ಬಸರಾಳು: ಹಾಲು ಉತ್ಪಾದಕರ ಸಂಘದ ಸಭಾಂಗಣ ಉದ್ಘಾಟನೆ

| Published : Jan 28 2025, 12:47 AM IST

ಸಾರಾಂಶ

ಮನ್‌ಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಯು.ಸಿ.ಶಿವಕುಮಾರ್ ಮತ್ತು ಕೆಬ್ಬಳ್ಳಿ ರಾಜು ಅವರನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು. ನಮ್ಮ ಕ್ಷೇತ್ರದಲ್ಲಿ ನೂರು ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಇವುಗಳ ಅಭಿವೃದ್ಧಿಗೆ ಶಾಸಕರ ಅನುದಾನವನ್ನು ನೀಡಿ ಮತ್ತಷ್ಟು ಬಲಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಬಸರಾಳು ಹಾಲು ಉತ್ಪಾದಕರ ಸಹಕಾರ ಸಂಘದಿಂದ ೫೦ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ನೂತನ ಸಭಾಂಗಣ ಉದ್ಘಾಟನೆಯನ್ನು ಶಾಸಕ ಪಿ ರವಿಕುಮಾರ್‌ಗೌಡ ನೆರವೇರಿಸಿದರು.

ನಂತರ ಮಾತನಾಡಿ, ಈ ಭಾಗದ ಹಾಲು ಉತ್ಪಾದಕರ ಪರಿಶ್ರಮದಿಂದ ಸಂಘ ೫೦ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಸಂಘ ಮತ್ತಷ್ಟು ಉಜ್ವಲವಾಗಿ ಬೆಳೆದು ಹಾಲು ಉತ್ಪಾದಕರಿಗೆ ಲಾಭದಾಯಕವಾಗಿರುವಂತೆ ಆಶಿಸುತ್ತೇನೆ ಎಂದರು.

ಮನ್‌ಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಯು.ಸಿ.ಶಿವಕುಮಾರ್ ಮತ್ತು ಕೆಬ್ಬಳ್ಳಿ ರಾಜು ಅವರನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು. ನಮ್ಮ ಕ್ಷೇತ್ರದಲ್ಲಿ ನೂರು ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಇವುಗಳ ಅಭಿವೃದ್ಧಿಗೆ ಶಾಸಕರ ಅನುದಾನವನ್ನು ನೀಡಿ ಮತ್ತಷ್ಟು ಬಲಪಡಿಸುವ ಭರವಸೆ ನೀಡಿದರು.

ಬಸರಾಳು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ತಿಮ್ಮೆಗೌಡ ಮಾತನಾಡಿ, ಗುಣಮಟ್ಟದ ಹಾಲನ್ನು ಉತ್ಪಾದಕರು ಪೂರೈಸುತ್ತಿರುವುದರಿಂದ ಸಂಘದ ಬೆಳವಣಿಗೆಗೆ ಸಹಕಾರಿಯಾಗಿದೆ. ಸರ್ಕಾರವು ಹಾಲು ಉತ್ಪಾದಕರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಹೈನುಗಾರಿಕೆಯಿಂದಲೇ ಈ ಭಾಗದ ಜನ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೈನುಗಾರಿಕೆ ಮಾಡುವವರಿಗೆ ಸರ್ಕಾರ ಮತ್ತಷ್ಟು ಪ್ರೋತ್ಸಾಹ ಧನ ನೀಡಿದರೆ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮನಮುಲ್ ನಿರ್ದೇಶಕ ಸ್ಥಾನದ ಅಭ್ಯರ್ಥಿ ಕೆಬ್ಬಳ್ಳಿ ರಾಜು ಮಾತನಾಡಿ, ಬಸರಾಳು ಗ್ರಾಮದ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಗೂ ಒಕ್ಕೂಟದಲ್ಲಿ ಉದ್ಯೋಗ ಸಿಗದೆ ವಂಚಿತರಾಗಿದ್ದಾರೆ. ನನ್ನ ಆಯ್ಕೆಯಿಂದ ಈ ಭಾಗದ ಯುವಕರಿಗೆ ಉದ್ಯೋಗ ನೀಡುವುದಲ್ಲದೆ ಹಾಲಿಗೆ ಪ್ರೋತ್ಸಾಹ ಧನ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಈ ಭಾಗದ ಜನರಿಗೆ ತಲುಪಿಸಲು ಬದ್ಧನಾಗಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಶಿಕ್ಷಕರ ಸಂಘದ ರಾಜ್ಯ್ಯಾಧ್ಯಕ್ಷ ನಾಗೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕೃಷ್ಣೆಗೌಡ, ಮುಖಂಡರಾದ ನಿಂಗರಾಜು, ಗರುಡನಹಳ್ಳಿ ಚಂದ್ರು ಭಾಗವಹಿಸಿದ್ದರು.