ಮಹಿಳೆಯರಿಗೆ ಗೌರವ ಕೊಡಬೇಕು ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಪುರುಷರಂತೆ ಮಹಿಳೆಯರಿಗೂ ಸಮಾನತೆ ನೀಡಬೇಕು ಎನ್ನುವ ಉದ್ದೇಶ ಇಂದು ಮಖಾಡೆ ಮಲಗಿದ್ದು, ನಾವು ಯಾವ ಕಾಲದಲ್ಲಿ ಇದ್ದೇವೆ ಎನ್ನುವ ಪ್ರಶ್ನೆ ಎದುರಾಗುತ್ತಿದೆ.

ಹುಬ್ಬಳ್ಳಿ:

12ನೇ ಶತಮಾನದಲ್ಲಿಯೇ ಬಸವಣ್ಣನವರು ಸಮಾನತೆಯ ಸಂದೇಶ ಸಾರಿದ್ದರು. ಆದರೆ, ಅದು ಇಂದಿಗೂ ಈಡೇರಿಲ್ಲ. ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಬೇಕು ಎನ್ನುವ ನಿರ್ಧಾರವೂ ಈಡೇರಲಿಲ್ಲ ಎಂದು ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ವಿಷಾಧ ವ್ಯಕ್ತಪಡಿಸಿದರು.

ಶನಿವಾರ ಇಲ್ಲಿನ ಮೂರುಸಾವಿರಮಠದ ಆವರಣದಲ್ಲಿ ವೀರಶೈವ ಸಂಘಟನಾ ಸಮಿತಿ ಮತ್ತು ಬಸವ ಜಯಂತಿ ಉತ್ಸವ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರಿಗೆ ಗೌರವ ಕೊಡಬೇಕು ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಪುರುಷರಂತೆ ಮಹಿಳೆಯರಿಗೂ ಸಮಾನತೆ ನೀಡಬೇಕು ಎನ್ನುವ ಉದ್ದೇಶ ಇಂದು ಮಖಾಡೆ ಮಲಗಿದ್ದು, ನಾವು ಯಾವ ಕಾಲದಲ್ಲಿ ಇದ್ದೇವೆ ಎನ್ನುವ ಪ್ರಶ್ನೆ ಎದುರಾಗುತ್ತಿದೆ. ಬಸವಣ್ಣ ಮಹಿಳೆಯರಿಗೆ ಯಾವ ಸ್ಥಾನ ನೀಡಿದ್ದರು ಎನ್ನುವುದನ್ನು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ಮನುಷ್ಯ ಜನ್ಮ ಪವಿತ್ರವಾಗಿದ್ದು, ಪವಿತ್ರ ಕಾರ್ಯದಲ್ಲಿ ತೊಡಗಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು. ದೇವರು ಅಪ್ರತಿಮ, ಎಲ್ಲ ಕಡೆಯೂ ಅವನಿದ್ದಾನೆ. ಅವನಲ್ಲಿ ಭಕ್ತಿಯಿಂದ ಶರಣಾದರೆ, ಬದುಕನ್ನು ಮುಕ್ತಿಯೆಡೆಗೆ ಕೊಂಡೊಯ್ಯುತ್ತಾನೆ. ಗುರು ಶಿಷ್ಯ ಪರಂಪರೆ ಕಡಿಮೆಯಾಗಿದ್ದು, ಶಿಷ್ಯರಿಗೆ ಗುರುವಿನ ಬಗ್ಗೆ ನಿಷ್ಠೆಯೂ ಇಲ್ಲವಾಗಿದೆ. ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಸಿಗಬೇಕು ಎಂದು ಹೇಳಿದರು.

ಬಸವ ಸಮಿತಿ ಅಧ್ಯಕ್ಷ ಪ್ರವೀಣ ಕುಬಸದ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಸಾವುಕಾರ, ಅಶೋಕ ಕಾಟವೆ, ಚನ್ನಬಸಪ್ಪ ಧಾರವಾಡಶೆಟ್ಟರ್‌, ಶಿವು ಮೆಣಸಿನಕಾಯಿ, ಪೂಜಾ ಶೇಜವಾಡಕರ, ಸುಮಿತ್ರಾ ಗುಂಜಾಳ, ಗಂಗಾಧರ ಗಂಜಿ, ಪ್ರೀತಂ ಅರಕೇರಿ, ಚೇತನ ಹಿರೇಮಠ, ಜಗದೀಶ ಬುಳ್ಳಾನವರ ಸೇರಿದಂತೆ ಹಲವರಿದ್ದರು.