ಸಾರಾಂಶ
ಕನ್ನಡಪ್ರಭ ವಾರ್ತೆ ಗದಗ
ಬಸವಾದಿ ಶಿವಶರಣರು ಜಾತಿ, ವರ್ಗ, ವರ್ಣ, ಲಿಂಗಭೇದವನ್ನು ತೊಡೆದು ಹಾಕಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಕನಸು ಕಂಡಿದ್ದರು. ಬಸವಣ್ಣನವರು ಕಾಯಕ, ದಾಸೋಹ, ಸಮಾನತೆಯ ಹರಿಕಾರರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.ನಗರದ ಜ.ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ ೨೬೮೭ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಜಾಗತಿಕ ಇತಿಹಾಸದಲ್ಲಿ ದಾಖಲೆಯಾಗುವಂತಹ ವಿನೂತನ ಸಮಾಜೋಧಾರ್ಮಿಕ ಚಳವಳಿಯನ್ನು ಬಸವಾದಿ ಶಿವಶರಣರು ನಡೆಸಿದರು. ಸಾಮಾಜೋಧಾರ್ಮಿಕ ಚಳವಳಿ ಜಾಗತಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಕಾಲಘಟ್ಟ. ಸಕಲ ಜೀವಾತ್ಮರಿಗೆ ಲೇಸು ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು. ಸಮಾಜದಲ್ಲಿ ಸಕಲ ಜೀವಿಗಳಲ್ಲಿ ಶ್ರೇಷ್ಠತೆಯನ್ನು ಬಯಸುವ ಪ್ರತಿಯೊಬ್ಬ ವ್ಯಕ್ತಿಯೂ ಶರಣರೇ. ಎನಗಿಂತ ಕಿರಿಯರಿಲ್ಲ, ಶಿವಭಕ್ತಿರಿಗಿಂತ ಹಿರಿಯರಿಲ್ಲ ಎಂದು ಬಸವಣ್ಣನವರು ಎಲ್ಲರಲ್ಲಿಯೂ ಸಮಾನತೆಯನ್ನು ಕಂಡಿದ್ದಾರೆ ಎಂದರು.ಡಾ. ರಮೇಶ ಕಲ್ಲನಗೌಡರ ಉಪನ್ಯಾಸ ನೀಡಿ, ೧೨ನೇ ಶತಮಾನ ಜಗತ್ತಿನಲ್ಲಿ ಅದ್ಭುತ ಕ್ರಾಂತಿಗೆ ಸಾಕ್ಷಿಯಾದ ಕಾಲ. ವಿಶ್ವಗುರು ಬಸವಣ್ಣನವರು ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು. ಅತ್ಯಂತ ಪ್ರಿತ್ಯಾಧಾರದಿಂದ ಡೋಹರ ಕಕ್ಕಯ್ಯನವರನ್ನು ಬಸವಣ್ಣನವರು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ. ಬಸವಾದಿ ಶಿವಶರಣರು ಕಾಯಕ, ದಾಸೋಹ, ಸಮಾನತೆ ತತ್ವಗಳನ್ನು ಸಾರಿದ್ದಾರೆ ಎಂದರು.
ಈ ವೇಳೆ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸದಸ್ಯರಾಗಿ ನೇಮಕಗೊಂಡ ನಿಮಿತ್ತ ಸಾಹಿತಿ ಡಾ. ಅರ್ಜುನ ಗೊಳಸಂಗಿ, ಜಾನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ ಹಾಗೂ ಕರ್ನಾಟಕ ಬಂಜಾರ ಅಕಾಡೆಮಿಗೆ ಸದಸ್ಯರಾಗಿ ನೇಮಕಗೊಂಡ ನಿಮಿತ್ತ ಜಾನಪದ ಕಲಾವಿದೆ ಸಾವಿತ್ರಿಬಾಯಿ ಲಮಾಣಿ ಅವರನ್ನು ಸನ್ಮಾನಿಸಿದರು.ಸುಮತಿ ಮುರಗೋಡ ವಚನ ಸಂಗೀತ ಹಾಡಿದರು. ಗುರುನಾಥ ಸುತಾರ ತಂಡದವರು ತಬಲಾ ಮತ್ತು ಹಾರ್ಮೋನಿಯಂ ಸಾಥ್ ನೀಡಿದರು. ಧರ್ಮಗ್ರಂಥ ಪಠಣವನ್ನು ಶ್ರೀಗಿರಿ ಗಜಾನನ ವೆರ್ಣೇಕರ, ವಚನ ಚಿಂತನೆಯನ್ನು ಪೂಜಾ ಗಜಾನನ ವೆರ್ಣೇಕರ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಕೊಂಡಿದ್ದ ಚನ್ನಬಸಪ್ಪ ಅಂಗಡಿ ಅವರನ್ನು ಪೂಜ್ಯರು ಸನ್ಮಾನಿಸಿದರು.ಡೋಹರ ಸಮಾಜದ ಕಾರ್ಯದರ್ಶಿ ಮೋಹನ ಗಜಾಕೋಶ, ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರೂಪಾಕ್ಷಪ್ಪ ಅರಳಿ, ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.