ಸಾರಾಂಶ
ಅಂದು ಸಂಜೆ 6ಕ್ಕೆ ಮುರಘಾಮಠದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ನಾಡಿನ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಆನಂತರ 8ಕ್ಕೆ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಲಿದ್ದು, ಈ ಎಲ್ಲ ಕಾರ್ಯಕ್ರಮದಲ್ಲಿ ಸರ್ವ ಜನಾಂಗದವರು ಭಾಗವಹಿಸಲಿದ್ದಾರೆ.
ಧಾರವಾಡ: ಸೆ. 12ರಂದು ಬಸವ ಸಂಸ್ಕೃತಿ ಅಭಿಯಾನ ನಡೆಯಲಿದ್ದು, ಬೆಳಗಾವಿಯಿಂದ ಆಗಮಿಸುವ ಬಸವ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲು ಬಸವಾಭಿಮಾನಿಗಳು ಸನ್ನದ್ಧರಾಗಲು ಮುರಘಾಮಠದ ಶ್ರೀ ಡಾ. ಮಲ್ಲಿಕಾರ್ಜುನ ಸ್ವಾಮಿಜಿ ಕರೆ ನೀಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 50ಕ್ಕೂ ಹೆಚ್ಚಿನ ಸಂಖ್ಯೆಯ ಬಸವ ಸಂಘಟನೆ ಸೇರಿದಂತೆ ವಿವಿಧ ಸಮಾಜದ ಪದಾಧಿಕಾರಿಗಳು, ಮುಖಂಡರು, ಸದಸ್ಯರ ಸಹಯೋಗದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಭಿಯಾನ ಆರಂಭವಾಗಿದೆ. ಸೆ. 12ರಂದು ಧಾರವಾಡದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂದು ಬೆಳಗ್ಗೆ 11ಕ್ಕೆ ಮೃತ್ಯುಂಜಯ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ ನಡೆಯಲಿದ್ದು, ಮಧ್ಯಾಹ್ನ 3.30ಕ್ಕೆ ಕಲಾಭವನದಿಂದ ಮುರಘಾಮಠದ ವರೆಗೆ ಬಸವಣ್ಣನವರ ಭಾವಚಿತ್ರ ಮತ್ತು ಧರ್ಮಗ್ರಂಥ ವಚನ ಸಾಹಿತ್ಯದ ಬೃಹತ್ ಮೆರವಣಿಗೆ ಹೊರಡಲಿದೆ ಎಂದರು.ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಇಳಕಲ್ಲ ಸೀರೆ ಧರಿಸಿ ತಲೆ ಮೇಲೆ ವಚನ ಕಟ್ಟು ಹೊತ್ತುಕೊಂಡು ಮಾರ್ಗದುದ್ದಕ್ಕೂ ವಚನ ಪಠಣ ಮಾಡುತ್ತಾ ಸಾಗಲಿದ್ದಾರೆ. ಮಕ್ಕಳಿಂದ ಶರಣರ ವೇಷಭೂಷಣ, ಕಲಾ ತಂಡಗಳು, ಕುದುರೆ ಮೇಲೆ ಶರಣರ ವೇಷಭೂಷಣ, ಯುವಜನರಿಂದ ವಚನ ನೃತ್ಯ, ಭಜನಾ ತಂಡದಿಂದ ವಚನ ಸಂಗೀತ, ವಿವಿಧ ತರಹದ ದೇಶಿ ವಾದ್ಯಮೇಳಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.
ಕುಂಬಳಗೋಡು ಮಠದ ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಅಂದು ಸಂಜೆ 6ಕ್ಕೆ ಮುರಘಾಮಠದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ನಾಡಿನ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಆನಂತರ 8ಕ್ಕೆ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಲಿದ್ದು, ಈ ಎಲ್ಲ ಕಾರ್ಯಕ್ರಮದಲ್ಲಿ ಸರ್ವ ಜನಾಂಗದವರು ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿ.ವಿ. ಕೊಂಗವಾಡ, ನಾಗರಾಜ ಪಟ್ಟಣಶೆಟ್ಟಿ, ಸಿದ್ದರಾಮ ನಡಕಟ್ಟಿ, ಬಸವಂತ ತೋಟದ, ಶಿವಾನಂದ ಶೆಟ್ಟೆಣ್ಣವರ, ಡಾ. ವೀಣಾ ಬಿರಾದಾರ, ರಾಜೇಶ್ವರಿ ಕಟ್ಟಿಮನಿ, ಲತಾ ಮಂಟಾ, ಸವಿತಾ ನಡಕಟ್ಟಿ ಇದ್ದರು.