ಸಾರಾಂಶ
-1949ರಲ್ಲಿ ಆರಂಭಗೊಂಡ ಕೃಷಿ ಸಂಘ । ಅಧ್ಯಕ್ಷ ಟಿ.ಎಂ.ಉಮೇಶ್ ಮಾಹಿತಿ
------ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಎಸಿಎಸ್) ಅಮೃತ ಮಹೋತ್ಸವ ಸಮಾರಂಭ ಅ.28ರಂದು ಕಡ್ಲೇಮಕ್ಕಿಯ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ತಿಳಿಸಿದ್ದಾರೆ.ಬಾಳೆಹೊನ್ನೂರಿನಲ್ಲಿ 1949ರಲ್ಲಿ ಊರಿನ ಹಲವು ಹಿರಿಯರ ಶ್ರಮದ ಫಲವಾಗಿ ರೈತರ ಹಿತದೃಷ್ಟಿಯಿಂದ ವ್ಯವಸಾಯ ಸೇವಾ ಸಹಕಾರ ಸಂಘ ಹೆಸರಿನಲ್ಲಿ ಆರಂಭಗೊಂಡ ಪಿಎಸಿಎಸ್ ಇಂದು ಯಶಸ್ಸಿನ ಹಾದಿಯಲ್ಲಿ ಮುನ್ನಡೆದು ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘ ಅಮೃತ ಮಹೋತ್ಸವಕ್ಕೆ ಪಾದರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಬೇಕು ಎಂದು ಆಡಳಿತ ಮಂಡಳಿ ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಅ.28ರಂದು ಕಾರ್ಯಕ್ರಮ ಆಯೋಜನೆ ಮಾಡಿದೆ.ಅ.28ರ ಸೋಮವಾರ ಸಂಘದ ಪ್ರಧಾನ ಕಚೇರಿಯಲ್ಲಿ ಸಹಕಾರಿ ಧ್ವಜಾರೋಹಣ ನೆರವೇರಿಸಿ ಪಟ್ಟಣದ ಮುಖ್ಯರಸ್ತೆಯಲ್ಲಿ ಸಹಕಾರಿ ಜಾಗೃತಿ ಜಾಥಾ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮಾಗುಂಡಿ ಶಾಖೆ ನೂತನ ವ್ಯಾಪಾರ ಮಳಿಗೆಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಉದ್ಘಾಟಿಸಲಿದ್ದಾರೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಮಾಜಿ ಸಚಿವ ಡಿ.ಎನ್.ಜೀವರಾಜ್, ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಿ.ಎಸ್.ಮಹಾಬಲ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸಂಘದ ನಿರ್ದೇಶಕ ಕೆ.ಟಿ.ವೆಂಕಟೇಶ್ ಮಾತನಾಡಿ, ಅಮೃತ ಮಹೋತ್ಸವ ಆಚರಣೆ ನಮ್ಮೆಲ್ಲರ ಹೆಮ್ಮೆ, 1949ರಲ್ಲಿ 216 ಸದಸ್ಯರಿಂದ ಕೇವಲ ₹2 ಸಾವಿರ ಷೇರು ಹಣದೊಂದಿಗೆ ಆರಂಭಗೊಂಡ ಸಂಘ ಸಹಕಾರ ತತ್ವದಡಿ ಕಾರ್ಯ ನಿರ್ವಹಿಸುತ್ತಿದೆ.
