ಹಣಗೆರೆಕಟ್ಟೆಯಲ್ಲಿ ಮಹಿಳೆಯ ಬರ್ಬರ ಹತ್ಯೆ

| Published : Apr 05 2024, 01:02 AM IST

ಹಣಗೆರೆಕಟ್ಟೆಯಲ್ಲಿ ಮಹಿಳೆಯ ಬರ್ಬರ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆಯ ಖಾಸಗಿ ವಸತಿಗೃಹದಲ್ಲಿ ಯುವತಿ ಹತ್ಯೆ ಹಿನ್ನೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಹಣಗೆರೆಕಟ್ಟೆ ಖಾಸಗಿ ವಸತಿಗೃಹದಲ್ಲಿ ನಡೆದ ವಿವಾಹಿತ ಮಹಿಳೆಯ ಬರ್ಬರ ಹತ್ಯೆಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಇಡೀ ರಾಜ್ಯದಲ್ಲೇ ಮಾದರಿಯಾಗಿರುವ ಈ ಕೇಂದ್ರದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ನಿಯಂತ್ರಿಸುವಲ್ಲಿ ಕ್ರಮ ಕೈಗೊಳ್ಳದಿರುವ ಆಡಳಿತದ ಬಗ್ಗೆಯೂ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅಮಾನುಷವಾಗಿ ಕೊಲೆಯಾದ ಅಪರಿಚಿತ ಮಹಿಳೆ ವಯಸ್ಸು ಸುಮಾರು 30 ವರ್ಷವಾಗಿದ್ದು ವಿವಾಹಿತೆಯಾಗಿದ್ದಾಳೆ. ಕತ್ತಿನಲ್ಲಿ ಕರಿಮಣಿ ಸರ, ಕಾಲುಂಗುರು ಇದ್ದು ಚೂಡಿದಾರ ಧರಿಸಿದ್ದಳು. ಈಕೆಯ ಕತ್ತು, ಮುಖ, ಕೈ ಮತ್ತು ಕಾಲುಗಳನ್ನು ಕೂಡಾ ಸೀಳಲಾಗಿದ್ದು ಕೊಲೆ ಮಾಡಿದ ಕೊಠಡಿ ತುಂಬಾ ರಕ್ತದ ಕೋಡಿ ಹರಿದಿದೆ. ಇಂಥಹ ಘಟನೆಗೆ ಲಂಗು ಲಗಾಮಿಲ್ಲದ ಆಡಳಿತದ ವೈಫಲ್ಯವೇ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ.

ಸೋಮವಾರ ನಡೆದಿದೆ ಎನ್ನಲಾದ ಅತ್ಯಂತ ಕ್ರೂರವಾದ ಈ ಘಟನೆ ಬುಧವಾರ ಸಂಜೆಯ ಹೊತ್ತಿಗೆ ತಡವಾಗಿ ಬೆಳಕಿಗೆ ಬಂದಿದೆ. ಹಣಗೆರೆಕಟ್ಟೆ ಹಜರತ್ ಸೈಯದ್ ಸಾದತ್‍ದರ್ಗಾ ಮತ್ತು ಭೂತರಾಯ ಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ವಸತಿ ಗೃಹದ ಎರಡನೇ ಮಹಡಿಯಲ್ಲಿರುವ ಕೊಠಡಿಯಲ್ಲಿ ಶವ ನೆಲದ ಮೇಲೆ ಬಿದ್ದಿತ್ತು. ಅಮಾನುಷವಾಗಿ ನಡೆದ ಹತ್ಯೆ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರಲ್ಲಿ ಭೀತಿ ಉಂಟಾಗಿತ್ತು.

ಬುಧವಾರ ಸಂಜೆ ವಸತಿ ಗೃಹದ ಕೊಠಡಿಯಲ್ಲಿ ರಕ್ತದ ಕಲೆ ಕಾಣುತ್ತಿರುವ ಸುದ್ದಿ ಬಾಯಿಂದ ಬಾಯಿಗೆ ಹರಡುತ್ತಿದ್ದಂತೆ ತಿಳಿದ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮಾರೆಡ್ಡಿ, ಡಿವೈಎಸ್‍ಪಿ ಗಜಾನನ ಸುತಾರ್, ಗ್ರಾಮಾಂತರ ಸಿಪಿಐ ಶ್ರೀಧರ್ ಹಾಗೂ ಬೆರಳಚ್ಚು ತಜ್ಞರತಂಡ ಸ್ಥಳಕ್ಕೆ ಬಂದಿದ್ದು ತನಿಖೆ ನಡೆಸಿದ್ದಾರೆ.

ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್ ಗುರುವಾರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.