ಸಾರಾಂಶ
ಬಾರ್ಕೂರು: ಇಲ್ಲಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಹಿಮಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಲಭ್ಯವಿರುವ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಗುರಿ ಸಾಧನೆಗಾಗಿ ತಮ್ಮ ವಿದ್ಯಾರ್ಥಿ ಜೀವನ ಮೀಸಲಿಡಬೇಕು. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಿ ಇತರರಿಗೂ ಮಾದರಿಯಾಗಬೇಕು ಎಂದರು.ಸಂಪನ್ಮೂಲ ವ್ಯಕ್ತಿಗಳಾಗಿ ಶೈಕ್ಷಣಿಕ ಸಲಹೆಗಾರರು ಹಾಗೂ ಆಂಗ್ಲ ವಿಭಾಗ ಮುಖ್ಯಸ್ಥ ಡಾ. ಪ್ರಸಾದ್ ರಾವ್ ಎಂ. ಮಾತನಾಡಿ, ವಿದ್ಯಾರ್ಥಿಗಳು ಕಾಲಕಾಲಕ್ಕೆ ಸರಿಯಾಗಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಸ್ಪರ್ಧಾತ್ಮಕ ಮನೋಭಾವದಿಂದ ಮುನ್ನಡೆದರೆ ಯಾವುದೂ ಅಸಾಧ್ಯವಲ್ಲ. ಸಂಸ್ಥೆಯ ನಿಯಮಕ್ಕೆ ಬದ್ಧರಾಗಿ ಶಿಸ್ತಿನಿಂದ ಕಲಿಕಾ ಜೀವನದ ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಭಾಸ್ಕರ್ ಶೆಟ್ಟಿ ಸಳ್ವಾಡಿ ಅವರು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸತತ ಸಾಧನೆ ಮಾಡುವ ಹಸಿವು ಯಶಸ್ಸಿಗೆ ಇಂಧನ. ಸಮಯ ಮತ್ತು ಅವಕಾಶಗಳು ಬಹಳ ಮುಖ್ಯವಾಗಿದ್ದು ಅವುಗಳನ್ನು ವ್ಯರ್ಥಗೊಳಿಸದೇ ಗರಿಷ್ಠ ಪ್ರಮಾಣದಲ್ಲಿ ಉಪಯೋಗಿಸಿಕೊಂಡಿದ್ದಲ್ಲಿ ಸಾಧನೆ ಸುಲಭವಾಗುವುದು ಎಂದರು.ಐಕ್ಯೂಎಸಿ ಸಂಚಾಲಕಿ ಶೋಭಾ ಆರ್. ಸ್ವಾಗತಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ಶೈಲಜಾ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಲೋಲಾಕ್ಷಿ ನಿರೂಪಿಸಿದರು. ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಇದ್ದರು.