಬಲರಾಮಣ್ಣ ಮಾತನಾಡಿ, ಪಕ್ಷ ಸಂಘಟನೆಗೆ ಕಾರ್ಯಕರ್ತನಾಗಿ ದುಡಿದು ಪ್ರತಿ ಕಾರ್ಯಕರ್ತರಲ್ಲಿ ಅಧ್ಯಕ್ಷರನ್ನು ಕಾಣುವಂತೆ ಕೆಲಸ ಮಾಡುತ್ತೇನೆ. ಮುಂದಿನ ಸ್ಥಳೀಯ ಚುನಾವಣೆ ಪರ್ವ ಯಶಸ್ವಿಯಾಗಿ ನಿರ್ವಹಿಸಿ ಪಕ್ಷದ ಗೆಲುವಿಗೆ ಪಣ ತೊಡುವುದಾಗಿ ಹೇಳಿ, ಅಧ್ಯಕ್ಷ ಸ್ಥಾನ ನೀಡಿದ ಪಕ್ಷದ ಎಲ್ಲಾ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಪಂಚಾಕ್ಷರಿ, ಜಿಪಂ ಮಾಜಿ ಸದಸ್ಯರಾದ ವೈ.ಎಚ್.ಹುಚ್ಚಯ್ಯ, ಪಿ.ಬಿ.ಚಂದ್ರಶೇಖರಬಾಬು, ಹಿರಿಯ ಮುಖಂಡ ಎಸ್.ನಂಜೇಗೌಡ ಮಾತನಾಡಿದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್ ಗೌಡ, ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ, ಎಸ್.ವಿಜಯಕುಮಾರ್, ರೈತಮೋರ್ಚಾ ರಾಜ್ಯ ಕಾರ್ಯದರ್ಶಿ ಬ್ಯಾಟರಂಗೇಗೌಡ, ಮುಖಂಡರಾದ ಎನ್.ಸಿ.ಪ್ರಕಾಶ್, ಯತೀಶ್, ಸಿ.ಎಂ.ಹಿತೇಶ್, ಸಿದ್ದರಾಮಯ್ಯ, ಬಸವರಾಜ್, ಜಿಪಂ ಮಾಜಿ ಸದಸ್ಯರಾದ ಯಶೋಧಮ್ಮ, ಡಾ.ನವ್ಯಾಬಾಬು, ಪಪಂ ಮಾಜಿ ಸದಸ್ಯರಾದ ಶಿವಕುಮಾರ್, ಅಣ್ಣಪ್ಪಸ್ವಾಮಿ, ಕೃಷ್ಣಮೂರ್ತಿ, ಅ.ನ.ಲಿಂಗಪ್ಪ ಇತರರು ಇದ್ದರು.