ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂ.ಸ್ಯಾಂಡ್ ಕೊರತೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯಕ್ಕೆ ಎಂ.ಸ್ಯಾಂಡ್ ಸಾಗಾಟಕ್ಕೆ ನೀಡಲಾಗುತ್ತಿರುವ ಪರವಾನಿಗೆಗೆ ತಕ್ಷಣ ತಡೆ ವಿಧಿಸುವಂತೆ ಆಗ್ರಹಿಸಿ ಸಿದ್ದಕಟ್ಟೆಯ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಜಿಲ್ಲಾಧಿಕಾಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಕಲ್ಲಿನ ಕೋರೆಗಳಲ್ಲಿ ಲಭ್ಯವಾಗುವ ಎಂ.ಸ್ಯಾಂಡ್ ಹೆಚ್ಚಿನ ಪ್ರಮಾಣದಲ್ಲಿ ಕೇರಳಕ್ಕೆ ಸಾಗಾಟವಾಗುತ್ತಿರುವುದರಿಂದ ಸ್ಥಳೀಯ ಕಾಮಗಾರಿಗಳಿಗೆ, ಖಾಸಗಿ ಕಟ್ಟಡ ನಿರ್ಮಾಣಗಳಿಗೆ ಹಾಗೂ ಗೃಹ ನಿರ್ಮಾಣಗಳಿಗೆ ತೀವ್ರ ಕೊರತೆ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಇದರ ಪರಿಣಾಮವಾಗಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಕೇರಳದಲ್ಲಿ ಎಂ.ಸ್ಯಾಂಡ್ ಗೆ ಹೆಚ್ಚಿನ ಬೆಲೆ ದೊರಕುತ್ತಿರುವ ಕಾರಣ, ಜಿಲ್ಲೆಯ ಉತ್ಪಾದನೆಯ ಬಹುಪಾಲು ಅತ್ತ ಸಾಗುತ್ತಿದೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಎಂ.ಸ್ಯಾಂಡ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಜಿಲ್ಲೆಯಲ್ಲಿ ಒಂದು ಲೋಡ್ ಮರಳಿಗಾಗಿ ಲಾರಿಗಳು 1ರಿಂದ 2 ದಿನಗಳವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮರಳಿನ ಬೆಲೆ ಢಕ್ಕೆಯಲ್ಲಿ ಪರವಾನಿಗೆ ಸಹಿತ ₹14,000ಕ್ಕೆ ಏರಿಕೆಯಾಗಿದೆ. ಬಡ ಜನರು ಇದನ್ನು ₹18,000 ರಿಂದ ₹24,000ರವರೆಗೆ ಖರೀದಿಸಬೇಕಾದ ಪರಿಸ್ಥಿತಿ ಇದೆ. ಹಾಗೆಯೇ 3 ಯೂನಿಟ್ ಎಂ.ಸ್ಯಾಂಡ್ ಬೆಲೆ ₹12,000ರವರೆಗೆ ಏರಿಕೆಯಾಗಿದೆ ಎಂದು ಗಮನ ಸೆಳೆದಿದ್ಾರೆ.ಈ ಮನವಿಯನ್ನು ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನಿ ಇಲಾಖೆಯವರಿಗೂ ಕಳುಹಿಸಲಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.