ಕನ್ನಡಪ್ರಭ ವಾರ್ತೆ ಆನಂದಪುರ
12ನೇ ಶತಮಾನದ ಬಸವಣ್ಣ ತಮ್ಮ ಕಾಲವನ್ನು ಮೀರಿ 21ನೇ ಶತಮಾನದ ವಿಚಾರಗಳನ್ನು ಹೊಂದಿದ್ದರು. ಅವರ ದೂರದೃಷ್ಟಿ ಸಾಕ್ಷಾಧಾರವಾಗಿವೆ ಎಂದು ಮುರುಘ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ತಿಳಿಸಿದರು.ಅವರು ಸಮೀಪದ ಮುರುಘಾಮಠದಲ್ಲಿ ಮಂಗಳವಾರ ನಡೆದ 600ನೇ ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯವಹಿಸಿ ಆಶೀರ್ವಚಿಸಿ, ಬಸವಣ್ಣನವರು ಪ್ರತಿಯೊಬ್ಬರೂ ಸಮಾನರು ಎಂಬ ವಿಚಾರವನ್ನು ಜಗತ್ತಿಗೆ ಪಸರಿಸಿದ ಶ್ರೇಷ್ಠ ವ್ಯಕ್ತಿ. ಇಂತಹ ಮಹಾನ್ ವ್ಯಕ್ತಿಯ ಆದರ್ಶದಂತೆ ಮಠಮಾನ್ಯಗಳು ದಾಸೋಹದ ಮೂಲಕ ಎಲ್ಲರೂ ಒಂದೇ ಎಂಬ ಮನೋಭಾವದಿಂದ ವಚನ ಶಿಕ್ಷಣ ನೀಡುತ್ತಿದೆ. ಭಾರತೀಯ ಸಮಾಜದ ಎಲ್ಲಾ ವರ್ಗಗಳ ಮೇಲೆ ಹೆಚ್ಚು ಪ್ರಭಾವವನ್ನು ಬೀರಿ ಸಾಮಾಜಿಕ ಚಳುವಳಿ ಬಸವಣ್ಣನವರ ನೇತೃತ್ವದಲ್ಲಿ ನಡೆದಿರುವುದು ಗಮನಾರ್ಹವಾಗಿದೆ ಎಂದರು.
ಹೊಳಲ್ಕೆರೆ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಈ.ವಿ ಮಂಜುನಾಥ್ ಉಪನ್ಯಾಸ ನೀಡಿ, ಬದುಕಿನ ಮೌಲ್ಯಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಬದುಕಿದ ಶರಣರು ಎಷ್ಟು ಉದಾತ್ತ ಸಾಮಾಜಿಕ ಚಿಂತಕರು ಮತ್ತು ಕಳಕಳಿಯನ್ನು ಹೊಂದಿದ್ದವರು ಎನ್ನುವುದನ್ನು ವಚನಗಳ ಮೂಲಕ ತಿಳಿಯಬಹುದಾಗಿದೆ. ಎಲ್ಲಾ ಕಾಲದಲ್ಲೂ ಅನೇಕ ಚಳುವಳಿ ನಡೆದವು, ಆದರೆ ಆತ್ಮಕ್ಕಾಗಿ, ಅಂತರಾಳದ ಶುದ್ದಿಗಾಗಿ ಚಳುವಳಿಗಳು ನಡೆದಿದ್ದು, ವಚನ ಧರ್ಮದ ಕಾಲದಲ್ಲಿ ಮಾತ್ರ. ಕಾಯಕದ ಮಹತ್ವವನ್ನು ಕಲಿಸಿದವರು ಶರಣರು ಇಂತಹ ಕಾಯಕ ಮನೋಭಾವವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಕೀಲ ಎಂ.ಬಿ. ಪುಟ್ಟಸ್ವಾಮಿ ಉಪಸ್ಥಿತರಿದ್ದರು.