ಸಾರಾಂಶ
ಕನ್ನಡದಲ್ಲಿ ಸುಲಲಿತವಾಗಿ ವಚನಗಳನ್ನು ಬರೆಯುವ ಮೂಲಕ ಮಾನವನ ಬದುಕಿಗೆ ಪ್ರೇರಕವಾದಂಥ ಸಾಹಿತ್ಯವನ್ನು ಕನ್ನಡಕ್ಕೆ ನೀಡಿದ ಹೆಗ್ಗಳಿಕೆಯ ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ.
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣಕ್ಕೆ ಆಗಮಿಸಿದ ಬಸವ ಸಂಸ್ಕೃತಿ ಅಭಿಯಾನವನ್ನು ಸಡಗರ ಸಂಭ್ರಮದಿಂದ ಸ್ವಾಗತಿಸಲಾಯಿತು.ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರಿಗೆ ಅಖಂಡ ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಒಂದು ವರ್ಷದ ಸವಿನೆನಪಿಗಾಗಿ ಸೆಪ್ಟೆಂಬರ್ 1ರಿಂದ ರಾಜ್ಯಾದ್ಯಂತ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನ ಪಟ್ಟಣದ ಹೃದಯ ಭಾಗದ ಶ್ರೀ ಬಸವೇಶ್ವರ ವೃತ್ತದಲ್ಲಿ ಆಗಮಿಸಿದ ಬಸವ ಸಂಸ್ಕೃತಿ ಅಭಿಯಾನದ ಸ್ತಬ್ಧ ಚಿತ್ರಗಳ ವಾಹನಕ್ಕೆ ಬಸವಾಭಿಮಾನಿಗಳು ಜಯ ಘೋಷದೊಂದಿಗೆ ಬರಮಾಡಿಕೊಂಡರು.
ಪುಷ್ಪಗಿರಿ ಮಹಾಸಂಸ್ಥಾನದ ಪೂಜ್ಯ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಹಾಗೂ ಶರಣರು ಸಮಾಜದಲ್ಲಿ ಅಡಗಿದ್ದ ಅಸಮಾನತೆ ಮೌಢ್ಯ, ಅಂಧಕಾರ ಖಂಡಿಸಿದ್ದರು. ಕನ್ನಡದಲ್ಲಿ ಸುಲಲಿತವಾಗಿ ವಚನಗಳನ್ನು ಬರೆಯುವ ಮೂಲಕ ಮಾನವನ ಬದುಕಿಗೆ ಪ್ರೇರಕವಾದಂಥ ಸಾಹಿತ್ಯವನ್ನು ಕನ್ನಡಕ್ಕೆ ನೀಡಿದ ಹೆಗ್ಗಳಿಕೆಯ ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ, ರಾಜ್ಯ ಸರ್ಕಾರ ಅಖಂಡ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸವಿನೆನಪಿಗಾಗಿ ಬಸವ ಅಭಿಮಾನಿಗಳು, ಮಠಾಧೀಶ್ವರರು ಈಗಾಗಲೇ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 5 ತನಕ ಇಡೀ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನಕ್ಕೆ ಮುಂದಾಗಿದ್ದಾರೆ ಎಂದರು.ಶಾಸಕ ಎಚ್. ಕೆ. ಸುರೇಶ್ ಮಾತನಾಡಿ, ಬಸವಣ್ಣನವರು ನೀಡಿದ ಸಂದೇಶ ಇಡೀ ಮನುಕುಲಕ್ಕೆ ಮಾದರಿಯಾಗಿದೆ. ಸಮಾಜದಲ್ಲಿ ಶೋಷಣೆಗೆ ಒಳಪಟ್ಟವರಿಗೆ ಧ್ವನಿಯನ್ನು ನೀಡಿ ಅವರನ್ನು ಮುಖ್ಯ ವಾಹಿನಿಗೆ ತಂದಂತಹ ಹೆಗ್ಗಳಿಕೆ ಬಸವಣ್ಣನವರಿಗೆ ಸೇರುತ್ತದೆ. ಬಸವಾದಿ ಶರಣರು ಕಾಯಕ ಮತ್ತು ದಾಸೋಹ ಪರಿಕಲ್ಪನೆಯಿಂದ ಶ್ರಮಿಕ ವರ್ಗಕ್ಕೆ ಶಕ್ತಿಯನ್ನು ನೀಡಿದಂತಹ ಮಹಾನ್ ಕಾಯಕ ಯೋಗಿಯಾಗಿದ್ದಾರೆ ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ, ಸಾಣೇಹಳ್ಳಿ ಶ್ರೀಗಳು, ಬಸವ ಮಂದಿರ ಶ್ರೀಗಳು ಸೇರಿ ಸಮಾಜದ ಮುಖಂಡರಾದ ಎ.ಎಸ್.ಬಸವರಾಜು, ಯೋಗೀಶ್, ಅದ್ದೂರಿ ಚೇತನ್ ಕುಮಾರ್, ಹೆಬ್ಬಾಳು ಹಾಲಪ್ಪ, ವಿಂಪು ಸಂತೋಷ್ , ಮದನ್, ಅರುಣ್ ಕುಮಾರ್, ಉಮಾಶಂಕರ್, ಪ್ರಕಾಶ್, ಕೇಬಲ್ ರಾಜಣ್ಣ, ಮೊಗಸವಾರ ಶಿವಕುಮಾರ್, ಗೀತಾ ಶಿವರಾಜ್, ಅನಸೂಯ ಸೇರಿದಂತೆ ಇನ್ನು ಮುಂತಾದ ಬಸವ ಭಕ್ತರು ಭಾಗವಹಿಸಿದ್ದರು.