ಬಸವಣ್ಣ, ಅಂಬೇಡ್ಕರ್ ದೇಶ ಕಂಡ ಮಹಾನ್ ನಾಯಕರು: ಪ್ರಾಂಶುಪಾಲ ಡಿ.ಕೆ.ಮಂಜಯ್ಯ

| Published : Jun 19 2025, 11:50 PM IST

ಬಸವಣ್ಣ, ಅಂಬೇಡ್ಕರ್ ದೇಶ ಕಂಡ ಮಹಾನ್ ನಾಯಕರು: ಪ್ರಾಂಶುಪಾಲ ಡಿ.ಕೆ.ಮಂಜಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಕರ್ತರಿಗೆ ವಾಕ್ ಸ್ವಾತಂತ್ರ್ಯ ಸಿಕ್ಕಿದ್ದು ಅಂಬೇಡ್ಕರ್ ರಚಿಸಿರುವ ಸಂವಿಧಾನದಿಂದ. ಬಸವಣ್ಣನವರು ೧೨ನೇ ಶತಮಾನದಲ್ಲೇ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಾಣಕ್ಕಾಗಿ ಅನುಭವ ಮಂಟಪ ಮೂಲಕ ಶ್ರಮಿಸಿದರು. ಅಂಬೇಡ್ಕರ್ ವಿರಚಿತ ಸಂವಿಧಾನ ಈ ನೆಲದ ಶಕ್ತಿ. ಪ್ರತಿಯೊಬ್ಬರೂ ಅವರನ್ನು ಗೌರವಿಸುತ್ತಾರೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ಗುರುವಾರ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಬಸವೇಶ್ವರರ ಜಯಂತಿ ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಶ್ರೀ ಬಸವೇಶ್ವರರ ಭಾವಚಿತ್ರಗಳಿಗೆ ಭಾಗವಹಿಸಿದ್ದ ಗಣ್ಯರು ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಿ.ಕೆ. ಮಂಜಯ್ಯ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನವನ್ನು ಒಂದು ವರ್ಗಕ್ಕೆ ನೀಡಲಿಲ್ಲ. ಇಡೀ ವಿಶ್ವಕ್ಕೆ ಕೊಡುಗೆ ಆಗಿ ನೀಡಿದ್ದಾರೆ. ಇನ್ನು ಅನುಭವ ಮಂಟಪ ತಂದು ಎಲ್ಲರೂ ಒಂದೇ ಎಂದು ಸಾರಿದ ಜಗಜ್ಯೋತಿ ಬಸವಣ್ಣನವರಾಗಿದ್ದಾರೆ. ದೇಶ ಕಂಡಂಥ ಮಹಾನ್ ನಾಯಕರ ಜಯಂತಿಯನ್ನು ಪತ್ರಕರ್ತರ ಭವನದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು. ಅಂಬೇಡ್ಕರ್ ಕೇವಲ ಒಂದು ಜಾತಿ, ಸಮುದಾಯಗಳಿಗೆ ಸೀಮಿತವಲ್ಲ. ಅವರು ಬರೆದಿರುವಂಥ ಸಂವಿಧಾನದಲ್ಲಿ ಎಲ್ಲಾ ಜಾತಿ, ವರ್ಗಗಳಿಗೆ ಸಮಾನವಾಗಿ ಹಕ್ಕು ನೀಡುವ ಕುರಿತು ಪ್ರಸ್ತಾಪಿಸಿದ್ದಾರೆ. ಅದಕ್ಕಾಗಿಯೇ ಅವರು ಹೋರಾಟ ನಡೆಸಿದರು, ಅವರ ಜಯಂತಿ ಆಚರಣೆ ಔಚಿತ್ಯಪೂರ್ಣವಾಗಿದೆ. ಅಂಬೇಡ್ಕರ್ ಸಮಾಜದ ತುಳಿತಕ್ಕೆ ಒಳಗಾದರೂ ಸಹ ದೊಡ್ಡ ಮಟ್ಟದ ಸಾಧನೆ ಮಾಡಿ ಪತ್ರಿಕಾ ರಂಗದಲ್ಲಿ ಛಾಪು ಮೂಡಿಸಿದರು. ಮೂಕ ನಾಯಕ ಎಂಬ ಪತ್ರಿಕೆ ಹೊರತರುವ ಮೂಲಕ ಸಮಾಜದ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ತಿದ್ದುವ ಕೆಲಸ ಮಾಡಿದರು ಎಂದರು.

