ಗದಗ: ಹನ್ನೇರಡನೇ ಶತಮಾನದಲ್ಲಿ ಜನಸಾಮಾನ್ಯರ ಬದುಕು ಶೋಚನೀಯವಾಗಿತ್ತು. ಬಸವಾದಿ ಶರಣರ ಕಾಯಕ, ದಾಸೋಹ, ಸಮಾನತೆ ಇಂದು ಬಹಳ ಮುಖ್ಯ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2784ನೇ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದರು.
ಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಿದೆ. 900 ವರ್ಷಗಳ ಹಿಂದೆಯೇ ಸಾಮಾಜಿಕ ಕ್ರಾಂತಿಯನ್ನು ಶರಣರು ಮಾಡಿದ್ದಾರೆ. ಇನ್ನೂ ಮೇಲು ಕೀಳು ತಾರತಮ್ಯ ಮುಂದುವರಿದಿದೆ. ಸಾಮಾಜಿಕ ಅನಿಷ್ಠಗಳಿವೆ. ಇವುಗಳನ್ನು ಹೋಗಲಾಡಿಸಲು ಬಸವಣ್ಣನವರು ಇಷ್ಟಲಿಂಗ ದೀಕ್ಷೆ ಕೊಟ್ಟರು. ಮಹಿಳೆಯರಿಗೆ ಸ್ವಾತಂತ್ರ್ಯ ಕಲ್ಪಿಸಿಕೊಟ್ಟರು. ಅಂತರ್ಜಾತೀಯ ವಿವಾಹ ಮಾಡಿದರು. ತಾರತಮ್ಯ ರಹಿತ ಸಮಾಜ ನಿರ್ಮಾಣ ಮಾಡಿದರು ಎಂದು ತಿಳಿಸಿದರು.ಶಿರಹಟ್ಟಿಯ ಎಫ್.ಎಂ. ಡಬಾಲಿ ಕಾಲೇಜಿನ ಬಿ.ಐ. ಶಿರುಂದ ಮಾತನಾಡಿ, ರಾಜ್ಯ ಸಾಮ್ರಾಜ್ಯದ ಕಾಲದಲ್ಲಿ ರಕ್ಷಣೆಗಾಗಿ, ಕಾಲ್ದಳ, ನೌಕಾದಳ, ಗಜದಳ ನಿಂತಿರುತ್ತಿದ್ದವು. ಹಾಗೆಯೇ ಸಮ ಸಮಾಜದ ರಕ್ಷಣೆಗಾಗಿ ಅಂದು ಶರಣರು, ಇಂದು ಮಠಾಧೀಶರು, ಜಗದ್ಗುರುಗಳು ಅವಿರತವಾಗಿ ಪರಿಶ್ರಮಿಸುತ್ತಿದ್ದಾರೆ. ತನ್ನನ್ನು ತಾನು ಅರಿತು, ಅಹಂಕಾರವನ್ನು ಮರೆತು, ನೈಜ ಬದುಕಿನ ವ್ಯಕ್ತಿತ್ವವೇ ಶರಣ. ಅತ್ಯಲ್ಪ ಅವಧಿಯಲ್ಲಿ ಸಮಾಜದಲ್ಲಿನ ಮೌಢ್ಯದಲ್ಲಿ ಬದಲಾವಣೆ ತರುವುದೇ ಕ್ರಾಂತಿ ಎಂದರು.ಈ ವೇಳೆ ವಚನ ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಮೇಘಾ ಚಂದಪ್ಪನವರ, ವಚನ ಚಿಂತನವನ್ನು ಪೂಜಾ ಹೊನ್ನಳ್ಳಿ ನಡೆಸಿಕೊಟ್ಟರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವೀರಣ್ಣ ಗೋಟಡಕಿ, ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಸದ್ಭಕ್ತರು ಇದ್ದರು. ಐ.ಬಿ.ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.