ಸಾರಾಂಶ
ಬಸವಣ್ಣನವರ ಸಮ ಸಮಾಜ ಕನಸು ನಿಜವಾಗಬೇಕಾದರೆ ನಾವು ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಬಸವಣ್ಣನವರು ಜನಪರ ಹಾಗೂ ಸಮಾಜ ಸುಧಾರಣೆ ಕಾರ್ಯ ಕೈಗೊಂಡಿದ್ದರು.
ಧಾರವಾಡ:
ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಜಾತಿ ಪದ್ಧತಿ ನಿರ್ಮೂಲನೆ, ಮಹಿಳಾ ಸಮಾನತೆ ಮತ್ತು ಆರ್ಥಿಕ ಸಮಾನತೆಗೆ ಹೋರಾಟ ನಡೆಸಿದ್ದರು ಎಂದು ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕ ಡಾ. ಅರುಣಕುಮಾರ ಸಿ. ಹೇಳಿದರು.ಇಲ್ಲಿಯ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಬಸವೇಶ್ವರ ಜಯಂತಿಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಬಸವಣ್ಣನವರ ಸಮ ಸಮಾಜ ಕನಸು ನಿಜವಾಗಬೇಕಾದರೆ ನಾವು ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಬಸವಣ್ಣನವರು ಜನಪರ ಹಾಗೂ ಸಮಾಜ ಸುಧಾರಣೆ ಕಾರ್ಯ ಕೈಗೊಂಡಿದ್ದರು. ಕಾಯಕವೇ ಕೈಲಾಸವೆಂದು ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನೆಡೆಸಿದರು.ಕನ್ನಡ ಸಾಹಿತ್ಯಕ್ಕೆ ಬಸವಣ್ಣನವರ ವಚನಗಳ ಕೊಡುಗೆ ಅಗಾಧ ಎಂದು ಹೇಳಿದರು.ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಹಿರಿಯ ವ್ಯವಸ್ಥಾಪಕ ಡಾ. ಮೋಹನಕುಮಾರ ಥಂಬದ, ಬಸವಣ್ಣನವರ ವಿಚಾರಗಳು ವಿಶ್ವಾದ್ಯಂತ ಹೆಚ್ಚು ಮನ್ನಣೆ ಪಡೆದುಕೊಂಡಿದೆ. ಇವರ ವಚನಗಳು ಸಮಾಜ ಸುಧಾರಣೆಗೆ ದಾರಿ ತೋರುತ್ತದೆ. ಸರಳ ಜೀವನದೊಂದಿಗೆ ಉನ್ನತ ವಿಚಾರಗಳನ್ನು ಹೊಂದಿರುವವರು ಬಸವೇಶ್ವರರು ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ರಾಘವೇಂದ್ರ ನಾಯಕ, ಸಹಾಯಕ ಆಡಳಿತಾಧಿಕಾರಿ ವಿಜಯಲಕ್ಷ್ಮಿ ತೋರಗಲಮಠ, ನರ್ಸಿಂಗ್ ಅಧಿಕ್ಷಕಿ ಗಾಯತ್ರಿ ಶಿಂಧೆ ಮತ್ತಿತರರು ಇದ್ದರು. ಹನುಮಂತ ಮುದೆವಗೋಳ್ ನಿರೂಪಿಸಿದರು. ಕಾವೇರಿ ಕಿತ್ತೂರು ಪ್ರಾರ್ಥಿಸಿದರು. ಅಶೋಕ ಕೋರಿ ಸ್ವಾಗತಿಸಿದರು. ಆರ್.ಎಂ. ತಿಮ್ಮಾಪುರ ವಂದಿಸಿದರು.