ಬಸವಣ್ಣನವರು ನಿತ್ಯ ಕಾಯಕದಲ್ಲಿ ದೇವರನ್ನು ಕಾಣುವಂತೆ, ಕಾಯಕದ ಮೂಲಕ ದೈವತ್ವದ ಪರಿಕಲ್ಪನೆಯನ್ನು ಸಾರಿದಂತಹ ಮಹಾನ್ ಪುರುಷ ಎಂದು ಬಣ್ಣಿಸಿ, ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವ ಪ್ರಯತ್ನವನ್ನು ಶತಮಾನಗಳ ಹಿಂದೆಯೇ ಮಾಡಿದ್ದರು. ಅವರು ಸಹ ತಮ್ಮ ಬದುಕಿನಲ್ಲಿ ನಾನಾ ಸಮಸ್ಯೆ, ಸವಾಲುಗಳನ್ನು ಎದುರಿಸಿದರು, ಆದರೂ ಸಮಾಜದಲ್ಲಿ ಇದ್ದಂಥ ನಾನಾ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು ಎಂದು ಸ್ಮರಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ ಮದನ ಗೌಡ ಮಾತನಾಡಿ, ಯಾವುದೇ ಮಹನೀಯರ, ದಾರ್ಶನಿಕರ ಜಯಂತಿ ಆಚರಿಸಬಾರದು ಎಂದು ಸಂಘದ ಬೈಲಾದಲ್ಲಿ ಇಲ್ಲ. ಹಾಗಾಗಿ ಮೇರು ನಾಯಕರ ಜಯಂತಿ ಯನ್ನು ಪತ್ರಕರ್ತರ ಸಂಘದಲ್ಲಿ ಆಚರಿಸುವುದು, ಆ ಮೂಲಕ ಅವರ ಸಂದೇಶ ಮನನ ಮಾಡಿ ಕೊಳ್ಳುವುದು ಒಳ್ಳೆಯ ಬೆಳವಣಿಗೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣು ಕುಮಾರ್ ಮಾತನಾಡಿ, ಪತ್ರಕರ್ತರಿಗೆ ವಾಕ್ ಸ್ವಾತಂತ್ರ್ಯ ಸಿಕ್ಕಿದ್ದು ಅಂಬೇಡ್ಕರ್ ರಚಿಸಿರುವ ಸಂವಿಧಾನದಿಂದ. ಬಸವಣ್ಣನವರು ೧೨ನೇ ಶತಮಾನದಲ್ಲೇ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಾಣಕ್ಕಾಗಿ ಅನುಭವ ಮಂಟಪ ಮೂಲಕ ಶ್ರಮಿಸಿದರು. ಅಂಬೇಡ್ಕರ್ ವಿರಚಿತ ಸಂವಿಧಾನ ಈ ನೆಲದ ಶಕ್ತಿ. ಪ್ರತಿಯೊಬ್ಬರೂ ಅವರನ್ನು ಗೌರವಿಸುತ್ತಾರೆ. ಆದರೆ ಕೆಲವರು ಅಂಬೇಡ್ಕರ್ ರನ್ನು ಸೀಮಿತಗೊಳಿಸಿ ಕೇವಲ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ನನ್ನ ವಿರೋಧ ಇದೆ ಎಂದು ಹೇಳಿದರು.

ಪ್ರಾಂಶುಪಾಲರಾದ ಡಿ.ಕೆ. ಮಂಜಯ್ಯ ಅವರನ್ನು ಸಂಘದಿಂದ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಉದಯಕುಮಾರ್, ಬಾಳುಗೋಪಾಲ್, ಲೀಲಾವತಿ, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಸಂಪಾದಕರಾದ ಕೆ.ಪಿ.ಎಸ್ .ಪ್ರಮೋದ್, ಬಿ.ಸಿ. ಚೌಡುವಳ್ಳಿ ಜಗದೀಶ್, ವಿವಿಧ ಪತ್ರಿಕೆಗಳ ಸಂಪಾದಕರು, ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಎಚ್.ಟಿ. ಮೋಹನ್ ಕುಮಾರ್ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಮತ್ತೋರ್ವ ಉಪಾಧ್ಯಕ್ಷ ಕೆ.ಎಂ. ಹರೀಶ್ ವಂದಿಸಿದರು.