- ಪುರಸಭೆ ಕಚೇರಿಯಲ್ಲಿ ಬಸವ ಜಯಂತಿ ಆಚರಣೆ

ಕನ್ನಡಪ್ರಭ ವಾರ್ತೆ, ಬೀರೂರು

ಬಸವಣ್ಣನವರು ಸಂಸತ್ತಿನ ಪರಿಕಲ್ಪನೆ ಮೂಡಿಸಿದ ಮಹಾ ಜ್ಞಾನಿ, ಕಾಯಕ ಜೀವಿಗಳನ್ನು ಸಂಘಟಿಸುವ ಮೂಲಕ ಬಸವಣ್ಣನವರು ದುಡಿಯುವ ವರ್ಗದ ಮೊದಲ ನಾಯಕರಾದರು. ಕಾಯಕವೇ ಕೈಲಾಸ ನುಡಿದಂತೆ ನಡೆದಾಗ ಸಮಾಜ ದಲ್ಲಿ ಒಳ್ಳೆಯ ಬೆಳವಣಿಗೆ ಕಾಣಲು ಸಾಧ್ಯ ಎಂಬುದನ್ನು ಸಾರಿದವರು ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಹೇಳಿದರು,

ಪುರಸಭೆ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. 12ನೇ ಶತಮಾನದ ಸಾಮಾಜಿಕ ಪರಿವರ್ತನೆ ಮಹಾನ್ ಚೇತನವಾಗಿ ಉದಯಿಸಿದ ಕ್ರಾಂತಿ ಕಾರಿ ಬಸವಣ್ಣ ವಿಶ್ವದಲ್ಲಿ ಮೊದಲ ಬಾರಿಗೆ ಸಮೂಹ ನಾಯಕತ್ವದ ಪರಿಕಲ್ಪನೆ ಸಾಕಾರಗೊಳಿಸಿದವರು. ಅಲ್ಲಿಯವರೆಗೂ ಜಗತ್ತಿನ ಯಾವ ದಾರ್ಶನಿಕನಿಗೂ ಸಮೂಹ ನಾಯಕತ್ವದ ಕಲ್ಪನೆ ಮೂಡಿರಲಿಲ್ಲ. ತಮ್ಮ ಸಮಾನತೆ ಅಂಶಗಳ ನ್ನೊಳಗೊಂಡ ಸಮಾಜವನ್ನು ಸಾಮಾಜಿಕ ಅಸಮಾನತೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ ಪ್ರಾರಂಭಿಸಿದ ಚಿಂತನೆ ಎಲ್ಲಾ ಕಾಲಕ್ಕೂ ಮಾನ್ಯವಾದುದು. ಸ್ತ್ರೀ ಸಮಾನತೆ ಆಧ್ಯತೆ ನೀಡಿ ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಸಾರಿದವರು ಬಸವಣ್ಣ ಎಂಬುದನ್ನು ಶ್ರೇಷ್ಠತೆಯನ್ನು ಹುಟ್ಟಿನಿಂದ ಅಳಯದೇ ಸಾಧನೆ ಮಾನದಂಡವಾಗಿ ಸ್ವೀಕರಿಸಿ ಅವರ ನಡೆ ನುಡಿಗಳನ್ನು ಅನುಕರಿಸಿದಾಗ ಉತ್ತಮ ಸಮಾಜ ನಿರ್ಮಾಣವಾಗಬಲ್ಲದು ಎಂಬುದಕ್ಕೆ ತಮ್ಮ ಅನುಭವ ಮಂಟಪದಲ್ಲಿ ಎಲ್ಲಾ ವರ್ಗದವರಿಗೆ ನೀಡಿದ್ದ ಪ್ರಾತಿನಿಧ್ಯವೇ ಸಾಕ್ಷಿ. ಇಷ್ಟಲಿಂಗದ ಜನಕರು ಬಸವಣ್ಣನವರು ಎಂದರು.

ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್ ಮಾತನಾಡಿ, ಇಷ್ಟಲಿಂಗಧಾರಣೆ ಮೂಲಕ ಸಾಮಾಜಿಕ ಸಮಾನತೆ ಬಿತ್ತಲು ಪ್ರಯತ್ನಿಸಿದ ಬಸವಣ್ಣ ಅನುಭವ ಮಂಟಪದ ಮೂಲಕ ಸಮಾಜದಲ್ಲಿ ವೈಚಾರಿಕ ಕ್ರಾಂತಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಕಾಯಕ ಮತ್ತು ದಾಸೋಹ ತತ್ವಗಳಡಿ ಶ್ರಮದ ದುಡಿಮೆ ಮಹತ್ವ ಸಾರಿದವರು. ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬಾಳಬೇಕೆಂಬ ಧ್ಯೇಯವಾಗಿತ್ತು. ಆದ್ದರಿಂದ ಅವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಂಡು ಪುನೀತರಾಗೋಣ ಎಂದರು.


ಆಶ್ರಯ ಸಮಿತಿ ಸದಸ್ಯ ಬಿ.ಜಿ.ಮೈಲಾರಪ್ಪ, ಪೌರ ನೌಕರರ ಸಂಘದ ಅಧ್ಯಕ್ಷೆ ಜಯಮ್ಮ, ಲಕ್ಷ್ಮಿದೇವಿ ಮಾತನಾಡಿದರು. ಲೋಕೇಶಪ್ಪ, ಪುರಸಭೆ ಸಿಬ್ಬಂದಿ ಗಿರಿರಾಜ್, ಸ್ವರೂಪ, ಕರಿಯಪ್ಪ, ಲೋಕೇಶಪ್ಪ, ಕುಮಾರಿ ಸೇರಿದಂತೆ ಮತ್ತಿತರಿದ್ದರು.

20 ಬೀರೂರು 1

ಬೀರೂರಿನ ಪುರಸಭೆ ಕಚೇರಿಯಲ್ಲಿ ಸೋಮವಾರ ಸಾಂಸ್ಕೃತಿಕ ನಾಯಕ ಬಸವಣ್ಣ ಜಯಂತಿ ಆಚರಣೆಯಲ್ಲಿ ಮುಖ್ಯಾಧಿಕಾರಿ ಜಿ.ಪ್ರಕಾಶ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಜಯಮ್ಮ ಸೇರಿದಂತೆ ಮತ್ತಿತರಿದ್ದರು.