ಮೂಡುಬಿದಿರೆ: ಬನ್ನಡ್ಕ ವಿಶ್ವವಿದ್ಯಾನಿಲಯ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಬನ್ನಡ್ಕದ ನಳಿನಾಕ್ಷಿ ಸಭಾಭವನದಲ್ಲಿ ಕಾಲೇಜಿನ ಸಂಯೋಜಕ ಪ್ರೊ. ಕುಮಾರ್ ಸುಬ್ರಹ್ಮಣ್ಯ ಭಟ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಯಾನಂದ ಪೈ ಮುಖ್ಯ ಅತಿಥಿಗಳಾಗಿ ಆಗಮಿಸಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ಬೇಕಾಗುವ ಆತ್ಮಸ್ಥೆರ್ಯ ಬೆಳೆಸಲು ಕರೆ ನೀಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಸ್ಥಳೀಯ ಮುಖಂಡರಾದ ಬೋಳ ವಿಶ್ವನಾಥ ಕಾಮತ್ ಬಂಟ್ವಾಳ ಪಾಲ್ಗೊಂಡಿದ್ದರು. ಶಿಕ್ಷಕ-ರಕ್ಷಕ ಸಂಘದ ಕಾರ್ಯಾಧ್ಯಕ್ಷ ಎ ಎಸ್ ಕಾವೇರಮ್ಮ ಹಾಗೂ ಪಡುಮಾರ್ನಾಡು ಗ್ರಾಮ ಪಂಚಾಯಿತಿ ನಿರ್ಗಮಿತ ಸದಸ್ಯರಾದ ನಿತಿನ್ ಕೋಟ್ಯಾನ್ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ವೇಳೆ ಶೈಕ್ಷಣಿಕ ಸಾಧಕರನ್ನು, ಕ್ರೀಡಾ ಸಾಧಕರನ್ನು, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರನ್ನು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ಸಾಫ್ಟ್‌ಬಾಲ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ ತಂಡದ ಕ್ರೀಡಾ ಪಟುಗಳನ್ನು ಅಭಿನಂದಿಸಲಾಯಿತು. ಉತ್ತಮ ಎನ್. ಎಸ್. ಎಸ್ ಸ್ವಯಂ ಸೇವಕರಾದ ದ್ವಿತೀಯ ಬಿ.ಕಾಂನ ದೀಪ್ತಿ ಸುರೇಶ್ ಪೂಜಾರಿ ಹಾಗೂ ರಾಜೇಶ್, ಉತ್ತಮ ಕ್ರೀಡಾ ಸಾಧಕರಾದ ತೃತೀಯ ಬಿ.ಸಿ.ಎಯ ಸಂಗೀತ ಹಾಗೂ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿ ಪಡೆದ ತೃತೀಯ ಬಿ ಎ ತರಗತಿಯ ಸುಕನ್ಯ ಅವರನ್ನು ಅಭಿನಂದಿಸಲಾಯಿತು.

ಉಪನ್ಯಾಸಕರಾದ ಆಶಾ ಶಾಲೇಟ್ ಡಿಸೋಜ ಇವರು ಸ್ವಾಗತಿಸಿದರು. ಮಮತಾ ಬಿ ಎಸ್ ಇವರು ವಾರ್ಷಿಕ ವರದಿ ವಾಚಿಸಿದರು, ಸುರೇಶ್ ವಂದಿಸಿದರು, ಪುಷ್ಪ ನಿರೂಪಿಸಿದರು.