ಪ್ರಸ್ತುತ ಬಿ.ಕಣಬೂರು, ಬನ್ನೂರು, ಮಾಗುಂಡಿ, ಕಾರೇಹಡ್ಲು, ಮುದುಗುಣಿ, ಹಲಸೂರು ವ್ಯಾಪ್ತಿಯಲ್ಲಿ ಸಂಘವು ಕಾರ್ಯನಿರ್ವಹಣೆ ಮಾಡುತ್ತಿದ್ದು, ₹20 ಕೋಟಿಗೂ ಹೆಚ್ಚು ದುಡಿಯುವ ಬಂಡವಾಳ, ₹100 ಕೋಟಿಗೂ ಹೆಚ್ಚು ವ್ಯವಹಾರ, ₹10 ಕೋಟಿಗೂ ಹೆಚ್ಚು ಡಿಪಾಸಿಟ್ ಹೊಂದಿದೆ.ವೈದ್ಯನಾಥನ್ ವರದಿ ಅನ್ವಯ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ತನ್ನ ಸ್ವಂತ ಲಾಭಾಂಶದಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದೆ. ಮೂಲ ಬಂಡವಾಳ ಉತ್ತಮವಾಗಿ ಹೊಂದಿ ಸಂಘ ಭದ್ರವಾಗಿದೆ ಎಂದರು.
ನಿರ್ದೇಶಕ ಕೆ.ಕೆ.ವೆಂಕಟೇಶ್ ಕಾನ್ಕೆರೆ ಮಾತನಾಡಿ, ಸಂಘ ₹2ಸಾವಿರದಿಂದ 100 ಕೋಟಿಯವರೆಗೆ ವ್ಯವಹಾರ ನಡೆಸುತ್ತಿರುವುದು ಸಾಮಾನ್ಯ ವಿಚಾರವಲ್ಲ. ಸಂಸ್ಥೆ ಸತತವಾಗಿ ಲಾಭದೊಂದಿಗೆ ಸಾಕಷ್ಟು ಸ್ತಿರಾಸ್ಥಿಗಳನ್ನು ಹೊಂದಿ ರೈತರು, ಗ್ರಾಹಕರಿಗೆ ಪೂರಕವಾಗಿ ಸೇವೆ ಸಲ್ಲಿಸುತ್ತಿದೆ. ಸಂಘದ ಅಮೃತ ಮಹೋತ್ಸವಕ್ಕೆ ಪ್ರತಿಯೊಬ್ಬ ಷೇರುದಾರರು, ರೈತರು ಪಾಲುದಾರರಾಗಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.ಸಂಘದ ಉಪಾಧ್ಯಕ್ಷ ಎಂ.ಸಿ.ಚಂದ್ರಶೇಖರ್, ನಿರ್ದೇಶಕರಾದ ಹಿರಿಯಣ್ಣ, ಎಂ.ಎಸ್.ಅರುಣೇಶ್, ಕೆ.ಟಿ.ಗೋವಿಂದೇಗೌಡ, ಬಿ.ಎ. ರಾಜಪ್ಪಗೌಡ, ಸುಧಾ ಎಸ್.ಪೈ, ಲೀಲಾವತಿ, ಸಂಘದ ಸಿಇಒ ಎಚ್.ಉಮೇಶ್, ಕರಿಮನೆ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ಪ್ರವೀಣ್ಕುಮಾರ್, ಸಂಘದ ಸಿಬ್ಬಂದಿ ಎಚ್.ಎಂ.ವೆಂಕಟೇಶ್, ಸತೀಶ್, ಡಿ.ರಾಜೇಂದ್ರ, ಅಣ್ಣಪ್ಪ, ಬಿ.ಎಸ್.ಶ್ರೀನಿವಾಸ್, ಚಿರಾಗ್, ನಂದನ್, ಕಿಶೋರ್ ಹಾಜರಿದ್ದರು.-----
೧೫ಬಿಹೆಚ್ಆರ್ ೧:ಬಾಳೆಹೊನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಸಂಘದ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ಬಿಡುಗಡೆಗೊಳಿಸಿದರು. ಚಂದ್ರಶೇಖರ್, ವೆಂಕಟೇಶ್, ಹಿರಿಯಣ್ಣ, ಅರುಣೇಶ್, ರಾಜಪ್ಪಗೌಡ, ಸುಧಾ ಪೈ ಇದ್ದರು.